Sunday, May 5, 2024
Homeರಾಜ್ಯಚಿಕ್ಕಬಳ್ಳಾಪುರ ಕಾಂಗ್ರೆಸ್ ಟಿಕೆಟ್‍ಗೆ ಭಾರಿ ಫೈಟ್

ಚಿಕ್ಕಬಳ್ಳಾಪುರ ಕಾಂಗ್ರೆಸ್ ಟಿಕೆಟ್‍ಗೆ ಭಾರಿ ಫೈಟ್

ಚಿಕ್ಕಬಳ್ಳಾಪುರ, ಮಾ.21- ಲೋಕಸಭಾ ಚುನಾವಣೆಗೆ ದಿನಗಣನೆ ಹಾಗೂ ಅಭ್ಯರ್ಥಿಗಳ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ರಕ್ಷಾ ರಾಮಯ್ಯ ಹಾಗೂ ಡಾ. ಎಂ. ವೀರಪ್ಪಮೊಯ್ಲಿ ಇವರ ಮಧ್ಯೆ ಟಿಕೆಟ್‍ಗೆ ಫೈಟ್ ನಡೆದಿದ್ದು ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ದೊರಕುವುದು ಎಂಬ ಬಗ್ಗೆ ತೀವ್ರ ಕುತೂಹಲ ಹಾಗೂ ತಳಮಳ ಕಾಂಗ್ರೆಸ್ ಪಕ್ಷದ ಮುಖಂಡರುಗಳಲ್ಲಿ ಮತ್ತು ಕಾರ್ಯಕರ್ತರಲ್ಲಿ ಉಂಟಾಗಿದೆ.

ಕಾಂಗ್ರೆಸ್ ಪಕ್ಷದಿಂದ ಈ ಹಿಂದೆ ಇದೇ ಚಿಕ್ಕಬಳಾಪುರ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ರ್ಪಧಿಸಿ ಎರಡು ಬಾರಿ ಗೆಲುವು ಸಾಧಿಸಿದ ಮಾಜಿ ಮುಖ್ಯಮಂತ್ರಿ ಡಾ.ಎಂ ವಿರಪ್ಪಮೊಯ್ಲಿ ರವರು ಈ ಬಾರಿ ಮತ್ತೆ ಇದೇ ಕ್ಷೇತ್ರದಿಂದ ಪುನರಾಯ್ಕೆ ಬಯಸಿ ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದು ಇನ್ನೂ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲೇ ದಿನದೂಡುತ್ತಿದ್ದಾರೆ ಇದರ ನಡುವೆ ಯಾರಿಗೆ ಟಿಕೆಟ್ ನೀಡಿದರೂ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವೆ ಎಂದು ಹೇಳುವ ಮೂಲಕ ಮೊಯ್ಲಿ ಅವರು ದ್ವಂದ್ವ ನಿಲುವಿನಲ್ಲಿದ್ದಾರೆ.

ಇನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎಮ್ ಆರ್.ಸೀತಾರಾಮ್ ರವರ ಪುತ್ರ ರಕ್ಷಾರಾಮಯ್ಯ ರವರು ಸಹ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾನು ಖಚಿತವಾಗಿ ಸ್ಪರ್ಧಿಸುತ್ತೇನೆ, ನನಗೆ ಗೆಲುವು ನಿಶ್ಚಿತ ಎಂಬ ನಂಬಿಕೆಯಿಂದ ಕಳೆದ 6-7 ತಿಂಗಳಿನಿಂದ ಕ್ಷೇತ್ರದಾದ್ಯಂತ ಸಂಚರಿಸಿ ಕಾಂಗ್ರೆಸ್ ಪಕ್ಷದ ಮುಖಂಡರುಗಳನ್ನು, ಕಾರ್ಯಕರ್ತರನ್ನು ನಿರಂತರ ಭೇಟಿ ಮಾಡಿ ಸಂಪರ್ಕದಲ್ಲಿ ಇದ್ದಾರೆ.

