Homeರಾಷ್ಟ್ರೀಯ4 ಆಧಾರಸ್ತಂಭಗಳೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡ 18ನೇ ಬ್ರಿಕ್ಸ್ ಶೃಂಗಸಭೆ

4 ಆಧಾರಸ್ತಂಭಗಳೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡ 18ನೇ ಬ್ರಿಕ್ಸ್ ಶೃಂಗಸಭೆ

ನವದೆಹಲಿ, ಸೆ. 13: ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ ಎಂಬ ನಾಲ್ಕು ಪ್ರಮುಖ ಆಧಾರಸ್ತಂಭಗಳೊಂದಿಗೆ ಜಾಗತಿಕವಾಗಿ ಗಮನ ಸೆಳೆದಿದ್ದ 18ನೇ ಬ್ರಿಕ್ಸ್‌ ಶೃಂಗಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಈ ಶೃಂಗಸಭೆಯ ಮೂಲಕ ಭಾರತವು ವಿಶ್ವಕ್ಕೆ ಮಹತ್ವದ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು.

ಶೃಂಗಸಭೆಯ ಸಮಾರೋಪ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮುಖ್ಯವಾಗಿ ನಾಲ್ಕು ಪ್ರಮುಖ ಆಧಾರಸ್ತಂಭಗಳನ್ನು ಪ್ರತಿಪಾದಿಸಿದರು. ಜಾಗತಿಕ ಬಿಕ್ಕಟ್ಟುಗಳು ಮತ್ತು ಪೂರೈಕೆ ಸರಪಳಿಯಲ್ಲಿನ ವ್ಯತ್ಯಯಗಳನ್ನು ಎದುರಿಸಲು ಸ್ಥಿತಿಸ್ಥಾಪಕತ್ವ, ನವೋದ್ಯಮಿಗಳಿಗೆ ಉತ್ತೇಜನ ನೀಡಲು ನಾವೀನ್ಯತೆ, ಸರ್ಕಾರಗಳಷ್ಟೇ ಅಲ್ಲದೆ ರೈತರು, ಮಹಿಳೆಯರು ಮತ್ತು ಯುವಕರನ್ನೂ ಒಳಗೊಂಡ ಸಹಕಾರ ಹಾಗೂ ಜಿಯೋಸ್ಪೇಷಿಯಲ್‌ ತಂತ್ರಜ್ಞಾನ ಆಧಾರಿತ ಕೃಷಿ ಜಾಲದ ಮೂಲಕ ಸುಸ್ಥಿರತೆಗೆ ಒತ್ತು ನೀಡಿದರು.

ತಂತ್ರಜ್ಞಾನ ಮತ್ತು ನಿರ್ಣಾಯಕ ಖನಿಜಗಳ ಆಯುಧೀಕರಣವು ಜಾಗತಿಕ ಮಟ್ಟದ ಹಂಚಿಕೆಯ ಪ್ರಗತಿಗೆ ಅಡ್ಡಿಯಾಗಬಹುದು ಎಂದು ಅವರು ಪರೋಕ್ಷವಾಗಿ ಚೀನಾಕ್ಕೆ ಎಚ್ಚರಿಕೆ ನೀಡಿದರು. ‘ತಂತ್ರಜ್ಞಾನ ಮತ್ತು ನಿರ್ಣಾಯಕ ಖನಿಜಗಳ ಆಯುಧೀಕರಣವು ನಮ್ಮ ಹಂಚಿಕೆಯ ಪ್ರಗತಿಗೆ ಅಡ್ಡಿಯಾಗಬಹುದು. ಆದ್ದರಿಂದ ತಂತ್ರಜ್ಞಾನದ ಅಳವಡಿಕೆಯಲ್ಲಿ ಎಲ್ಲರನ್ನೂ ಒಳಗೊಳ್ಳುವಿಕೆಗೆ ಒತ್ತು ನೀಡಬೇಕು’ ಎಂದು ಮೋದಿ ಹೇಳಿದರು.

