ಬೆಂಗಳೂರು,ಮಾ.26- ನನಗೆ ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯದ ಜನತೆ ಪಕ್ಷದ ಹೈಕಮಾಂಡ್ ಬೆಂಬಲ ಇಲ್ಲದಿದ್ದರೆ ನಾನು ದಾಖಲೆಯ 17 ಬಜೆಟ್ ಮಂಡಿಸಲು ಹೇಗೆ ಸಾಧ್ಯವಾಗುತ್ತಿತ್ತು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳ ಆರೋಪಕ್ಕೆ ವಿಧಾನಪರಿಷತ್ನಲ್ಲಿಂದು ತಿರುಗೇಟು ನೀಡಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಉತ್ತರಿಸುವ ವೇಳೆ, ನೀವು ಮುಂದಿನ ಎರಡು ಬಜೆಟ್ ಮಂಡಿಸುವುದಾದರೆ ಮುಖ್ಯಮಂತ್ರಿಯಾಗೇ ಇರಿ ಆದರೆ ಅರ್ಥಸಚಿವರಾಗಿರುವುದು ಬೇಡ ಎಂದು ಪ್ರತಿಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ನಾನು 1994ರಲ್ಲಿ ಮೊದಲ ಬಾರಿಗೆ ಹಣಕಾಸು ಸಚಿವನಾಗಿ ಬಜೆಟ್ ಮಂಡನೆ ಮಾಡಿದ್ದೆ. ಅಲ್ಲಿಂದ ಈವರೆಗೂ ಒಟ್ಟು 17 ಬಜೆಟ್ ಮಂಡಿಸಿದ್ದೇನೆ. ಕರ್ನಾಟಕದಲ್ಲಿ ನಾನು ಮಂಡಿಸಿದಷ್ಟು ಆಯವ್ಯಯಗಳನ್ನು ಯಾರೂ ಕೂಡ ಮಂಡಿಸಿಲ್ಲ. ಇದು ಒಂದು ದಾಖಲೆ ಎಂದು ತಮನ್ನು ತಾವೇ ಹೊಗಳಿಕೊಂಡರು.
ನನಗೆ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ರಾಜ್ಯದ ಜನತೆಯ ಆಶೀರ್ವಾದವಿದೆ. ಹೈಕಮಾಂಡ್ನ ಬೆಂಬಲವಿದೆ. ನಾನು ರಾಜ್ಯದ ಹಿತಾಸಕ್ತಿ ಮತ್ತು ಜನಪರವಾದ ಬಜೆಟ್ ಮಂಡನೆ ಮಾಡದಿದ್ದರೆ ನನಗೆ ಇಂಥ ಅವಕಾಶ ಸಿಗುತ್ತಿತ್ತೇ ಎಂದು ಪ್ರಶ್ನಿಸಿದರು.
ನಾನು ಜನಪರವಾಗಿ ರಾಜ್ಯದ ಹಿತವನ್ನು ಕಾಪಾಡಿದ್ದರಿಂದಲೇ ನನಗೆ ಇಷ್ಟೂ ಅವಕಾಶ ಸಿಕ್ಕಿದೆ. ನೀವು ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಟೀಕೆ ಮಾಡಲೇಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೋಲಿಕೆ ಮಾಡಿಕೊಳ್ಳಬಾರದೆಂದು ಪ್ರತಿಪಕ್ಷದ ನಾಯಕರು ಹೇಳುತ್ತಾರೆ. ನಾವು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ರಾಜ್ಯ ಸರ್ಕಾರಗಳು ಆರ್ಥಿಕವಾಗಿ ಸದೃಢವಾದರೆ ಕೇಂದ್ರ ಸರ್ಕಾರವು ಸದೃಢವಾಗುತ್ತದೆ. ಅದೇ ರೀತಿ ಕೇಂದ್ರ ಸರ್ಕಾರ ಸದೃಢವಾದರೆ ರಾಜ್ಯಗಳು ಪ್ರಬಲವಾಗುತ್ತವೆ.
