ಬೆಂಗಳೂರು,ಮಾ.2-ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಂಪ್ಸ್ ಗಮನಿಸದೆ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಖಾಸಗಿ ಕಂಪನಿಯೊಂದರ ಅಸೋಸಿಯೇಟ್ ಮ್ಯಾನೇಜರ್ ಮೃತಪಟ್ಟಿರುವ ಘಟನೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಆರ್ಯನ್ ಸಿನ್ಹ (27) ಮೃತಪಟ್ಟವರು.ಇವರು ಬಿಟಿಎಂ ಲೇಔಟ್ನಲ್ಲಿ ನೆಲೆಸಿದ್ದರು.ಮಡಿವಾಳದ ಖಾಸಗಿ ಕಂಪನಿಯೊಂದರಲ್ಲಿ ಆರ್ಯನ್ ಅಸೋಸಿಯೇಟ್ ಮ್ಯಾನೇಜರ್ ವೃತ್ತಿ ಮಾಡುತ್ತಿದ್ದರು. ರಾತ್ರಿ 8.30 ರ ಸುಮಾರಿನಲ್ಲಿ ತಮ ಹೋಂಡಾ ದ್ವಿಚಕ್ರ ವಾಹನದಲ್ಲಿ ಬೆಂಗಳೂರು- ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿಕ್ಕಬಳ್ಳಾಪುರ ಕಡೆಗೆ ಹೋಗುತ್ತಿದ್ದಾಗ ಕೋಟೆ ಕ್ರಾಸ್ ಹತ್ತಿರ ರಸ್ತೆ ಹಂಪ್ಸ್ ಗಮನಿಸದೆ ಚಲಾಯಿಸಿದ್ದರಿಂದ ನಿಯಂತ್ರಣಕ್ಕೆ ಸಿಗದೆ ವಾಹನ ಸಮೇತ ರಸ್ತೆಗೆ ಉರುಳಿದ್ದಾರೆ.
ಪರಿಣಾಮ ಆರ್ಯನ್ ಅವರ ತಲೆ ಹಾಗೂ ಇತರ ಭಾಗಗಳಿಗೆ ಗಂಭೀರ ಪೆಟ್ಟಾಗಿದೆ. ತಕ್ಷಣ ಸಾರ್ವಜನಿಕರು ಆಂಬ್ಯುಲೆನ್ಸ್ ನ್ನು ಸ್ಥಳಕ್ಕೆ ಕರೆಸಿಕೊಂಡು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಅವರನ್ನು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಅಪಘಾತದ ಸುದ್ದಿ ತಿಳಿದು ದೇವನಹಳ್ಳಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
