ಮಂಡ್ಯ,ಫೆ.26-ಮೆದುಳು ನಿಷ್ಕ್ರಿಯಗೊಂಡಿದ್ದ ತಾಲ್ಲೂಕಿನ ಚಿಕ್ಕಮಂಡ್ಯದ ಯುವಕ ದರ್ಶನ್ ಅವರ ಅಂಗಾಂಗಗಳನ್ನು ದಾನ ಮಾಡಿ, ಹಲವು ಮಂದಿಯ ಜೀವ ಉಳಿಸುವಲ್ಲಿ ಆತನ ಕುಟುಂಬ ಸಾರ್ಥಕತೆ ಮೆರೆದಿದೆ.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ. ಎಸ್ .ಟಿ ಕಾವ್ಯ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಎಸ್ದೀಪಕ್ ಮತ್ತಿತರ ವೈದ್ಯರ ತಂಡ ಅಂಗಾಗ ಕಸಿ ಮಾಡುವ ಮೂಲಕ ಹಲವು ಮಂದಿಗೆ ಜೀವ ದಾನ ಮಾಡಿದ್ದಾರೆ.
ಶಸ್ತ್ರಚಿಕಿತ್ಸಾ ತಂಡ ತಡರಾತ್ರಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಯಕೃತ್ತನ್ನು 26 ವರ್ಷದ ಪುರುಷನಿಗೆ, ಮೂತ್ರಪಿಂಡವನ್ನು 26 ವರ್ಷದ ಪುರುಷನಿಗೆ ಮತ್ತು ಇನ್ನೊಂದು ಮೂತ್ರಪಿಂಡ 38 ವರ್ಷದ ಪುರುಷನಿಗೆ ನೀಡಲಾಗಿದೆ.
ಹದಯ ಕವಾಟಗಳನ್ನು ಮತ್ತೊಂದು ಆಸ್ಪತ್ರೆಗೆ ನೀಡಲಾಗಿದ್ದು ವಿಧಿವಿಜ್ಞಾನ ಇಲಾಖೆಯ ತಂಡ ಬೆಳಿಗ್ಗೆ 4 ಗಂಟೆಗೆ ಶಸ್ತ್ರಚಿಕಿತ್ಸೆಯ ನಂತರ ಮರಣೋತ್ತರ ಪರೀಕ್ಷೆ ನಡೆಸಿತು. ದರ್ಶನ್ ಅವರ ದೇಹವನ್ನು ಬೆಳಿಗ್ಗೆ 5 ಗಂಟೆಗೆ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಆಸ್ಪತ್ರೆಯ ಆಂಬ್ಯುಲೆನ್ಸ್ ಮೂಲಕ ದೇಹವನ್ನು ಅವರ ನಿವಾಸಕ್ಕೆ ಸ್ಥಳಾಂತರಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ಫೆ. 24 ರಂದು ಬೆಳಿಗ್ಗೆ ಜೀವಸಾರ್ಥಕ ತಂಡದ ಸಮರ್ಪಿತ ಕೌನ್ಸಿಲರ್ಗಳ ತಂಡ ಅಂಗಾಂಗ ಮರು ಪಡೆಯುವಿಕೆ ಪ್ರಕ್ರಿಯೆಯ ಎಲ್ಲಾ ಔಪಚಾರಿಕತೆ ಪೂರ್ಣಗೊಳಿಸಿದೆ. ಗಾಯದ ಫಲಿತಾಂಶ ಮತ್ತು ರೋಗಿಯ ಕುಟುಂಬಕ್ಕೆ ಅಂಗಾಂಗ ದಾನಕ್ಕಾಗಿ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಲಹೆ ನೀಡಲಾಯಿತು. ದರ್ಶನ್ ಅಂಗಗಳನ್ನು ಕುಟುಂಬದ ಏಕೈಕ ಜೀವನಾಧಾರಕ್ಕೆ ದಾನ ಮಾಡಲು ನಿರ್ಧಾರ ತೆಗೆದುಕೊಂಡಿತು.
ಮಂಡ್ಯದ ಪೊಲೀಸ್ ಇಲಾಖೆಯಿಂದ ಸಿಕ್ಕ ಸಹಕಾರದಿಂದ ಅಂಗಾಂಗ ದಾನ ಪ್ರಕ್ರಿಯೆಗೆ ಸಮಯಕ್ಕೆ ಸರಿಯಾಗಿ ಪೂರ್ಣಗೊಂಡಿತು. ಮಂಡ್ಯ ಜಿಲ್ಲೆಯ ಕಸಬಾ ಹೋಬಳಿ ಚಿಕ್ಕಮಂಡ್ಯದ ದರ್ಶನ್ ಬೈಕ್ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಮನೆಗೆ ಬಂದು ಮಲಗಿದ ನಂತರ ಕುಟುಂಬ ಸದಸ್ಯರು ದರ್ಶನ್ನಲ್ಲಿ ಏನೋ ಅಸಾಮಾನ್ಯತೆ ಇರುವುದನ್ನು ಗಮನಸಿದರು. ಅಲ್ಲದೇ ತಲೆಗೆ ಗಾಯವಾಗಿದ್ದರಿಂದ ಅವರನ್ನು ಮಂಡ್ಯ ಆಸ್ಪತ್ರೆಗೆ ದಾಖಲಿಸಿದ್ದರು.
ನಂತರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರಗೆ ಸ್ಥಳಾಂತರಿಸಲಾಗಿತ್ತು. ಪ್ರಜ್ಞೆ ತಪ್ಪಿದ ಹಿನ್ನೆಯಲ್ಲಿ ಅಗತ್ಯವಿರುವ ಎಲ್ಲಾ ಚಿಕಿತ್ಸೆಯನ್ನು ನೀಡಲಾಯಿತು. ಆದರೆ ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ ಯಾವುದೇ ಸುಧಾರಣೆ ಕಂಡು ಬರಲಿಲ್ಲ, ವಸ್ತುಸ್ಥಿತಿಯನ್ನು ವೈದ್ಯರು ಕುಟುಂಬದವರಿಗೆ ತಿಳಿಸಿದ ನಂತರ, ಅವರು ಅಂಗಾಂಗ ದಾನಕ್ಕೆ ಸಮತಿ ಸೂಚಿಸಿದರು.
