ಬೆಂಗಳೂರು, ಮಾ.17- ಅಪ್ಪು ಅಂದರೆ ಅದೊಂದು ಕೇವಲ ಹೆಸರಾಗಿ ಉಳಿದಿಲ್ಲ, ಅದೆಷ್ಟೋ ಜೀವಗಳಿಗೆ ಸ್ಫೂರ್ತಿಯ ಚಿಲುಮೆ. ಸದಾ ಹಸನುಖಿಯಾಗಿ, ಎಲ್ಲರಿಗೂ ಸ್ಫೂರ್ತಿಯಾಗಿದ್ದವರು. ಅವರ ಹುಟ್ಟುಹಬ್ಬ ಅಂದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ರಾಜ್ಯದ ಮೂಲೆ ಮೂಲೆಯಿಂದ ಅವರನ್ನ ನೋಡಲು ಜನ ಬರುತ್ತಾರೆ.
ಕೈಯಲ್ಲೊಂದು ಗುಲಾಬಿ ಹಿಡಿದು, ಸಾರಕದ ಮೇಲೆ ನಗುತ್ತಾ ಎಲ್ಲರನ್ನು ನೋಡುತ್ತಿರುವ ಅಪ್ಪು ಭಾವಚಿತ್ರಕ್ಕೆ ಹೂ ಅರ್ಪಿಸಿ, ನಮನ ಸಲ್ಲಿಸಿ, ನೀವ್ ಇರಬೇಕಿತ್ತು ದೇವ್ರು ಎನ್ನುತ್ತಾ ದುಃಖವನ್ನು ಮನಸ್ಸೊಳಗೆ ತುಂಬಿಕೊಂಡು ಮುಂದೆ ಸಾಗುತ್ತಾರೆ.
ಸಿಹಿ, ಅಪ್ಪು ಫೋಟೋ ಫ್ರೇಮ್ ಹೀಗೆ ನಾನಾ ಥರದ ಉಡುಗೊರೆಗಳನ್ನು ತಂದು ಅಪ್ಪು ಸಾರಕಕ್ಕೆ ಅರ್ಪಿಸುತ್ತಾರೆ. ರಾತ್ರಿಯೆಲ್ಲಾ ಪ್ರಯಾಣ ಮಾಡಿ, ಬೆಳಗ್ಗೆ ಅಪ್ಪು ಮುಖ ನೋಡಿದಾಗ ಆ ಅಭಿಮಾನಿಗಳಿಗೆ ಸಿಗುವ ಆನಂದ ಅಷ್ಟಿಷ್ಟಲ್ಲ. ದೂರದೂರಿನಿಂದೆಲ್ಲ ಬರುತ್ತಾರೆ ಎಂಬುದು ಪವರ್ ಸ್ಟಾರ್ ಫ್ಯಾನ್ಸ್ ಗೂ ಗೊತ್ತು. ಹೀಗಾಗಿಯೇ ಸಾರಕದ ಬಳಿ ಅನ್ನದಾನದ ಏರ್ಪಾಡಾಗಿರುತ್ತದೆ. ಪುನೀತ್ ರಾಜ್ಕುಮಾರ್ ಅವರು ತೆರೆ ಮೇಲೆ ಪವರ್ ಸ್ಟಾರ್ ಆಗಿ ಅಬ್ಬರಿಸಿದರು. ನಿಜ ಜೀವನದಲ್ಲಿ ಸರಳ ಸ್ವಭಾವದ ವ್ಯಕ್ತಿ. ಹಿರಿಯರನ್ನು ಕಂಡಾಗ ಅವರು ಗೌರವಿಸುವ ರೀತಿ ಕಿರಿಯರಿಗೆ ಮಾರ್ಗದರ್ಶನವಿದ್ದಂತೆ.
ಕಷ್ಟ ಎಂದು ಬಂದವರಿಗೆ ಬರಿಗೈನಲ್ಲಿ ಕಳುಹಿಸಿದ ಇತಿಹಾಸವೇ ಇಲ್ಲ. ಮನೆ ಹತ್ತಿರ ನಿಂತವರಿಗೂ ಅನ್ನ ಹಾಕಿದ ಮಹಾನುಭಾವ. ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ಗುರುವೂ ಹೌದು. ಅಪ್ಪು ಬಗ್ಗೆ ಹೇಳುತ್ತಾ ಹೋದರೆ ಪುಟಗಳು ಸಾಲದು. ಭೌತಿಕವಾಗಿ ಇದ್ದಿದ್ದರೆ ಇನ್ನು ಅದೆಷ್ಟು ಮಹಾನ್ ಕಾರ್ಯಗಳು ಆಗೋದಿತ್ತೋ. ವಿಧಿಯ ಕರೆಗೆ ನಾ ಬಂದೆ ಎಂದು ಹೊರಟೇ ಬಿಟ್ಟರು.
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಇಂದು ಗಟ್ಟಿಯಾಗಿ ನಿಂತಿದ್ದಾರೆ. ತನ್ನೊಳಗಿನ ನೋವನ್ನೆಲ್ಲ ನುಂಗಿ, ಮಕ್ಕಳ ಭವಿಷ್ಯಕ್ಕಾಗಿ, ಅಪ್ಪು ಉಳಿಸಿ ಹೋದ ಹೆಸರಿಗಾಗಿ, ಅಪ್ಪು ಕನಸನ್ನು ಬೆಳೆಸುವುದಕ್ಕಾಗಿ. ಇಂದು ಅವರ ಹುಟ್ಟುಹಬ್ಬದ ದಿನ. ಇಡೀ ಕುಟುಂಬಸ್ಥರು ಸ್ಮಾರಕದ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ.
