Homeರಾಜ್ಯನಾಟಕೀಯ ಬೆಳವಣಿಗಗಳ ಬಳಿಕ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರು

ನಾಟಕೀಯ ಬೆಳವಣಿಗಗಳ ಬಳಿಕ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರು

19 MLAs take oath as new ministers

ಬೆಂಗಳೂರು, ಆ.3- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮಂತ್ರಿ ಮಂಡಲದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಇಂದು ನಡೆದಿದ್ದು, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ 19 ಮಂದಿ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಲೋಕಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನೂತನ ಸಚಿವರು ಅಧಿಕಾರದ ಗೌಪ್ಯತೆ ಮತ್ತು ಪ್ರತಿಜ್ಞಾನ ವಿಧಿ ಸ್ವೀಕರಿಸಿದರು. ಕಲ್ಬುರ್ಗಿ ಜಿಲ್ಲೆ ಜೇವರ್ಗಿ ಕ್ಷೇತ್ರದ ಅಜಯ್‌ಸಿಂಗ್‌ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ, ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಲಕ್ಷ್ಮಣ ಸವದಿ, ಶಿವಮೊಗ್ಗ ಜಿಲ್ಲೆ ಸೊರಬ ಮಧುಬಂಗಾರಪ್ಪ, ದಾವಣಗೆರೆ ಉತ್ತರ ಕ್ಷೇತ್ರದ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌‍, ಬಳ್ಳಾರಿ ಕ್ಷೇತ್ರದ ಬಿ.ನಾಗೇಂದ್ರ, ಚಾಮರಾಜನಗರ ಕ್ಷೇತ್ರದ ಪುಟ್ಟರಂಗಶೆಟ್ಟಿ, ಚಿತ್ರದುರ್ಗದ ಜಿಲ್ಲೆ ಚಳ್ಳಕೆರೆ ಕ್ಷೇತ್ರ ಟಿ.ರಘುಮೂರ್ತಿ, ಹಾವೇರಿ ಕ್ಷೇತ್ರದ ರುದ್ರಪ್ಪ ಮಾನಪ್ಪ ಲಮಾಣಿ, ಹಾಸನ ಜಿಲ್ಲೆಯ ಅರಸೀಕೆರೆ ಕೆ.ಎಂ.ಶಿವಲಿಂಗೇಗೌಡ, ಕೊಪ್ಪಳ ಜಿಲ್ಲೆ ಕನಕಗಿರಿ ಶಾಸಕ ಶಿವರಾಜ ತಂಗಡಗಿ ದೇವರ ಹೆಸರಿನಲ್ಲಿಶ್ರದ್ಧಾಪೂರ್ವಕವಾಗಿ ಅಧಿಕಾರ ಗೌಪ್ಯತಾ ಪ್ರಮಾಣ ವಚನ ಸ್ವೀಕರಿಸಿದರು. ದಾವಣಗೆರೆ ಜಿಲ್ಲೆ ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್‌‍.ಬಸವಂತಪ್ಪ ದೇವರ ಮತ್ತು ಬಸವೇಶ್ವರರ ಹೆಸರಿನಲ್ಲಿ, ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಎನ್‌‍. ಚೆಲುವರಾಯಸ್ವಾಮಿ ದೇವರು ಮತ್ತು ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶಾಸಕರಾದ ಬಸವರಾಜರಾಯರೆಡ್ಡಿ, ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಕಲಗಟಗಿ ಕ್ಷೇತ್ರದ ಸಂತೋಷ್‌ ಲಾಡ್‌, ಶಿವಾಜಿನಗರ ರಿಜ್ವಾನ್‌ ಹರ್ಷದ್‌ ಶ್ರದ್ಧಾ ಪೂರ್ವಕವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರೆ, ಮಂಡ್ಯ ಜಿಲ್ಲೆಯ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಡಾ.ಬಾಬಾಸಾಹೇಬರ ಮತ್ತು ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಬಾಗಲಕೋಟೆ ಜಿಲ್ಲೆ ಹುನಗುಂದ ವಿಜಯಾನಂದ ಶಿವಶಂಕರಪ್ಪ ಕಾಶಪ್ಪನವರ್‌ ಕೂಡಲ ಸಂಗಮೇಶ್ವರ, ಬುದ್ಧ ಬಸವ, ಅಂಬೇಡ್ಕರ್, ಭಾರತದ ಸಂವಿಧಾನದ ಮತ್ತು ದೇವರ ಹೆಸರಿನಲ್ಲಿಪ್ರತಿಜ್ಞಾವಿಧಿ ಸ್ವೀಕರಿಸಿದರು.

