ನವದೆಹಲಿ, ಆ.15- ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಿಂದ ಸತತ ಎರಡನೇ ವರ್ಷವೂ ದೂರ ಉಳಿದಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಈ ರಾಷ್ಟ್ರೀಯ ಉತ್ಸವದ ಕಾರ್ಯಕ್ರಮದಿಂದ ಕಾಂಗ್ರೆಸ್ ನಾಯಕರು ದೂರ ಉಳಿಯಲು, ಕಳೆದ ವರ್ಷಗಳಲ್ಲಿ ಎದುರಾದ ಶಿಷ್ಟಾಚಾರ ಉಲ್ಲಂಘನೆ ಮತ್ತು ಆಸನ ಹಂಚಿಕೆಯ ವಿವಾದಗಳು ಮುಖ್ಯ ಕಾರಣವಾಗಿವೆ.
2024ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ಹಾಗೂ ಕ್ಯಾಬಿನೆಟ್ ಸಚಿವ ಸ್ಥಾನಮಾನ ಹೊಂದಿರುವ ರಾಹುಲ್ ಗಾಂಧಿ ಅವರಿಗೆ ಕೆಂಪುಕೋಟೆಯ ಸಮಾರಂಭದಲ್ಲಿ ಐದನೇ ಸಾಲಿನಲ್ಲಿ ಆಸನ ಕಲ್ಪಿಸಲಾಗಿತ್ತು.
ಶಿಷ್ಟಾಚಾರದ ಪ್ರಕಾರ ವಿಪಕ್ಷ ನಾಯಕರು ಮುಂಚೂಣಿಯಲ್ಲಿ ಕುಳಿತುಕೊಳ್ಳಬೇಕಿದ್ದರೂ, ಒಲಿಂಪಿಕ್ ಪದಕ ವಿಜೇತರಿಗೆ ಮುಂಭಾಗದಲ್ಲಿ ಸ್ಥಳಾವಕಾಶ ಕಲ್ಪಿಸಲು ಆಸನಗಳನ್ನು ಬದಲಾಯಿಸಲಾಗಿತ್ತು ಎಂದು ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿತ್ತು.
ಈ ಹಿಂದಿನ ಆಸನ ಹಂಚಿಕೆಯು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮತ್ತು ವಿರೋಧ ಪಕ್ಷದ ಸ್ಥಾನದ ಗೌರವಕ್ಕೆ ಮಾಡಿದ ಅಪಮಾನ ಎಂದು ಕಾಂಗ್ರೆಸ್ ತೀವ್ರವಾಗಿ ಆಕ್ಷೇಪಿಸಿತ್ತು. ಮತ್ತೊಂದೆಡೆ, ಆಡಳಿತ ಪಕ್ಷ ಹಾಗೂ ಅದರ ಮುಖಂಡರು, ರಾಷ್ಟ್ರೀಯ ಹಬ್ಬದ ಪ್ರಮುಖ ಕಾರ್ಯಕ್ರಮಗಳಿಂದ ಕಾಂಗ್ರೆಸ್ ನಾಯಕರು ಸತತವಾಗಿ ದೂರ ಉಳಿಯುತ್ತಿರುವುದು ಅವರ ರಾಜಕೀಯ ಅಸಹನೆ ಮತ್ತು ರಾಷ್ಟ್ರೀಯ ಸಂದರ್ಭಗಳ ಬಗ್ಗೆ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಕೆಂಪುಕೋಟೆಯ ಅಧಿಕೃತ ಸಮಾರಂಭದಲ್ಲಿ ಭಾಗವಹಿಸುವ ಬದಲು, ಕಾಂಗ್ರೆಸ್ ನಾಯಕರು ದೆಹಲಿಯ ಪಕ್ಷದ ಕಚೇರಿ (ಇಂದಿರಾ ಭವನ)ದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರತಿಜ್ಞೆಗೈದರು.
ಸಂಸತ್ತಿನ ಅಧಿವೇಶನಗಳ ಮುಕ್ತಾಯದ ಬೆನ್ನಲ್ಲೇ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಇಂತಹ ರಾಜಕೀಯ ಬಿಕ್ಕಟ್ಟುಗಳು ಮತ್ತು ಶೀತಲ ಸಮರವು ರಾಷ್ಟ್ರೀಯ ದಿನಾಚರಣೆಗಳ ವೇದಿಕೆಯಲ್ಲೂ ಮುಂದುವರಿದಿರುವುದು ಪ್ರಸ್ತುತ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
