ಬೆಂಗಳೂರು,ಮೇ 3-ಮನೆ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ನೆರೆಮನೆಯಾತ ಜಗಳವಾಡಿ ಮರದ ರಿಪೀಸ್ ಪಟ್ಟಿಯಿಂದ ಹಲ್ಲೆ ನಡೆಸಿ ಆಟೋ ಚಾಲಕನನ್ನು ಕೊಲೆ ಮಾಡಿರುವ ಘಟನೆ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜೆಜೆ ನಗರದ 9ನೇ ಮುಖ್ಯ ರಸ್ತೆ ನಿವಾಸಿ ಮುಬಾರಕ್(26) ಕೊಲೆಯಾದ ಆಟೋಚಾಲಕ.
ಪ್ರತಿನಿತ್ಯ ಮುಬಾರಕ್ ಆಟೋ ಬಾಡಿಗೆಗೆ ಹೋಗಿ ರಾತ್ರಿ ವಾಪಸ್ ಬಂದು ಮನೆ ಬಳಿ ಆಟೋ ನಿಲ್ಲಿಸುತ್ತಾರೆ. ಅದರಂತೆ ಮೊನ್ನೆ ರಾತ್ರಿ 8.30 ರ ಸುಮಾರಿನಲ್ಲಿ ಆಟೋ ನಿಲ್ಲಿಸಿದ ವೇಳೆ ನೆರಮನೆಯಾತ ತಬ್ರೇಜ್ ನಮ ಮನೆ ಬಳಿ ಏಕೆ ಆಟೋ ನಿಲ್ಲಿಸಿದ್ದೀಯ ಎಂದು ಜಗಳವಾಡಿದ್ದಾನೆ.
ಆ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ತಬ್ರೇಜ್ ಕೈಗೆ ಸಿಕ್ಕಿದ ಮರದ ರಿಪೀಸ್ ಪಟ್ಟಿಯಿಂದ ಮುಬಾರಕ್ ತಲೆಗೆ ಹೊಡೆದಾಗ ಆತ ಕುಸಿದು ಬಿದ್ದಿದ್ದಾನೆ. ಗಂಭೀರ ಗಾಯಗೊಂಡಿದ್ದ ಮುಬಾರಕ್ನನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಮೃತಪಟ್ಟಿದ್ದಾರೆ. ಈ ಬಗ್ಗೆ ಜೆಜೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ತಬ್ರೇಜ್ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
