ಪಾಟ್ನಾ, ಆ.3: ಬಿಹಾರದ ಬ್ಯಾಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಯಲ್ಲಿ ಜನ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಮುನ್ನಡೆ ಸಾಧಿಸಿದ್ದು, ಈ ಮುನ್ನಡೆ ಅಂತಿಮ ಫಲಿತಾಂಶದವರೆಗೆ ಮುಂದುವರಿದರೆ ಬಿಜೆಪಿಯ ಸುಮಾರು 35 ವರ್ಷಗಳ ಭದ್ರಕೋಟೆ ಕುಸಿಯಲಿದೆ.
ಬ್ಯಾಂಕಿಪುರ ಕ್ಷೇತ್ರವನ್ನು ಕಳೆದ ಮೂರು ದಶಕಗಳಿಂದ ಬಿಜೆಪಿ ತನ್ನ ಭದ್ರಕೋಟೆಯಾಗಿ ಉಳಿಸಿಕೊಂಡಿತ್ತು. ಪ್ರಶಾಂತ್ ಕಿಶೋರ್ ಗೆಲುವು ಸಾಧಿಸಿದರೆ, ಅದು ಜನ ಸುರಾಜ್ ಪಕ್ಷದ ಇದುವರೆಗಿನ ಅತಿದೊಡ್ಡ ಚುನಾವಣಾ ಯಶಸ್ಸಾಗುವುದರ ಜೊತೆಗೆ, ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯ ರಾಜಕೀಯ ಸಮೀಕರಣಗಳ ಮೇಲೂ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ಉಪಚುನಾವಣೆಯನ್ನು ಪ್ರತಿಷ್ಠೆಯ ಕಣವೆಂದು ಪರಿಗಣಿಸಿದ್ದ ಬಿಜೆಪಿ, ಆರಂಭದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿ ಅಂತಿಮವಾಗಿ ನೀರಜ್ ಕುಮಾರ್ ಸಿನ್ಹಾ ಅವರನ್ನು ಕಣಕ್ಕಿಳಿಸಿತ್ತು. ಆದರೆ ಪ್ರಶಾಂತ್ ಕಿಶೋರ್ ಅವರ ಜನಪ್ರಿಯತೆ ಮತ್ತು ಪ್ರಚಾರದ ಎದುರು ಬಿಜೆಪಿ ಕಠಿಣ ಸವಾಲು ಎದುರಿಸಿತು.
ಬಿಜೆಪಿ ಹಾಗೂ ಆರ್ಜೆಡಿ ತಮ್ಮ ಪೂರ್ಣ ಪ್ರಮಾಣದ ಪ್ರಚಾರ ಆರಂಭಿಸುವುದಕ್ಕೂ ಸುಮಾರು ಎರಡು ತಿಂಗಳು ಮುಂಚೆಯೇ ಪ್ರಶಾಂತ್ ಕಿಶೋರ್ ಬ್ಯಾಂಕಿಪುರದಲ್ಲಿ ಪ್ರಚಾರ ಆರಂಭಿಸಿದ್ದರು. ಸಾರ್ವಜನಿಕ ಸಭೆಗಳು, ಮನೆ-ಮನೆ ಸಂಪರ್ಕ, ಬೂತ್ ಮಟ್ಟದ ಸಂಘಟನೆ ಬಲಪಡಿಸುವ ಮೂಲಕ ಅವರು ಆರಂಭದಲ್ಲೇ ಚುನಾವಣಾ ಅಖಾಡದಲ್ಲಿ ಮುನ್ನಡೆ ಸಾಧಿಸಿದ್ದರು.
ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಸುಮಾರು 40ಕ್ಕೂ ಹೆಚ್ಚು ಪ್ರಮುಖ ಪ್ರಚಾರಕರನ್ನು ಹಾಗೂ ಸಾವಿರಾರು ಕಾರ್ಯಕರ್ತರನ್ನು ನಿಯೋಜಿಸಿತ್ತು. ಪಕ್ಷದ ಹಿರಿಯ ನಾಯಕರು ಕೊನೆಯ ಹಂತದಲ್ಲಿ ವ್ಯಾಪಕ ಪ್ರಚಾರ ನಡೆಸಿದರೂ, ಮತ ಎಣಿಕೆ ಪ್ರವೃತ್ತಿಯಲ್ಲಿ ಪ್ರಶಾಂತ್ ಕಿಶೋರ್ ಮುನ್ನಡೆ ಸಾಧಿಸಿದ್ದಾರೆ.
ಈ ಫಲಿತಾಂಶವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರಿಗೂ ರಾಜಕೀಯ ಹಿನ್ನಡೆಯಾಗುವ ಸಾಧ್ಯತೆ ಇದೆ. ಬ್ಯಾಂಕಿಪುರ ಕ್ಷೇತ್ರದಿಂದ ಅವರು ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಬಳಿಕ ರಾಷ್ಟ್ರೀಯ ರಾಜಕೀಯಕ್ಕೆ ತೆರಳಿದ್ದರು. ಈ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಿರದಿದ್ದರೂ, ಕ್ಷೇತ್ರದಲ್ಲೇ ಉಳಿದು ಪಕ್ಷದ ಪರವಾಗಿ ಸಕ್ರಿಯ ಪ್ರಚಾರ ನಡೆಸಿದ್ದರು.
ಚುನಾವಣಾ ಪ್ರಚಾರದ ವೇಳೆ ಪ್ರಶಾಂತ್ ಕಿಶೋರ್, ಬ್ಯಾಂಕಿಪುರ ಉಪಚುನಾವಣೆಯನ್ನು “ಸಮ್ರಾಟ್ ಚೌಧರಿ ಸರ್ಕಾರದ ಜನಾಭಿಪ್ರಾಯ ಸಂಗ್ರಹ” ಎಂದು ಬಣ್ಣಿಸಿದ್ದರು. ಉದ್ಯೋಗ, ಶಿಕ್ಷಣ, ಸುಶಾಸನ ಸೇರಿದಂತೆ ಯುವಕರ ಸಮಸ್ಯೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಮೊದಲ ಬಾರಿಗೆ ಮತ ಚಲಾಯಿಸುವ ಮತದಾರರು ಹಾಗೂ ಯುವಜನರನ್ನು ಸೆಳೆಯುವ ಪ್ರಯತ್ನ ನಡೆಸಿದ್ದರು. ಭೋಜ್ಪುರ ಎನ್ಕೌಂಟರ್ನಲ್ಲಿ ಭಾರತ್ ತಿವಾರಿ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಈ ಉಪಚುನಾವಣೆ ನಡೆದಿದ್ದು, ಈ ವಿಚಾರವೂ ಪ್ರಚಾರದ ವೇಳೆ ಪ್ರಮುಖ ರಾಜಕೀಯ ವಿಷಯವಾಗಿತ್ತು.
ಅಂತಿಮ ಫಲಿತಾಂಶದಲ್ಲೂ ಪ್ರಶಾಂತ್ ಕಿಶೋರ್ ಗೆಲುವು ಸಾಧಿಸಿದರೆ, ಜನ ಸುರಾಜ್ ಪಕ್ಷವು ಬಿಹಾರದಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಲಿದೆ. ಜೊತೆಗೆ ಪ್ರಶಾಂತ್ ಕಿಶೋರ್ ಮೊದಲ ಬಾರಿಗೆ ಬಿಹಾರ ವಿಧಾನಸಭೆ ಪ್ರವೇಶಿಸಿ, ಸದನದೊಳಗೆ ನೇರವಾಗಿ ಜನಪರ ವಿಷಯಗಳನ್ನು ಪ್ರಸ್ತಾಪಿಸುವ ಅವಕಾಶ ಪಡೆಯಲಿದ್ದಾರೆ.
