ಮಂಡ್ಯ,ಮಾ.28- ಗಂಡು ಮಗು ಹೆರಲಿಲ್ಲ ಎಂಬ ಕಾರಣಕ್ಕೆ ಮೂರು ಮಕ್ಕಳ ತಾಯಿಯನ್ನು ಮನೆಗೆ ಸೇರಿಸದ ಗಂಡ ಹಾಗೂ ಮಾವನ ವರ್ತನೆ ವಿರುದ್ದ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳ ಜೊತೆ ಮನೆ ಮುಂದೆ ಒಂಟಿಯಾಗಿ ಅಹೋ ರಾತ್ರಿ ಹೋರಾಟ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.
ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನಿರುಗಾವಲು ಗ್ರಾಮದ ಆನಂದ್ ಎಂಬುವರ ಪತ್ನಿ ಮಹದೇವಮ್ಮ ಬೆಳಿಗ್ಗೆಯಿಂದ ತನ್ನ ಗಂಡನ ಮನೆ ಮುಂದೆ ಮೂವರು ಮಕ್ಕಳ ಸಮೇತ ಕುಳಿತು ತನ್ನದಲ್ಲದ ತಪ್ಪಿಗೆ ಹೋರಾಟ ನಡೆಸುತ್ತಿದ್ದಾಳೆ.
ಗ್ರಾಮದ ನಿವಾಸಿ ಆನಂದ್ ಎಂಬಾತನ ಜೊತೆ ಪಕ್ಕದ ಬೆಂಡರವಾಡಿ ಗ್ರಾಮದ ಮಹದೇವಮ್ಮಳನ್ನು ಕಳೆದ ಹತ್ತು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿದ್ದು, ನಾಲ್ಕು ಹೆಣ್ಣು ಮಕ್ಕಳ ತಾಯಿಯಾಗಿರುವ ಈಕೆಯ ಒಂದು ಮಗು ತೀರಿಕೊಂಡಿದ್ದು ಮೂರು ಮಕ್ಕಳ ಜೊತೆ ವಾಸವಿದ್ದಾರೆ.
ಆದರೆ ಗಂಡು ಮಗು ಹೆರಲಿಲ್ಲ ಎಂಬ ಕಾರಣಕ್ಕೆ ಪತಿ ಆನಂದ್ ಕಿರುಕುಳ ನೀಡುವು ದರ ಜೊತೆಗೆ ತನ್ನ ಮಾವ ಸಹ ತನ್ನೊಡನೆ ಅನುಚಿತವಾಗಿ ವರ್ತಿ ಸಿದ್ದು ಇದಕ್ಕೆ ಗಂಡ ಸಹ ಕುಮ್ಮಕ್ಕು ನೀಡುತ್ತಿದ್ದ ಎಂದು ಮಹದೇವಮ್ಮ ಕಣ್ಣೀರು ಹಾಕಿದ್ದಾರೆ.
ಇವರ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ ವೇಳೆ ರಾಜಿ ಸಂದಾನ ಮಾಡಿಕೊಂಡ ಪತಿ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿ ಇರಿಸಿದ್ದು, ಆ ಸಂದರ್ಭದಲ್ಲಿ ನಾಲ್ಕನೇ ಮಗುವಿಗೆ ಗರ್ಭಿಣಿಯಾಗಿದ್ದು ಹೆರಿಗೆ ಮತ್ತು ಆರೈಕೆಗಾಗಿ ಆಕೆಯ ತಾಯಿ ಮನೆಗೆ ಬಿಟ್ಟು ಹೋಗಿದ್ದನು.
ನಾಲ್ಕನೇ ಮಗು ಸಹ ಹೆಣ್ಣಾದಾಗಿನಿಂದ ಪತ್ನಿಯಿಂದ ಆತ ದೂರವಾಗ ತೊಡಗಿದ ಎಂದು ಆಕೆ ದೂರಿದ್ದಾರೆ. ಈ ಹಿನ್ನಲೆಯಲ್ಲಿ ಮಕ್ಕಳ ಸಮೇತ ಮನೆಗೆ ಬಂದರೆ ಮಾವ ಚಿಲಕ ಹಾಕಿಕೊಂಡು ಒಳಗಿದ್ದು ತನ್ನನ್ನು ಮನೆಗೆ ಸೇರಿಸುತ್ತಿಲ್ಲ ಹೀಗಾಗಿ ಎರಡು ದಿನಗಳಿಂದಲೂ ಮಕ್ಕಳ ಜೊತೆ ಮನೆ ಬಾಗಿಲಲ್ಲೇ ಕುಳಿತಿದ್ದೇನೆ. ತನಗೆ ನ್ಯಾಯ ಸಿಗದ ಹೊರತು ಸ್ಥಳ ಬಿಟ್ಟು ಹೋಗುವು ದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಏಕಾಂಗಿ ಹೋರಾಟ ನಡೆಸುತ್ತಿರುವ ಮಹದೇವಮ್ಮ ಅವರಿಗೆ ನೈತಿಕ ಬೆಂಬಲ ನೀಡಿರುವ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಸಿಐಟಿಯು ಮುಖಂಡ ರಾದ ಮಹಾದೇವಮ್ಮ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಕಿಡಿ ಕಾರಿದರು. ಇದರ ವಿರುದ್ದ ಮಹಿಳಾ ಆಯೋಗಕ್ಕೆ ದೂರು ನೀಡುವುದರ ಜೊತೆಗೆ ಈ ಮಹಿಳೆ ಪರ ಸಂಘಟನೆ ವತಿಯಿಂದ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