ಇದನ್ನೇ ಒಕ್ಕೂಟ ವ್ಯವಸ್ಥೆ ಎಂದು ಹೇಳುವುದು. ಟೀಕೆ ಮಾಡಲೇಬಾರದು ಎಂದರೆ ಹೇಗೆ? ಎಂದು ತರಾಟೆಗೆ ತೆಗೆದುಕೊಂಡರು. ರಾಜ್ಯ ಸರ್ಕಾರದ ಬಜೆಟ್ನ್ನು ನಾವು ಮುನ್ಸಿಪಾಲಿಟಿಗೆ ಹೋಲಿಕೆ ಮಾಡಲು ಆಗುವುದಿಲ್ಲ. ಕೇಂದ್ರ ಸರ್ಕಾರಕ್ಕೆ ಹೋಲಿಕೆ ಮಾಡಲೇಬೇಕಾಗುತ್ತದೆ. ಕರ್ನಾಟಕದಿಂದ ಪ್ರತಿ ವರ್ಷ ಕೇಂದ್ರಕ್ಕೆ ಲಕ್ಷಾಂತರ ಕೋಟಿ ತೆರಿಗೆಯನ್ನು ಪಾವತಿಸುತ್ತೇವೆ.
2025-26ರಲ್ಲಿ ಕರ್ನಾಟಕ ಕೇಂದ್ರಕ್ಕೆ 5 ಲಕ್ಷ ಕೋಟಿಗೂ ಹೆಚ್ಚು ತೆರಿಗೆಯನ್ನು ಪಾವತಿಸಿದೆ. ಆದರೆ ನಮಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವುದು ಅತ್ಯಲ್ಪ. ನಮ ರಾಜ್ಯಕ್ಕೆ ಅನ್ಯಾಯವಾದಾಗ ನಾವು ಪ್ರಶ್ನೆ ಮಾಡಲೇಬೇಕಾಗುತ್ತದೆ. ಹಣಕಾಸು ಆಯೋಗ ಇರುವುದು ಏತಕ್ಕೆ? ಟೀಕೆ ಮಾಡದಿದ್ದರೆ ಅದನ್ನು ಸರ್ವಾಧಿಕಾರಿ ಧೋರಣೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೊಮಾಯಿ ಎಷ್ಟು ಖರ್ಚು ಮಾಡಿದ್ದಾರೆ?:
ಮುಖ್ಯಮಂತ್ರಿಗಳು ವಿಮಾನ ಪ್ರಯಾಣ ಮತ್ತು ಹೆಲಿಕಾಪ್ಟರ್ ಪ್ರಯಾಣಕ್ಕೆ ದುಂದುವೆಚ್ಚ ಮಾಡಿದ್ದಾರೆಂದು ಪ್ರತಿಪಕ್ಷದ ನಾಯಕರು ಆರೋಪ ಮಾಡಿದ್ದಾರೆ. ನಾನು ಮೂರು ವರ್ಷಗಳ ಅವಧಿಯಲ್ಲಿ ಎಷ್ಟು ಖರ್ಚು ಮಾಡಿದ್ದೇನೋ ಬಸರಾಜ ಬೊಮಾಯಿ ಅವರು 2022-23ರಲ್ಲಿ 37 ಕೋಟಿ ರೂ. ವಿಮಾನದಲ್ಲಿ ಪ್ರಯಾಣಿಸಲು ಖರ್ಚು ಮಾಡಿದ್ದಾರೆ. ನಾನು 2023ರಿಂದ ಈವರೆಗೂ ಮಾಡಿರುವ ಖರ್ಚು ಅತ್ಯಲ್ಪ. ನಾವು ಮಾಡಿದರೆ ದುಂದುವೆಚ್ಚ. ಹಾಗಾದರೆ ಬಿಜೆಪಿಯವರು ಮಾಡುವುದು ಏನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಪ್ರಧಾನಿ ನರೇಂದ್ರಮೋದಿ ಅವರು ವಿದೇಶ ಪ್ರವಾಸಕ್ಕಾಗಿ 814 ಕೋಟಿ ಹಣವನ್ನು ವೆಚ್ಚ ಮಾಡಿದರು. ಕೆಲವು ಸಂದರ್ಭಗಳಲ್ಲಿ ಸಮಯ ಉಳಿಸಲು ನಾವು ವಿಮಾನ ಇಲ್ಲವೇ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಬೇಕಾಗುತ್ತದೆ. ಇದು ಅನಿವಾರ್ಯತೆಯೂ ಹೌದು ಎಂದು ತಮ ನಡೆಯನ್ನು ಸಿಎಂ ಸಮರ್ಥನೆ ಮಾಡಿಕೊಂಡರು.