ವಿಶ್ವದ ಅಪರೂಪದ ಭೂಧಾತುಗಳಲ್ಲಿ ಶೇ. 90ರಷ್ಟನ್ನು ಚೀನಾ ಸಂಸ್ಕರಿಸುತ್ತಿದ್ದು, ಭಾರತ ತನ್ನ ಉತ್ಪಾದನೆ ಮತ್ತು ಶುದ್ಧ ಇಂಧನ ವಲಯವನ್ನು ವಿಸ್ತರಿಸಲು ಇವು ನಿರ್ಣಾಯಕವಾಗಿವೆ. ಈ ಹಿನ್ನೆಲೆಯಲ್ಲಿ ಬ್ರಿಕ್ಸ್‌ ಲಾಜಿಸ್ಟಿಕ್ಸ್‌ ಮತ್ತು ಪೂರೈಕೆ ಸರಪಳಿ ಸಹಕಾರ ಚೌಕಟ್ಟು ವಿಶ್ವಾಸಾರ್ಹತೆ ತರಲಿದೆ ಎಂದು ಅವರು ತಿಳಿಸಿದರು.

ಸೌರಫಲಕಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಉತ್ಪನ್ನಗಳ ತಯಾರಿಕೆಗೆ ಅಗತ್ಯವಿರುವ ಅಪರೂಪದ ಭೂಧಾತುಗಳ ಸಂಸ್ಕರಣೆಯಲ್ಲಿ ಚೀನಾ ಪ್ರಮುಖ ಸ್ಥಾನ ಹೊಂದಿದೆ. ಕಳೆದ ವರ್ಷ ಅಮೆರಿಕದೊಂದಿಗಿನ ವ್ಯಾಪಾರ ಸಂಘರ್ಷದ ಸಂದರ್ಭದಲ್ಲಿ ಚೀನಾ ಕೆಲವು ಅಪರೂಪದ ಭೂಧಾತುಗಳು ಮತ್ತು ಇತರ ಪ್ರಮುಖ ವಸ್ತುಗಳ ರಫ್ತಿನ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ನಿರ್ಣಾಯಕ ಖನಿಜಗಳ ವಿಶ್ವಾಸಾರ್ಹ ಪೂರೈಕೆ ಪ್ರಮುಖ ವಿಷಯವಾಗಿದೆ. ಉತ್ಪಾದನೆ ಮತ್ತು ಶುದ್ಧ ಇಂಧನ ಕ್ಷೇತ್ರಗಳನ್ನು ವಿಸ್ತರಿಸಲು ಭಾರತ ಮುಂದಾಗಿರುವ ಸಂದರ್ಭದಲ್ಲಿ, ಪೂರೈಕೆ ಸರಪಳಿಗಳ ವೈವಿಧ್ಯೀಕರಣ ಮತ್ತು ಸ್ಥಿತಿಸ್ಥಾಪಕತ್ವ ಮತ್ತಷ್ಟು ಮಹತ್ವ ಪಡೆದುಕೊಂಡಿವೆ.

‘ನಿಮ್ಮ ಸಹಕಾರ ಮತ್ತು ಬೆಂಬಲದೊಂದಿಗೆ ನಮ್ಮ ಹಂಚಿಕೆಯ ದೃಷ್ಟಿಕೋನವನ್ನು ಗೆಲುವು–ಗೆಲುವಿನ ಸಹಯೋಗವಾಗಿ ಪರಿವರ್ತಿಸಲು ಸಾಧ್ಯವಾಗಿದೆ’ ಎಂದು ಮೋದಿ ಹೇಳಿದರು. ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಪ್ರತಿನಿಧಿಸುವ ಗ್ಲೋಬಲ್‌ ಸೌತ್‌ಗೆ ಬ್ರಿಕ್ಸ್‌ನಲ್ಲಿ ಹೆಚ್ಚಿನ ಪ್ರಾತಿನಿಧ್ಯ ಮತ್ತು ಧ್ವನಿ ದೊರೆಯಬೇಕು ಎಂಬ ನಿಲುವನ್ನು ಅವರು ಮತ್ತೊಮ್ಮೆ ಪ್ರತಿಪಾದಿಸಿದರು.

