ಕನ್ನಡದಲ್ಲಿ ಆಗಾಗ ವಿಭಿನ್ನ ಸಿನಿಮಾಗಳು ತೆರೆ ಮೇಲೆ ಬರ್ತಾ ಇರುತ್ತವೆ. ಸದ್ಯ ಈಗ ರಿಲೀಸ್ ಆಗಿರುವಂತ ವಿಕಲ್ಪ ಸಿನಿಮಾ ವಿಭಿನ್ನತೆಯ ಹಾದಿಯಲ್ಲಿ ಸಾಗಿದರು, ಭಯ ಮತ್ತು ಭ್ರಮೆಯ ಸಾರವನ್ನು ತೆರೆಮೇಲೆ ತೋರಿಸುತ್ತಿದೆ. ಜನವರಿ 30ರಂದು ರಿಲೀಸ್ ಆಗಿರುವ ಈ ಸಿನಿಮಾದಲ್ಲಿ ಪೃಥ್ವಿರಾಜ್ ಪಾಟೀಲ್ ಪ್ರಮುಖ ಪಾತ್ರವನ್ನ ಮಾಡಿದ್ದಾರೆ.
ಬಹಳ ಮುಖ್ಯವಾದಂತ ವಿಚಾರ ಅಂದ್ರೆ ಪೃಥ್ವಿ ರಾಜ್ ಅವರೇ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಎರಡ್ ರಡು ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇಂದಿರಾ ಶಿವಸ್ವಾಮಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಪ್ರೀತಿ, ಬಾಂಧವ್ಯ ಮತ್ತು ಹಾಸ್ಯದ ಅಂಶಗಳ ಜೊತೆಗೆ ಯಕ್ಷಗಾನವನ್ನು ಮುಖ್ಯವಾಗಿಟ್ಟುಕೊಂಡು ವಿಕಲ್ಪ ಸಿನಿಮಾವನ್ನು ಮಾಡಿದ್ದಾರೆ. ನಾಯಕ ಪೃಥ್ವಿ ಅಲಿಯಾಸ್ ಪಿಟ್ಟುಗೆ ಬಾಲ್ಯದಲ್ಲಿ ನಡೆದ ಒಂದು ಘಟನೆ ಮನಸ್ಸಿನಲ್ಲಿ ಆಳವಾಗಿ ಬೇರೂರಿರುತ್ತದೆ. ಆ ಭಯ ಅವನನ್ನು ಎಷ್ಟು ಕಾಡುತ್ತದೆ ಎಂದರೆ, ಆತನಿಗೆ 33 ವರ್ಷ ವಯಸ್ಸಾದರೂ ಆ ಭಯ ಬಿಡದಂತೆ ಕಾಡುತ್ತಿರುತ್ತದೆ. ವಿಚಿತ್ರ ಅನುಭವಗಳಾಗುತ್ತಿರುತ್ತವೆ. ಮಾನಸಿಕ ಯಾತನೆಯಿಂದ ಆಗುವ ಅಲ್ಲೋಲ ಕಲ್ಲೋಲಗಳನ್ನು ತೆರೆಮೇಲೆ ಅದ್ಭುತವಾಗಿ ತೋರಿಸಿದ್ದಾರೆ.
ಬೆಂಗಳೂರು ಮತ್ತು ಮಲೆನಾಡಿನ ಹಲವು ಪ್ರದೇಶಗಳಲ್ಲಿ ‘ವಿಕಲ್ಪ’ ಸಿನಿಮಾವನ್ನು ಚಿತ್ರಿಸಲಾಗಿದೆ. ಆಯಾ ಪ್ರದೇಶ ಮತ್ತು ಆ ಪ್ರದೇಶದ ಪಾತ್ರಗಳಿಗೆ ತಕ್ಕಂತೆ ಸಂಭಾಷಣೆಯನ್ನು ಬರೆಯಲಾಗಿದೆ. ಕ್ಲೈಮ್ಯಾಕ್ಸ್ನಲ್ಲಿ ಒಂದಷ್ಟು ಮನೋವೈಜ್ಞಾನಿಕ ಅಂಶಗಳನ್ನು ಪ್ರೇಕ್ಷಕರಿಗೆ ತಿಳಿಸಲಾಗಿದೆ. ದೆವ್ವ-ಭೂತ ಎಂಬ ಮೌಢ್ಯ ಬಿತ್ತುವ ಸಿನಿಮಾಗಳ ನಡುವೆ ‘ವಿಕಲ್ಪ’ ಚಿತ್ರ ಒಂದು ಉತ್ತಮ ಪ್ರಯತ್ನವಾಗಿ ಇಷ್ಟ ಆಗುತ್ತದೆ.
ಮೂಲತಃ ಸಾಫ್ಟ್ವೇರ್ ಉದ್ಯೋಗಿಯಾಗಿರುವ ಪೃಥ್ವಿರಾಜ್ ಪಾಟೀಲ್ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನುಳಿದ ಕಲಾವಿದರಾದ ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಪೂಜಾ, ಸ್ವರೂಪ್ ಅವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕಾಮಿಡಿ ಪಾತ್ರದಲ್ಲಿ ಗಣಪತಿ ಹೆಗಡೆ ವಡ್ಡಿನಗದ್ದೆ ಅವರು ಸಖತ್ ರಿಲೀಫ್ ನೀಡುತ್ತಾರೆ. ಸಂವತ್ಸರ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಚಿತ್ರಕ್ಕೆ ಪ್ಲಸ್ ಆಗಿವೆ.
ಹಿನ್ನೆಲೆ ಸಂಗೀತ ಕೂಡ ಚೆನ್ನಾಗಿದೆ. ಇಡೀ ಸಿನಿಮಾವನ್ನು ಯಕ್ಷಗಾನದ ಜೊತೆಗೆ ಬ್ಲೆಂಡ್ ಮಾಡಿಕೊಂಡು, ನಿರೂಪಣೆ ಮಾಡಿದ್ದಾರೆ ನಿರ್ದೇಶಕ ಪೃಥ್ವಿರಾಜ್. ಆರಂಭದಿಂದ ಅಂತ್ಯದವರೆಗೂ ಸಸ್ಪೆನ್ಸ್ ಕಾಯ್ದುಕೊಳ್ಳುವಲ್ಲಿ ಸಿನಿಮಾದ ನಿರೂಪಣೆ ಯಶಸ್ವಿಯಾಗಿದೆ. ಇಡೀ ಸಿನಿಮಾವನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ ಮತ್ತು ಪಾತ್ರಗಳ ನೈಜ ಅಭಿನಯ ಸಿನಿಮಾದ ತೂಕವನ್ನು ಹೆಚ್ಚಿಸಿದೆ.
