ಚಿಕ್ಕಮಗಳೂರು,ಫೆ.11- ಉನ್ನತ ವಿದ್ಯಾಭ್ಯಾಸ ಮುಗಿಸಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಯುವಕನ ಆಸೆಯನ್ನೇ ಬಂಡವಾಳ ಮಾಡಿಕೊಂಡ ವಂಚಕನೊಬ್ಬ ಬರೋಬ್ಬರಿ ಎರಡೂವರೆ ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ನಡೆದಿದೆ.
ಎಂ.ಎಸ್ಸಿ ಪದವೀಧರ ಕೆ.ಸನತ್ ಎಂಬುವರು ಲಿಂಕ್ಇನ್ ಪೋರ್ಟಲ್ನಲ್ಲಿ ಉದ್ಯೋಗ ಹುಡುಕುತ್ತಿದ್ದಾಗ, ಮನುಕುಮಾರ್ ಎಂಬ ಅಪರಿಚಿತ ವ್ಯಕ್ತಿ ಸಂಪರ್ಕಿಸಿ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ.
ಕಂಪನಿಯ ಅಭಿವೃದ್ಧಿ ಹೆಸರಲ್ಲಿ 2 ಲಕ್ಷ ರೂಪಾಯಿ ಹಾಗೂ ತನ್ನ ಸೇವಾ ಶುಲ್ಕವಾಗಿ 50 ಸಾವಿರ ರೂಪಾಯಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದನು. ಇದನ್ನು ನಂಬಿದ ಸನತ್ ಅವರು ಹಂತ ಹಂತವಾಗಿ ಒಟ್ಟು 2.5 ಲಕ್ಷ ರೂಪಾಯಿಗಳನ್ನು ಆರೋಪಿಯ ಖಾತೆಗೆ ಗೂಗಲ್ ಪೆೇ ಮೂಲಕ ವರ್ಗಾವಣೆ ಮಾಡಿದ್ದಾರೆ.
ಹಣ ವರ್ಗಾವಣೆಯಾದ ಬಳಿಕ ವಂಚಕ ಮನುಕುಮಾರ್ ಜಾಯ್ನಿಂಗ್ ಲೆಟರ್ ನೀಡದೆ ಸತಾಯಿಸಿದ್ದಲ್ಲದೆ, ತನ್ನ ಎರಡು ಮೊಬೈಲ್ ಸಂಖ್ಯೆಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದಂತೆ ಪರಾರಿಯಾಗಿದ್ದಾನೆ.
ತಾನು ಮೋಸ ಹೋಗಿರುವುದು ತಡವಾಗಿ ಬೆಳಕಿಗೆ ಬಂದ ಕೂಡಲೇ ವಂಚನೆಗೊಳಗಾದ ಯುವಕ ಸೆನ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪೀಕಿದ ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನ್ನ ಹಣವನ್ನು ವಾಪಸ್ ಕೊಡಿಸಬೇಕೆಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
