ಮೈಸೂರು, ಮೇ 8- ಅಮಾನತಿನಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ ಹೆಡ್ ಕಾನ್ಸ್ಟೇಬಲ್ ಧನಂಜಯ ಕಾಣೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ಪತ್ನಿ ರಾಜೇಶ್ವರಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾಗಿರುವ ಹೆಡ್ ಕಾನ್ಸ್ಟೇಬಲ್ ಧನಂಜಯ ದೇವರಾಜ ಪೊಲೀಸ್ ಠಾಣೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಕರ್ತವ್ಯದಲ್ಲಿದ್ದ ವೇಳೆ ದೇವರಾಜ ಠಾಣೆಯ ಉಮೇಶ್ ಹಾಗೂ ಧನಂಜಯ್ 112 ಗರುಡಾ ವಾಹನದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮಾತಿನ ಚಕಮಕಿ ನಡೆದು, ಉಮೇಶ್ರವರು ಧನಂಜಯರವರ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು.
ಈ ಘಟನೆ ಪೊಲೀಸ್ ಇಲಾಖೆಗೆ ಮುಜುಗರ ತಂದಿತ್ತು. ಈ ಕಾರಣಕ್ಕಾಗಿ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ರವರು ಇಬ್ಬರನ್ನೂ ಅಮಾನತು ಮಾಡಿದ್ದರು. ಇತ್ತೀಚೆಗೆ ಉಮೇಶ್ರವರ ಅಮಾನತು ಆದೇಶ ರದ್ದುಪಡಿಸಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು.
ಆದರೆ ಧನಂಜಯರವರ ಅಮಾನತು ಮುಂದುವರೆಸಲಾಗಿತ್ತು. ಈ ವಿಚಾರದಲ್ಲಿ ಧನಂಜಯ್ ಮಾನಸಿಕವಾಗಿ ಖಿನ್ನವಾಗಿದ್ದರು. ಹಿರಿಯ ಅಧಿಕಾರಿಗಳ ಭೇಟಿ ಮಾಡಲು ಸಾಧ್ಯವಾಗದ ಕಾರಣ ಮನನೊಂದಿದ್ದರು. ಮೂರು ದಿನಗಳ ಹಿಂದೆ ಹೂಟಗಳ್ಳಿ ಹೌಸಿಂಗ್ ಬೋರ್ಡ್ ನಿವಾಸದಿಂದ ಹೊರಟ ಧನಂಜಯ ರವರು ಮನೆಗೆ ಹಿಂದಿರುಗಿಲ್ಲವೆಂದು ಪತ್ನಿ ರಾಜೇಶ್ವರಿ ದೂರಿನಲ್ಲಿ ದಾಖಲಿಸಿದ್ದಾರೆ.
