ಬೆಂಗಳೂರು,ಮಾ.28- ಆರು ವರ್ಷದ ಬಾಲಕಿಯ ಕುತ್ತಿಗೆ ಬಿಗಿದು ಕೊಲೆಮಾಡಿ ನೀಲಗಿರಿ ತೋಪಿನಲ್ಲಿ ಬಿಸಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಸ್ಸಾಂ ಮೂಲದ ರಫೀಕ್ಉಲ್ಲಾ ಎಂಬುವವರ ಮಗಳು ರಿವಿಯಾ (6) ಕೊಲೆಯಾದ ಬಾಲಕಿ.
ಬೇಗೂರಿನಲ್ಲಿ ಈ ಕುಟುಂಬ ವಾಸವಿದೆ. ರಫೀಕ್ ಅವರು ಚಿಂದಿ ಆಯುವುದು ಹಾಗೂ ಅಪಾರ್ಟ್ಮೆಂಟ್ನಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದಾರೆ.
ಮೊನ್ನೆ ರಾತ್ರಿ ಇವರ ಮಗಳು ರಿವಿಯಾ ಕಾಣೆಯಾಗಿದ್ದಾಳೆ. ಪೋಷಕರು ಎಲ್ಲಾ ಕಡೆ ಹುಡುಕಾಡಿದರೂ ಬಾಲಕಿ ಪತ್ತೆಯಾಗಿಲ್ಲ. ಹಾಗಾಗಿ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರಿಗೆ ನಿನ್ನೆ ಮಧ್ಯಾಹ್ನ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ರಾತ್ರಿ ಬಾಲಕಿಯ ಶವ ವಿಟ್ಟಗಾನ ಹಳ್ಳಿಯ ನೀಲಗಿರಿ ತೋಪಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ದುಷ್ಕರ್ಮಿಗಳು ಬಾಲಕಿಯನ್ನು ಅಪಹರಿಸಿ ಕುತ್ತಿಗೆ ಬಿಗಿದು ಕೊಲೆ ಮಾಡಿ ಶವವನ್ನು ತೋಪಿನಲ್ಲಿ ಬಿಸಾಕಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಯಾವುದೋ ದ್ವೇಷದಿಂದ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೃತದೇಹವನ್ನು ಸೆಂಟ್ಜಾನ್ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಬಾಲಕಿಯನ್ನು ಯಾವ ಕಾರಣಕ್ಕಾಗಿ ಯಾರು ಕೊಲೆ ಮಾಡಿದ್ದಾರೆಂಬುವುದು ತನಿಖೆಯಿಂದಷ್ಟೆ ಗೊತ್ತಾಗಲಿದೆ.