ಅದೇ ರೀತಿ ಕಾಂಗ್ರೆಸ್ ಪಕ್ಷವು ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಯುವ ಪಡೆ ರಕ್ಷಾ ರಾಮಯ್ಯ ಪರ ನಿಂತು ಗೆಲುವಿಗೆ ಅಹರ್ನಿಶಿ ಶ್ರಮಿಸುವ ವಿಶ್ವಾಸ ಇಟ್ಟಿದ್ದಾರೆ. ಇದೇ ಹುರುಪಿನಲ್ಲಿ ರಕ್ಷಾ ರಾಮಯ್ಯರವರು ಕೆಲವು ದಿನಗಳ ಹಿಂದೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವೂ ಒಳಗೊಂಡಂತೆ ಲೋಕಸಭಾ ಕ್ಷೇತ್ರದ ಬಹುತೇಕ ಕಡೆ ಸಾವಿರಾರು ಮಂದಿ ಬೆಂಬಲಿಗರೊಂದಿಗೆ ಬೈಕ್ ಮೂಲಕ ತಿರಂಗಾ ಯಾತ್ರೆ ನಡೆಸಿ ಕ್ಷೇತ್ರದ ಜನತೆಯ ಗಮನ ಸೆಳೆದಿದ್ದರಲ್ಲದೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕಾನ್ವೆಂಟ್ ನಲ್ಲಿ ಎಮ್ ಎಸ್ ರಾಮಯ್ಯ ಯೂತ್ ಫೌಂಡೇಶನ್ ವತಿಯಿಂದ ಬೃಹತ್ ಉದ್ಯೋಗ ಮೇಳ ಹಾಗೂ ನಿರುದ್ಯೋಗಿಗಳಿಗೆ ಸಾಲ ಮೇಳ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಿರುದ್ಯೋಗಿ ಯುವಕ ಯುವತಿಯರ ಗಮನ ಸೆಳೆದಿದ್ದರು.

ಹಾಗೆಯೇ ಇಡೀ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಣೇಶೋತ್ಸವ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಯುವಕರ ಗಮನ ಸೆಳೆದಿದ್ದರು.ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ರವರು ನಾನು ಈ ಹಿಂದೆ ಎರಡು ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ರ್ಪಧಿಸಿ ಗೆಲುವು ಸಾಧಿಸಿದ್ದಾರೆ. ನನ್ನ 10 ವರ್ಷಗಳ ಸಂಸತ್ ಸದಸ್ಯತ್ವದ ಅವಯಲ್ಲಿ ನಾನು ಅನೇಕ ಶಾಶ್ವತ ಉಳಿಯುವ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದೇನೆ. ಎತ್ತಿನಹೊಳೆ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಿದ್ದೆ. ಈ ಬಾರಿಯೂ ನನ್ನನ್ನೇ ಆಯ್ಕೆ ಮಾಡಿ. ಎರಡು ವರ್ಷಗಳಲ್ಲಿ ನಾನು ಎತ್ತಿನಹೊಳೆ ನೀರನ್ನು ಕ್ಷೇತ್ರದಲ್ಲಿ ಹರಿಸುತ್ತೇನೆ ಎಂದು ಅನೇಕ ಸಭೆಗಳಲ್ಲಿ ಹೇಳುತ್ತಾ ಬಂದಿದ್ದಾರೆ.

ಚುನಾವಣೆಗೆ ಕೆಲವೇ ದಿನಗಳು ಇರುವ ಹಿನ್ನೆಲೆಯಲ್ಲಿ ಅವರು ಇತ್ತೀಚೆಗಷ್ಟೇ ನಗರದ ಹೊರವಲಯದ ಕಾಲೇಜಿನಲ್ಲಿ ವಿಶ್ವಸಂಸ್ಕøತಿ ಮಹಾಯಾನ ಎಂಬ ಪುಸ್ತಕ ಬಿಡುಗಡೆ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

ಹೇಳಿ ಕೇಳಿ ಕಾಂಗ್ರೆಸ್ ಪಕ್ಷಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಭದ್ರಕೋಟೆ ಎಂದು ಈ ಇಂದಿನ ಚುನಾವಣೆಗಳ ಫಲಿತಾಂಶಗಳು ತೋರಿಸಿವೆ. ಆದರೂ ಮೋದಿ ಅಲೆಯಲ್ಲಿ ಈ ಹಿಂದಿನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿ ಎನ್ ಬಚ್ಚೇಗೌಡ ಅವರು ಗೆಲುವು ಕಾಂಗ್ರೆಸ್ ಭದ್ರ ಕೋಟೆ ಛಿದ್ರಗೊಳಿಸಿದ್ದರು.

