Saturday, July 27, 2024
Homeಬೆಂಗಳೂರುಪತ್ನಿಗೆ ಹೆದರಿಸಲು ಹೋಗಿ ಪ್ರಾಣ ಕಳೆದುಕೊಂಡ ಜಿಮ್ ಟ್ರೈನರ್

ಪತ್ನಿಗೆ ಹೆದರಿಸಲು ಹೋಗಿ ಪ್ರಾಣ ಕಳೆದುಕೊಂಡ ಜಿಮ್ ಟ್ರೈನರ್

ಬೆಂಗಳೂರು, ಮೇ 16- ಪತ್ನಿಗೆ ಹೆದರಿಸಲು ಆತಹತ್ಯೆಯ ನಾಟಕವಾಡಲು ಹೋಗಿ ಜಿಮ್ ತರಬೇತುದಾರ ಸಾವು ತಂದುಕೊಂಡ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ಅಮಿತ್ ಕುಮಾರ್ ಸಾಹು (28) ಮೃತಪಟ್ಟ ಜಿಮ್ ತರಬೇತುದಾರ. ಒಂದು ವರ್ಷದ ಹಿಂದೆಯಷ್ಟೇ ಪ್ರೀತಿಸಿದ ಯುವತಿ ಅಮೂಲ್ಯರನ್ನು ಪೋಷಕರ ವಿರೋಧದ ನಡುವೆಯೇ ವಿವಾಹವಾಗಿದ್ದನು.

ಬಾಗಲಕುಂಟೆಯ ಪೈಪ್ಲೈನ್ ರಸ್ತೆ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿಯ ನಿವಾಸದಲ್ಲಿ ದಂಪತಿ ವಾಸವಾಗಿದ್ದರು.ನರ್ಸಿಂಗ್ ಕೋರ್ಸ್ ಮಾಡುತ್ತಿದ್ದ ಅಮೂಲ್ಯ ಪತಿಗೆ ಸಮಯ ನೀಡುತ್ತಿರಲಿಲ್ಲ. ಹೆಚ್ಚಿನ ಸಮಯ ಮೊಬೈಲ್ನಲ್ಲೇ ಇರುತ್ತಿದ್ದರಿಂದ ಕೆಲ ತಿಂಗಳುಗಳಿಂದ ದಂಪತಿ ಜಗಳವಾಡಿಕೊಂಡಿದ್ದರು.

ಹಾಗಾಗಿ ಅಮೂಲ್ಯ ಪತಿಯಿಂದ ದೂರವಾಗಿ ಬೇರೆ ಮನೆ ಮಾಡಿಕೊಂಡು ವಾಸವಿದ್ದರು. ಹೀಗಾಗಿ ಅಮಿತ್ ಕುಮಾರ್ ಮಾನಸಿಕವಾಗಿ ಕುಗ್ಗಿದ್ದರು. ಆಗಾಗ್ಗೆ ಅಮೂಲ್ಯಗೆ ಕರೆ ಮಾಡಿ ವಾಪಸ್ ಮನೆಗೆ ಬರುವಂತೆ ಕೇಳಿಕೊಂಡರೂ ವಾಪಸ್ ಆಗಿರಲಿಲ್ಲ.

ಮೊನ್ನೆ ಸಂಜೆ 7 ಗಂಟೆ ಸುಮಾರಿನಲ್ಲಿ ಅಮೂಲ್ಯ ಅವರ ಮೊಬೈಲ್ಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದ ಅಮಿತ್ಕುಮಾರ್ ಆತಹತ್ಯೆ ಮಾಡಿಕೊಳ್ಳುವುದಾಗಿ ನೇಣು ಬಿಗಿದುಕೊಂಡಂತೆ ಹೆದರಿಸುತ್ತಿದ್ದಾಗಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದು ಬಾಗಲಗುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪತ್ನಿಯನ್ನು ಮನೆಗೆ ವಾಪಸ್ ಕರೆಸಿಕೊಳ್ಳಲು ಜೀವವನ್ನೂ ಲೆಕ್ಕಿಸದೇ ಅಮಿತ್ ಆತಹತ್ಯೆ ನಾಟಕವಾಡಲು ಹೋಗಿ ದುರಂತ ಸಾವನ್ನಪ್ಪಿರುವುದು ದುರ್ದೈವ.

RELATED ARTICLES

Latest News