ಚಿಕ್ಕಮಗಳೂರು,ಮೇ 2-ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಏಣಿಕೆ ರಾಜ್ಯದ ಕುತೂಹಲ ಕೆರಳಿಸಿರುವ ನಡುವೆಯೇ ಸ್ಟ್ರಾಂಗ್ ರೂಮ್ನಲ್ಲಿದ್ದ ಒಂದು ಟ್ರಂಕ್ ತೆರೆದಿರುವುದು ಹಾಗೂ ಡ್ಯಾಮೇಜ್ ಆಗಿರುವುದು ಕಂಡು ಬಂದಿದೆ.
ಜಿಲ್ಲಾಧಿಕಾರಿ ನಾಗರಾಜ್, ವಿವಿಧ ತಹಶೀಲ್ದಾರರು ಹಾಗೂ ವೀಕ್ಷಕ ಕಿರಣ್ ಹೆಚ್. ಕುಲಕರ್ಣಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಮತ ಪತ್ರಗಳನ್ನು ಐಡಿಎಸ್ಜಿ ಕಾಲೇಜಿಗೆ ರವಾನಿಸಲಾಗಿದೆ.
ಚುನಾವಣಾಧಿಕಾರಿ ಗೌರವಶೆಟ್ಟಿ ಹಾಗೂ ಅಭ್ಯರ್ಥಿಗಳ ಸಮುಖದಲ್ಲಿ ಸಗನೀಪುರ ರಸ್ತೆಯ ಇವಿಎಂ ವೇರ್ ಹೌಸ್ನ ಸ್ಟ್ರಾಂಗ್ ರೂಮ್ ತೆರೆದು ಒಟ್ಟು 20 ಟ್ರಂಕ್ಗಳಲ್ಲಿರುವ ಅಂಚೆ ಮತ ಪತ್ರಗಳನ್ನು ಹೊರತೆಗೆಯಲಾಗಿದೆ.
ಈ ಸಂದರ್ಭದಲ್ಲಿ ಒಂದು ಟ್ರಂಕ್ ಓಪನ್ಆಗಿರುವುದು ಹಾಗೂ ಮತ್ತೊಂದು ಟ್ರಂಕ್ ಡ್ಯಾಮೇಜ್ ಆಗಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಶಾಸಕ ರಾಜೇಗೌಡ ಹಾಗೂ ಅವರ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣದ ಮೂಲಕ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.ಈ ಹೈವೋಲ್ಟೇಜ್ ಪ್ರಕ್ರಿಯೆಗೆ ಸಾಕ್ಷಿಯಾಗಲು ಶಾಸಕ ಟಿ.ಡಿ.ರಾಜೇಗೌಡ ಮಾಜಿ ಶಾಸಕ ಡಿ.ಎನ್ ಜೀವರಾಜ್ ಹಾಗೂ ಜೆಡಿಎಸ್ ಮುಖಂಡ ಸುಧಾಕರ್ ಶೆಟ್ಟಿ ಸ್ಥಳಕ್ಕೆ ಆಗಮಿಸಿದ್ದಾರೆ.
ಒಟ್ಟು 1822 ಅಂಚೆ ಮತಗಳ ಮರು ಏಣಿಕೆ ನಡೆಯಲಿದ್ದು, ಈ ಹಿಂದೆ 279 ಅಂಚೆ ಮತಗಳು ತಿರಸ್ಕೃತಗೊಂಡಿದ್ದರ ವಿರುದ್ಧ ಮಾಜಿ ಶಾಸಕ ಜೀವರಾಜ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ಇಂದು ಅಂಚೆ ಮತಗಳು ಮರು ಏಣಿಕೆ ಪ್ರಕ್ರಿಯೆ ಬೆಳಗ್ಗೆ 9 ಗಂಟೆಯಿಂದ ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಏಣಿಕೆ ಕಾರ್ಯ ಆರಂಭವಾಗಿದೆ.
ಒಂದೇ ಟೇಬಲ್ನಲ್ಲಿ ಅಂಚೆ ಮತಗಳ ಮರು ಏಣಿಕೆಯನ್ನು ಚುನಾವಣಾಧಿಕಾರಿ ಗೌರವಶೆಟ್ಟಿ ನೇತೃತ್ವದಲ್ಲಿ ನಡೆಯುತ್ತಿದ್ದು, 6 ಮಂದಿ ಸಹಾಯಕ ಚುನಾವಣಾಧಿಕಾರಿಗಳು ಸಾಥ್ ನೀಡಿದ್ದಾರೆ. ಮತ ಏಣಿಕೆ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ರಾಜೇಗೌಡ ಹಾಗೂ ಬಿಜೆಪಿ ಪಕ್ಷದ ಮಾಹಿ ಶಾಸಕ ಜೀವರಾಜ್ ಏಜೆಂಟರು ಸ್ಥಳದಲ್ಲಿದ್ದಾರೆ.