ಬ್ರಿಕ್ಸ್‌ ಮೂಲಕ ಎಲ್ಲರನ್ನೂ ಒಳಗೊಂಡ ಜಾಗತಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಭಾರತದ ಉದ್ದೇಶವಾಗಿದೆ. ಬ್ರಿಕ್ಸ್‌ನಲ್ಲಿ ಅಭಿವೃದ್ಧಿಪಡಿಸುವ ಪರಿಹಾರಗಳು ಸದಸ್ಯ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗದೆ, ಗ್ಲೋಬಲ್‌ ಸೌತ್‌ನ ಅಗತ್ಯಗಳಿಗೂ ಲಭ್ಯವಾಗಬೇಕು ಎಂದು ಅವರು ಹೇಳಿದರು.

ಗ್ಲೋಬಲ್‌ ಸೌತ್‌ ರಾಷ್ಟ್ರಗಳ ಧ್ವನಿಯನ್ನು ಆಲಿಸುವುದು, ಅವುಗಳ ಅನುಭವಗಳಿಗೆ ಗೌರವ ನೀಡುವುದು ಮತ್ತು ಅವುಗಳೊಂದಿಗೆ ಸಮಾಲೋಚಿಸಿ ಪರಿಹಾರಗಳನ್ನು ರೂಪಿಸುವುದರಿಂದ ಬ್ರಿಕ್ಸ್‌ ಮೇಲಿನ ಆ ರಾಷ್ಟ್ರಗಳ ವಿಶ್ವಾಸ ಹೆಚ್ಚಾಗಿದೆ ಎಂದು ತಿಳಿಸಿದರು. ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ತ್ವರಿತ ಪ್ರತಿಕ್ರಿಯೆಗಾಗಿ ಬ್ರಿಕ್ಸ್‌ ಮುಂಚಿತ ಎಚ್ಚರಿಕೆ ವ್ಯವಸ್ಥೆಯನ್ನು ರೂಪಿಸುವ ಕುರಿತು ಒಮ್ಮತ ಸಾಧಿಸಿರುವುದು ಪ್ರಮುಖ ಸಾಧನೆಯಾಗಿದೆ ಎಂದು ಪ್ರಧಾನಿ ಹೇಳಿದರು.

ನಾವೀನ್ಯತೆ ಕ್ಷೇತ್ರದಲ್ಲಿ ಬ್ರಿಕ್ಸ್‌ ಇನ್‌ಕ್ಯುಬೇಟರ್‌ ನೆಟ್‌ವರ್ಕ್‌ ಮೂಲಕ ಸ್ಟಾರ್ಟ್‌ಅಪ್‌ಗಳು ಮತ್ತು ಇನ್‌ಕ್ಯುಬೇಟರ್‌ಗಳನ್ನು ಸಂಪರ್ಕಿಸುವ ಪ್ರಯತ್ನ ನಡೆಯಲಿದೆ. ನವೀನ ಹಾಗೂ ವಿಸ್ತರಿಸಬಹುದಾದ ಪರಿಹಾರಗಳಿಗೆ ಉತ್ತೇಜನ ನೀಡಲು ‘ಬ್ರಿಕ್ಸ್‌ ಸ್ಟಾರ್ಟ್‌ಅಪ್‌ ನಾವೀನ್ಯತಾ ನಿಧಿ’ ಸ್ಥಾಪಿಸುವ ಪ್ರಸ್ತಾವವನ್ನೂ ಭಾರತ ಮುಂದಿಟ್ಟಿದೆ.

RELATED ARTICLES
spot_img

Latest News