ಬೆಂಗಳೂರು,ಜೂ.17-ಲಿವಿಂಗ್-ಟು-ಗೆದರ್ನಲ್ಲಿದ್ದ ಪ್ರೇಯಸಿ ಊರಿಗೆ ಹೋಗಿ ಬರುವುದಾಗಿ ಕೇಳಿದ್ದಕ್ಕೆ ಕೋಪಗೊಂಡ ಪ್ರಿಯಕರ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿರುವ ಘಟನೆ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಹಾಸನ ಜಿಲ್ಲೆ ಸಕಲೇಶ್ಪುರ ನಿವಾಸಿ ಅನುಷಾ (20) ಕೊಲೆಯಾದ ಪ್ರೇಯಸಿ. ಆರೋಪಿ ಪ್ರಿಯಕರ ಶರತ್ ಇದೀಗ ಕಂಬಿ ಎಣಿಸುತ್ತಿದ್ದಾನೆ.ಒಂದೇ ಊರಿನವರಾದ ಇವರಿಬ್ಬರು ಮಲ್ಲೇಶ್ವರಂ 7ನೇ ಕ್ರಾಸ್ನ ಬಾಡಿಗೆ ಮನೆಯಲ್ಲಿ ಲಿವಿಂಗ್-ಟು-ಗೆದರ್ನಲ್ಲಿದ್ದರು.
ಜೂ.14 ರಂದು ಅನುಷಾ ಊರಿಗೆ ಹೋಗಿ ಬರುವುದಾಗಿ ಶರತ್ಗೆ ತಿಳಿಸಿದಾಗ ಆತ ನಿರಾಕರಿಸಿದ್ದಾನೆ.ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿ ವಿಕೋಪಕ್ಕೆ ತಿರುಗಿದೆ. ಆ ಸಂದರ್ಭದಲ್ಲಿ ಶರತ್ ತಾಳೆಕಳೆದುಕೊಂಡು ಅನುಷಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮುಂದೇನು ಮಾಡುವುದೆಂದು ತೋಚದೆ ಮಲಗಿಕೊಂಡಿರುವ ರೀತಿ ಹಾಸಿಗೆ ಮೇಲೆ ಶವವನ್ನು ಮಲಗಿಸಿ ಸ್ಥಳದಿಂದ ಪರಾರಿಯಾಗಿ ವಕೀಲರೊಬ್ಬರಿಗೆ ಕರೆ ಮಾಡಿ ತಲೆಮರೆಸಿಕೊಂಡಿದ್ದನು.
ವಕೀಲರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಕಂಡು ಬಂದಿದೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಕೀಲರು ನೀಡಿದ ಮಾಹಿತಿಯಂತೆ ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
