ಬೆಂಗಳೂರು,ಮೇ.24-ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗದಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಪೊಲೀಸ್ ಸಿಬ್ಬಂದಿಗಳ ಅಮಾನತ್ತುಗೊಳಿಸಲಾಗಿದೆ. ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಿ ಆಗಮಿಸಿದಾಗ ಬೆಂಗಳೂರು ದಕ್ಷಿಣ ತಾಲ್ಲೂಕಿನ ವಡೇಯರಹಳ್ಳಿ ಬಳಿ ಸ್ಫೋಟಕ ಪತ್ತೆಯಾಗಿ ಭಾರಿ ಭದ್ರತಾ ಲೋಪ ಕೇಳಿ ಬಂದಿತ್ತು.
ಪ್ರಾಥಮಿಕ ತನಿಖೆ ನಂತರ ಬೆಂಗಳೂರು ದಕ್ಷಿಣ ಎಸ್ಪಿ ಶ್ರೀನಿವಾಸ ಅವರು ಪಿಎಸ್ಐ, ಎಎಸ್ಐ ಹಾಗೂ ನಾಲ್ವರು ಕಾನ್್ಸಸ್ಟೇಬಲ್ ರನ್ನು ಅಮಾನತುಗೊಳಿಸಿದ್ದಾರೆ.
ಈ ಸ್ಥಳದ ಬಳಿಯೇ ಇವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಗೊತ್ತಾಗಿದ್ದು, ಕರ್ತವ್ಯ ಲೋಪ ಪರಿಗಣಿಸಿ ಅಮಾನತು ಮಾಡಲಾಗಿದೆ.
ಪ್ರಧಾನಿ ಬರುವ ಎರಡು ಗಂಟೆ ಮೊದಲು ಕಾನ್್ಸಸ್ಟೇಬಲ್ ಒಬ್ಬರು ಸ್ಫೋಟಕಗಳಿದ್ದ ಬಾಕ್ಸನ್ನು ಪತ್ತೆ ಹಚ್ಚಿ ನೋಡಿ ನಂತರ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು.
ನಂತರ ಬಾಂಬ್ ನಿಷ್ಕ್ರಿಯದಳ ಪರಿಶೀಲಿಸಿದಾಗ ಅದರಲ್ಲಿ ಜೆಲೆಟಿನ್ ಕಡ್ಡಿಗಳು ಪತ್ತೆಯಾಗಿತ್ತು.