1968ರಲ್ಲಿ ಚಿಕ್ಕಬಳ್ಳಾಪುರ ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಿ ಹೊರಹೊಮ್ಮಿದ್ದು ಆ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಉಪ ವಿಭಾಗ ವ್ಯಾಪ್ತಿ ಬಾಗೇಪಲ್ಲಿ ತಾಲೂಕಿನ ತೋಳಪಲ್ಲಿ ಸುಧಾ ವಿ ರೆಡ್ಡಿರವರು ಪ್ರಪ್ರಥಮವಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಗೊಂಡಿದ್ದರು.

ಅದಾದ ನಂತರದ ಚುನಾವಣೆಗಳಲ್ಲಿ ಎಂ. ವಿ. ಕೃಷ್ಣಪ್ಪ ಎಸ್. ಎನ್. ಪ್ರಸನ್ನಕುಮಾರ್, ವಿ.ಕೃಷ್ಣ ರಾವ್ 3 ಬಾರಿ, ಆರ್.ಎಲ್.ಜಾಲಪ್ಪ 4 ಬಾರಿ, ಡಾ.ಎಂ.ವೀರಪ್ಪ ಮೊಯ್ಲಿ 2 ಬಾರಿ ಹಾಗೂ ಬಿ.ಎನ್ .ಬಚ್ಚೇಗೌಡರವರು ಬಿಜೆಪಿ ಪಕ್ಷದಿಂದ 2019ರಲ್ಲಿ ಇದೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ರ್ಪಧಿಸಿ ಗೆಲುವು ಸಾಧಿಸಿರುವುದು ಇಲ್ಲಿನ ಹಿಂದಿನ ದಾಖಲೆಯಾಗಿದೆ.

1996ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ರ್ಪಧಿಸಿದ್ದ ರ್ಆ ಎಲ್ ಜಾಲಪ್ಪ ರವರು ಜಾತ್ಯತೀತ ಜನತಾದಳ ಪಕ್ಷದಿಂದ ಆಯ್ಕೆಗೊಂಡಿದ್ದರು ಅದಾದ ನಂತರ 2019ರಲ್ಲಿ ಬಿಎನ್ ಬಚ್ಚೇಗೌಡ ರವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ರ್ಪಧಿಸಿ ಗೆಲುವು ಸಾಧಿಸಿದ್ದರು. ಈ ಎರಡು ಅವಧಿಯನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ಅವಧಿಯಲ್ಲೂ ಕಾಂಗ್ರೆಸ್ ಪಕ್ಷದಿಂದ ಸ್ರ್ಪಧಿಸಿರುವ ಅಭ್ಯರ್ಥಿಗಳೇ ಆಯ್ಕೆ ಆಗಿರುವುದು ಈ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಬಹುಪಾಲು ಜಯ ಕೊಟ್ಟ ಕ್ಷೇತ್ರವಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದೀಗ 2024ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಲು ಶತಾಯ ಗತಾಯ ಪ್ರಯತ್ನ ನಡೆಸಿರುವ ಡಾ. ಎಂ ವೀರಪ್ಪ ಮೊಯ್ಲಿ ಹಾಗೂ ರಕ್ಷಾ ರಾಮಯ್ಯ ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವ ಜಿಜ್ಞಾಸೆಯಲ್ಲಿ ಕ್ಷೇತ್ರ ಉಳಿದಿದೆ.

ಒಟ್ಟಾರೆಯಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸ್ಪರ್ಧೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಡಾ.ಎಂ.ವೀರಪ್ಪ ಮೊಯ್ಲಿ, ರಕ್ಷಾ ರಾಮಯ್ಯ ಹಾಗೂ ಬಿಜೆಪಿ ಪಕ್ಷದಿಂದ ಅಲೋಕ್ ವಿಶ್ವನಾಥ್, ಸುಮಲತಾ, ಡಾಕ್ಟರ್ ಕೆ.ಸುಧಾಕರ್, ಇದೀಗ ಮಾಜಿ ಮುಖ್ಯಮಂತ್ರಿ ಡಿ.ವಿ .ಸದಾನಂದ ಗೌಡ ಇವರುಗಳ ಮಧ್ಯೆ ಟಿಕೆಟ್ ಪೈಪೋಟಿ ನಡೆದಿದೆ ಯಾರ ಕೊರಳಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ಹೂಮಾಲೆ ಹಾಕುವುದೋ ಕಾದು ನೋಡಬೇಕು.

(ಎಂ.ಕೃಷ್ಣಪ್ಪ, ಚಿಕ್ಕಬಳ್ಳಾಪುರ)

RELATED ARTICLES

Latest News