ಬೆಂಗಳೂರಿನ ಚಾಮರಾಜಪೇಟೆ ಬಿ.ಜೆಡ್‌.ಜಮೀರ್‌ ಅಹಮದ್‌ ಖಾನ್‌ ಇಂಗ್ಲಿಷ್‌ನಲ್ಲಿ ಅಲ್ಲಾ ಮತ್ತು ತಾಯಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದರು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವೆರ್‌ ಉಪಸ್ಥಿತರಿದ್ದರು. ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌‍, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಮತ್ತಿತರರು ಭಾಗವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷಗಳ ನಾಯಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಸರಿಯಾಗಿ ಎರಡು ತಿಂಗಳಾಗಿದ್ದು, ಎರಡನೇ ಹಂತದ ಸಂಪುಟ ವಿಸ್ತರಣೆ ಬಳಿಕವೂ ಒಂದು ಸ್ಥಾನ ಉಳಿದಿದೆ.

ಮೊದಲ ಹೈಕಮಾಂಡ್‌ ರವಾನಿಸಿದ್ದ ಪಟ್ಟಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿಧಾನ ಪರಿಷತ್‌ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ಸಚಿವರಾಗಲಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಎನ್‌.ಎಸ್‌‍.ಬೋಸರಾಜ್‌‍, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ,ಉಮಾಶ್ರಿ ಅವರ ತೀವ್ರ ಪೈಪೋಟಿ ನೀಡಿದ್ದರಿಂದ ಒಂದು ಸ್ಥಾನ ಬಾಕಿ ಉಳಿಸಿಕೊಳ್ಳಲಾಗಿದೆ.
ಇಂದಿನ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗಾಯತ್ರಿ ಶಾಂತನಗೌಡ ಅಧಿಕಾರ ಗೌಪ್ಯತಾ ಪ್ರಮಾಣ ವಚನ ಸ್ವೀಕರಿಸಲಿಲ್ಲ. ಈ ಮೂಲಕ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲೂ ಮಹಿಳಾ ಪ್ರಾತಿನಿಧ್ಯ ಇಲ್ಲವಾಗಿದೆ. ಡಿ.ಕೆ.ಶಿವಕುಮಾರ್‌ ಅವರ ಸಂಪುಟ ಕೇವಲ ಪುರಷ ಪ್ರಾತಿನಿಧ್ಯ ಹೊಂದಿದೆ.

