ಬೆಂಗಳೂರು,ಆ.3- ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ 22 ವರ್ಷಗಳ ನಂತರ ಸಚಿವ ಸ್ಥಾನ ಒಲಿದಿದೆ. 5 ಬಾರಿ ಶಾಸಕರಾಗಿರುವ ಎಚ್.ಸಿ.ಬಾಲಕೃಷ್ಣ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ನೂತನ ಸಚಿವರಾಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಆ ಮೂಲಕ 22 ವರ್ಷಗಳ ನಂತರ ಮಾಗಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಂತಾಗಲಿದೆ. ಅವರ ತಂದೆ ಹುಲಿಕಟ್ಟೆ ಜಿ.ಚನ್ನಪ್ಪ ಅವರು 1972, 1983 ಹಾಗೂ 1985 ರಲ್ಲಿ ಮಾಗಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ದಿ.ಎಸ್.ಆರ್.ಬೊಮಾಯಿಯವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಲ್ಪಾವಧಿಗೆ ಹುಲಿಕಟ್ಟೆ ಚನ್ನಪ್ಪ ಅವರು ಸಚಿವರಾಗಿದ್ದರು. 7 ದಿನಗಳ ಕಾಲ ಸಚಿವರಾಗಿದ್ದರು. ಅವರು ಸಚಿವರಾಗಿದ್ದಾಗಲೇ ಸರ್ಕಾರ ಪತನವಾಗಿತ್ತು. ಅನಂತರ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ದಿ.ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವರಾಗಿದ್ದರು.
2004 ರಿಂದ ಇಲ್ಲಿಯವರೆಗೆ ಮಾಗಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಿರಲಿಲ್ಲ.
ಎಚ್.ಸಿ.ಬಾಲಕೃಷ್ಣ ಅವರು 1994 ರಲ್ಲಿ ಬಿಜೆಪಿಯಿಂದ ಮಾಗಡಿ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದು, 2004, 2008, 2013 ರಲ್ಲೂ ಸತತವಾಗಿ ಜೆಡಿಎಸ್ನಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು. 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ.ಶಾಸಕರಾಗಿರುವ ಬಾಲಕೃಷ್ಣ ಅವರು ಇಂದು ಸಂಜೆ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
