ರಾಂಚಿ, ಆ.27 (ಪಿಟಿಐ)- ಮಾನವ ಮತ್ತು ಪ್ರಕೃತಿಯ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ ರಕ್ಷಾ ಬಂಧನದ ಸಂದರ್ಭದಲ್ಲಿ ಜಾರ್ಖಂಡ್ನ 700 ಹಳ್ಳಿಗಳ ಸಾವಿರಾರು ಗ್ರಾಮಸ್ಥರು ನಾಳೆ ಸುಮಾರು ಒಂದು ಲಕ್ಷ ಮರಗಳಿಗೆ ರಾಖಿ ಕಟ್ಟಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
24 ಜಿಲ್ಲೆಗಳ ಆಯ್ದ ಹಳ್ಳಿಗಳಲ್ಲಿ ಮೂರು ಲಕ್ಷ ಮರಗಳಿಗೆ ರಾಖಿ ಕಟ್ಟುವ ಗುರಿಯೊಂದಿಗೆ ಒಂದು ತಿಂಗಳ ಕಾಲ ನಡೆಯಲಿರುವ ‘ಮರ ಉಳಿಸಿ’ ಅಭಿಯಾನದ ಭಾಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಸಂಜೀವ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಗುಮ್ಲಾ ಜಿಲ್ಲೆಯ ಜೋರಾದ್ ಗ್ರಾಮದಲ್ಲಿ ನಾಳೆ ಮರಕ್ಕೆ ರಾಖಿ ಕಟ್ಟುವ ಮೂಲಕ ಕುಮಾರ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. “ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಬಾಂಧವ್ಯದ ಹಬ್ಬ. ಈ ದಿನ ಸಹೋದರರು ತಮ್ಮ ಸಹೋದರಿಯರನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾರೆ. ಅದೇ ರೀತಿ, ನಮ್ಮ ಜೀವನ ಅವಲಂಬಿಸಿರುವ ಪರಿಸರವನ್ನು ರಕ್ಷಿಸುವುದು ನಮ್ಮ ಅತ್ಯುನ್ನತ ಕರ್ತವ್ಯವಾಗಿದೆ” ಎಂದು ಕುಮಾರ್ ಹೇಳಿದ್ದಾರೆ.
ಜನರು ಪ್ರಕೃತಿಯೊಂದಿಗೆ ಭಾವನಾತ್ಮಕವಾಗಿ ಬೆರೆಯುವಂತೆ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ. ರಾಖಿ ಕಟ್ಟುವ ಮೂಲಕ ಮರಗಳನ್ನು ಸಂರಕ್ಷಿಸುವ ಪ್ರತಿಜ್ಞೆ ಮಾಡಲಾಗುತ್ತದೆ. ರಕ್ಷಾ ಬಂಧನದ ದಿನ 700 ಹಳ್ಳಿಗಳ ಸುಮಾರು ಒಂದು ಲಕ್ಷ ಮರಗಳಿಗೆ ರಾಖಿ ಕಟ್ಟುವ ಗುರಿ ಹೊಂದಲಾಗಿದ್ದು, ಒಂದು ತಿಂಗಳ ಅವಧಿಯಲ್ಲಿ 24 ಜಿಲ್ಲೆಗಳ ಸುಮಾರು ಮೂರು ಲಕ್ಷ ಮರಗಳಿಗೆ ರಾಖಿ ಕಟ್ಟಲಾಗುವುದು ಎಂದು ಅವರು ತಿಳಿಸಿದ್ದಾರೆ.
2004ರಲ್ಲಿ ಆರಂಭವಾದ ಅಭಿಯಾನ
ಕುಮಾರ್ ಅವರ ಪರಿಕಲ್ಪನೆಯ ಈ ಉಪಕ್ರಮವು 2004ರಲ್ಲಿ ಧನ್ಬಾದ್ ಜಿಲ್ಲೆಯ ತುಂಡಿ ಬ್ಲಾಕ್ನ ಮಾವೋವಾದಿ ಪೀಡಿತ ಲುಕೈಯಾ ಗ್ರಾಮದಿಂದ ಆರಂಭವಾಯಿತು. ಅಂದಿನಿಂದ ರಾಜ್ಯಾದ್ಯಂತ 12,000ಕ್ಕೂ ಹೆಚ್ಚು ಹಳ್ಳಿಗಳನ್ನು ಈ ಕಾರ್ಯಕ್ರಮದೊಂದಿಗೆ ಸಂಪರ್ಕಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಉಪಕ್ರಮದ ಮೂಲಕ ಲುಕೈಯಾ ಗ್ರಾಮದಲ್ಲಿ 20,000ಕ್ಕೂ ಹೆಚ್ಚು ಮಹುವಾ ಮರಗಳನ್ನು ಸಂರಕ್ಷಿಸಲಾಗಿದೆ. ಈ ಮರಗಳು ಈಗ ಗ್ರಾಮಸ್ಥರ ಜೀವನೋಪಾಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿವೆ.
ಇದು ಒಂದೇ ಗ್ರಾಮದ ಉದಾಹರಣೆಯಲ್ಲ. ಈ ಅಭಿಯಾನದಿಂದ ಹಲವು ಹಳ್ಳಿಗಳಲ್ಲಿ ಸಣ್ಣ ಅರಣ್ಯ ಉತ್ಪನ್ನಗಳ ಲಭ್ಯತೆ ಹೆಚ್ಚಿದ್ದು, ಅವು ಗ್ರಾಮಸ್ಥರ ಜೀವನೋಪಾಯಕ್ಕೆ ನೆರವಾಗಿವೆ ಎಂದು ಕುಮಾರ್ ತಿಳಿಸಿದ್ದಾರೆ. ಜಾರ್ಖಂಡ್ನ ಅರಣ್ಯ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿಯೂ ಈ ಉಪಕ್ರಮ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.
