ಕೋಲ್ಕತ್ತಾ, ಏ.10- ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಇಂದು ತನ್ನ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದ್ದು, ಅಕ್ರಮ ವಲಸೆಯ ವಿರುದ್ಧ ಕಠಿಣ ಕ್ರಮ, ಮಹಿಳೆಯರು ಹಾಗೂ ನಿರುದ್ಯೋಗಿ ಯುವಕರಿಗೆ ಮಾಸಿಕ 3,000 ಸಹಾಯಧನ ಸೇರಿದಂತೆ ಹಲವು ಪ್ರಮುಖ ಭರವಸೆಗಳನ್ನು ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಘೋಷಣಾ ಪತ್ರವನ್ನು ಬಿಡುಗಡೆ ಮಾಡಿದ್ದು, ಇದನ್ನು ಸೋನಾರ್ ಬಾಂಗ್ಲಾ ನಿರ್ಮಾಣದ ಮಾರ್ಗನಕ್ಷೆ ಎಂದು ವಿವರಿಸಿದರು.ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದರೆ.
ಕಳೆದ 15 ವರ್ಷಗಳ ಆಡಳಿತವು ರಾಜ್ಯ ಜನತೆಗೆ ದುಸ್ವಪ್ನವಾಗಿತ್ತು,ಬಿಜೆಪಿಯ ಸಂಕಲ್ಪ ಪತ್ರವು ರೈತರು, ಯುವಕರು ಮತ್ತು ಮಹಿಳೆಯರಿಗೆ ಹೊಸ ದಿಕ್ಕು ನೀಡಲಿದೆ ಎಂದರು. ಬಂಗಾಳದ ಸಂಸ್ಕೃತಿಗೆ ಗೌರವ ನೀಡುವ ಪ್ರತಿಯೊಬ್ಬ ನಾಗರಿಕರಿಗೆ ಹೊಸ ಆಶೆಯನ್ನು ನೀಡುತ್ತದೆ ಎಂದು ಶಾ ಹೇಳಿದರು.
ಅಕ್ರಮ ವಲಸೆ ಮತ್ತು ಗಡಿಭದ್ರತೆಯನ್ನು ಚುನಾವಣೆಯ ಪ್ರಮುಖ ವಿಷಯವಾಗಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಪತ್ತೆಹಚ್ಚಿ , ದೆೇಶದಿಂದ ಹೊರಹಾಕು ಎಂಬ ನೀತಿಯನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿದರು. ಬಂಗಾಳದಲ್ಲಿ ಅಕ್ರಮ ವಲಸೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಲಾಗುತ್ತದೆ,ಎಂದು ಹೇಳಿದ ಅವರು ಎಲ್ಲಾ ನಾಗರಿಕರಿಗೆ ಸಮಾನ ಕಾನೂನು ಜಾರಿಯಾಗಲಿದೆ ಎಂದು ತಿಳಿಸಿದರು.
ಧಾರ್ಮಿಕ ಸ್ವಾತಂತ್ರ್ಯವನ್ನು ಖಚಿತಪಡಿಸಲು ಹೊಸ ಕಾನೂನು ತರಲಾಗುತ್ತದೆ.ಗೋಸಾಗಾಟವನ್ನು ನಿಲ್ಲಿಸುವುದು ಹಾಗೂ ರಾಜ್ಯದ ಗಡಿಭದ್ರತೆಯನ್ನು ಬಲಪಡಿಸುವುದಕ್ಕೂ ಬಿಜೆಪಿ ಯೋಜನೆ ಘೋಷಿಸಿದೆ.
ಮಹಿಳಾ ಮತದಾರರನ್ನು ಗಮನದಲ್ಲಿಟ್ಟು, ರಾಜ್ಯದ ಎಲ್ಲಾ ಮಹಿಳೆಯರಿಗೆ ಮಾಸಿಕ 3,000 ಹಣ ವರ್ಗಾವಣೆ ಮಾಡುವ ಭರವಸೆ ನೀಡಲಾಗಿದೆ. ಜೊತೆಗೆ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವುದಾಗಿ ಬಿಜೆಪಿ ತಿಳಿಸಿದೆ.
ನಿರುದ್ಯೋಗಿ ಯುವಕರಿಗೂ ಮಾಸಿಕ 3,000 ಭತ್ಯೆ ನೀಡಲಾಗುವುದು ಎಂದು ಘೋಷಿಸಲಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದ 45 ದಿನಗಳ ಒಳಗೆ ರಾಜ್ಯ ನೌಕರರಿಗಾಗಿ 7ನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದಾರೆ.
