ಪಟ್ನಾ,ಏ.10- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ.ಈ ಪ್ರಕರಣ ದೇಶಾದ್ಯಂತ ಆತಂಕಕ್ಕೆ ಕಾರಣವಾಗಿದ್ದು,ಆರೋಪಿಗಳಲ್ಲಿ ಪ್ರಮುಖನಾದ ಅಮನ್ ತಿವಾರಿ, ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಗೆ ಇಮೇಲ್ ಕಳುಹಿಸಿ, ಮೋದಿ ಅವರನ್ನು ಹತ್ಯೆ ಮಾಡುವ ಪ್ರಸ್ತಾಪ ಮಾಡಿದ್ದಾನೆ.
ಇದರ ಪ್ರತಿಯಾಗಿ ದೊಡ್ಡ ಮೊತ್ತದ ಹಣವನ್ನು ಬೇಡಿಕೆ ಇಟ್ಟಿದ್ದನು. ಈ ಕೃತ್ಯವನ್ನು ನೆರವೇರಿಸಲು 22 ದಿನಗಳ ಅವಧಿಯನ್ನು ನೀಡುವಂತೆ ಕೂಡ ಕೇಳಿಕೊಂಡಿದ್ದನುಎಂಬ ಆಗಾತಕಾರಿ ಅಂಶ ಬೆಳಕಿಗೆ ಬಂದಿದೆ.
ಈ ಇಮೇಲ್ ಕುರಿತು ಸಿಐಎ ಭಾರತ ಸರ್ಕಾರಕ್ಕೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾಹಿತಿ ನೀಡಿದ್ದು, ಬಳಸಿದ ಐಪಿ ವಿಳಾಸವನ್ನೂ ಹಂಚಿಕೊಂಡಿದೆ ಎಂದು ತಿಳಿದುಬಂದಿದೆ. ಈ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಿಹಾರದ ಬಕ್ಸರ್ ಜಿಲ್ಲೆಯ ಡುಮ್ರಾಂ ಉಪವಿಭಾಗದ ಸಿಮ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮನ್ ತಿವಾರಿಯನ್ನು ಬಂಧಿಸಿದರು.
ನಂತರ ಅವನ ವಿಚಾರಣೆಯ ಆಧಾರದ ಮೇಲೆ ಇನ್ನಿಬ್ಬರು ಸಹಚರರನ್ನು ಬಂಧಿಸಲಾಯಿತು.ಆರೋಪಿಗಳ ಮೊಬೈಲ್ ಫೋನ್, ಲ್ಯಾಪ್ಟಾಪ್ ಹಾಗೂ ಇತರೆ ಸಾಧನಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಬಕ್ಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಂ ಆರ್ಯಾ ತಿಳಿಸಿದ್ದಾರೆ.
ವಿಚಾರಣೆಯಲ್ಲಿ ಅಮನ್ ತಿವಾರಿಗೆ ಹಿಂದಿನಿಂದಲೂ ಅಪರಾಧ ಹಿನ್ನೆಲೆ ಇರುವುದೂ ಬೆಳಕಿಗೆ ಬಂದಿದೆ. 2022ರಲ್ಲಿ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಿದ ಪ್ರಕರಣದಲ್ಲೂ ಅವನು ಬಂಧಿತನಾಗಿದ್ದನು. ಆ ಸಮಯದಲ್ಲಿ ಅಪ್ರಾಪ್ತ ವಯಸ್ಸಿನವನಾಗಿದ್ದ ಕಾರಣ ಕಾನೂನು ಸಡಿಲಿಕೆ ದೊರೆತಿತ್ತು.
ಪ್ರಸ್ತುತ, ಈ ಸಂಚಿನ ಹಿಂದೆ ದೊಡ್ಡ ಜಾಲವಿದೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ. ಸೈಬರ್ ದೃಷ್ಟಿಯಿಂದಲೂ ಪ್ರಕರಣವನ್ನು ಪರಿಶೀಲಿಸಲಾಗುತ್ತಿದೆ. ಅಂತರರಾಷ್ಟ್ರೀಯ ಸಂಪರ್ಕಗಳನ್ನೂ ತನಿಖೆ ಮಾಡಲಾಗುತ್ತಿದೆ.ಈ ಪ್ರಕರಣದಲ್ಲಿ ಇನ್ನಷ್ಟು ಮಹತ್ವದ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