ಕಾಂಗ್ರೆಸ್‌‍ ಹೈಕಮಾಂಡ್‌ ಮೊದಲ ಹಂತದಲ್ಲಿ ರವಾನಿಸಿದ್ದ ಪಟ್ಟಿಯಲ್ಲಿ ಹೆಸರಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಕ್ಷೇತ್ರದ ಮಂಕಾಳ ವೈದ್ಯ ಅವರನ್ನು ಏಕಾಏಕಿ ಕೈ ಬಿಡಲಾಗಿದೆ. ಬದಲಾಗಿ ದಾವಣಗೆರೆ ಉತ್ತರ ಕ್ಷೇತ್ರ ಎಸ್‌‍.ಎಸ್‌‍. ಮಲ್ಲಿಕಾರ್ಜುನ್‌ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಇದರಿಂದ ಗೊಂದಲವೂ ಏರ್ಪಟ್ಟಿತ್ತು. ಅವಕಾಶ ವಂಚಿತ ಶಾಸಕರು ರಾಜೀನಾಮೆ ನೀಡುವ ಬೆದರಿಕೆವೊಡ್ಡಿದ್ದಾರೆ. ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.ಈ ಎಲ್ಲಾ ಪರಿಸ್ಥಿತಿಗಳ ನಡುವೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಬಿ.ಜೆಡ್‌‍.ಜಮೀರ್‌ ಅಹಮದ್‌ ಖಾನ್‌‍, ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌‍, ಎನ್‌‍.ಚೆಲುವರಾಯಸ್ವಾಮಿ, ಶಿವರಾಜ ತಂಗಡಗಿ, ಸಂತೋಷ್‌ ಲಾಡ್‌‍, ಮಧುಬಂಗಾರಪ್ಪ, ಸಿದ್ದು ಸರ್ಕಾರದ ಮೊದಲ ಅವಧಿಯಲ್ಲಿ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಮರಳಿ ಡಿ.ಕೆ.ಶಿವಕುಮಾರ್‌ ಸಂಪುಟದಲ್ಲೂ ಅವಕಾಶಗಿಟ್ಟಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ರಾಜೀನಾಮೆ ನೀಡಿದ್ದ ಬಿ.ನಾಗೇಂದ್ರ ಇಂದು ಮರಳಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಇಡಿ ತನಿಖೆಯನ್ನು ಕಾಂಗ್ರೆಸ್‌‍ ಕಡೆಗಣಿಸಿದೆ.

ಈ ಹಿಂದೆ ಬೇರೆ ಬೇರೆ ಸರ್ಕಾರಗಳಲ್ಲಿ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ, ಪಿ.ಎಂ.ನರೇಂದ್ರಸ್ವಾಮಿ, ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ, ವಿಧಾನಸಭೆಯ ಉಪಾಧ್ಯಕ್ಷರಾಗಿದ್ದ ರುದ್ರಪ್ಪ ಲಮಾಣಿ ಅವರು ಸಂಪುಟ ಸೇರಿದ್ದಾರೆ. ಹೊಸದಾಗಿ ಎಚ್‌.ಸಿ.ಬಾಲಕೃಷ್ಣ, ಟಿ.ರಘುಮೂರ್ತಿ, ಅಜಯ್‌ ಧರ್ಮಸಿಂಗ್‌‍, ಕೆ.ಎಸ್‌‍.ಬಸವಂತಪ್ಪ, ಕೆ.ಎಂ.ಶಿವಲಿಂಗೇಗೌಡ, ವಿಜಯಾನಂದ ಕಾಶಪ್ಪನವರ್‌, ರಿಜ್ವಾನ್‌ ಹರ್ಷದ್‌ ಸಂಪುಟ ಸೇರಿದ್ದಾರೆ.

ನಿಗದಿತ ಸಮಯ 5 ಗಂಟೆಗೆ ರಾಷ್ಟ್ರಗೀತೆ ಹಾಗೂ ನಾಡಗೀತೆಗಳ ಗಾಯನದೊಂದಿಗೆ ಆರಂಭವಾದ ಪ್ರಮಾಣ ವಚನ ಸ್ವೀಕಾರ ಸಮಾರಂಭ 6.7 ನಿಮಿಷಕ್ಕೆ ವಂದೇ ಮಾತರಂ ಗಾಯನದ ಮೂಲಕ ಮುಕ್ತಾಯಗೊಂಡಿತ್ತು. ಸರ್ಕಾರದ ಮುಖ್ಯಕಾರ್ಯದರ್ಶಿಯವರ ಶಾಲಿನ ರಜನೀಶ್‌ ಬದಲಾಗಿ, ಅಪರ ಮುಖ್ಯಕಾರ್ಯದರ್ಶಿ ಗೌರವ್‌ ಗುಪ್ತಾ ಕಾರ್ಯಕ್ರಮ ನಿರೂಪಣೆ ಮಾಡಿದರು

RELATED ARTICLES
spot_img

Latest News