ಝಾರ್ಗ್ರಾಮ್, ಏ.20- ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಬಿರುಸಿನ ಪ್ರಚಾರ ನಡೆಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯರೊಂದಿಗೆ ಬೆರೆತು ಬೀದಿ ಬದಿಯಲ್ಲಿ ಝಲ್ ಮುರಿ ತಿಂಡಿ ತಿಂದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಬರ್ಜೋರಾ ಮತ್ತು ಬಲರಾಮ್ಪುರಗಳಲ್ಲಿ ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ, ನಿನ್ನೆ ಮಧ್ಯಾಹ್ನದ ವೇಳೆಗೆ ಬುಡಕಟ್ಟು ಪ್ರಾಬಲ್ಯದ ಜಾರ್ಗ್ರಾಮ್ ತಲುಪಿದರು. ಅಲ್ಲಿನ ಸಮಾವೇಶದ ನಂತರ, ಹೆಲಿಪ್ಯಾಡ್ ಕಡೆಗೆ ಸಾಗುವ ದಾರಿಯಲ್ಲಿ ಪ್ರಧಾನಿಯವರು ಹಠಾತ್ ಆಗಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಲು ಸೂಚಿಸಿದರು. ಬಂಗಾಳಿ ರುಚಿಗೆ ಮನಸೋತ ಮೋದಿ ರಸ್ತೆಯ ಬದಿಯಲ್ಲಿ ಸ್ಥಳೀಯ ವ್ಯಾಪಾರಿಯೊಬ್ಬರು ಸಿದ್ಧಪಡಿಸುತ್ತಿದ್ದ ಬಂಗಾಳದ ಪ್ರಸಿದ್ಧ ತಿಂಡಿ ಝಲ್ ಮುರಿ ಪ್ರಧಾನಿಯವರ ಗಮನ ಸೆಳೆಯಿತು.
ಕಾರಿನಿಂದ ಇಳಿದ ಮೋದಿ ಅವರು ನೇರವಾಗಿ ವ್ಯಾಪಾರಿಯ ಬಳಿಗೆ ತೆರಳಿ, ಅಲ್ಲಿಯೇ ತಯಾರಾದ ಬಿಸಿಬಿಸಿ ಮತ್ತು ಖಾರವಾದ ಝಲ್ ಮುರಿಯನ್ನು ಸವಿದರು.ಕಡಲೆಕಾಯಿ, ಸಾಸಿವೆ ಎಣ್ಣೆ, ಈರುಳ್ಳಿ ಮತ್ತು ವಿಶೇಷ ಮಸಾಲೆಯಿಂದ ಕೂಡಿದ ಈ ತಿಂಡಿಯನ್ನು ಸವಿಯುತ್ತಾ, ಪ್ರಧಾನಿಯವರು ಸ್ಥಳೀಯ ಜನರೊಂದಿಗೆ ಕೆಲ ಕಾಲ ಮಾತನಾಡಿದರು.ದೇಶದ ಪ್ರಧಾನಿಯೇ ರಸ್ತೆ ಬದಿಯ ತಿಂಡಿಯನ್ನು ಸವಿಯುತ್ತಿರುವುದನ್ನು ಕಂಡ ಸ್ಥಳೀಯರು ಆಶ್ಚರ್ಯ ಮತ್ತು ಸಂತೋಷ ವ್ಯಕ್ತಪಡಿಸಿದರು.
ಅನೇಕರು ಈ ಕ್ಷಣವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದರು.ಈ ಕುರಿತು ಎಕ್್ಸನಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ, ಬಂಗಾಳದ ರುಚಿ ಯಾವಾಗಲೂ ವಿಶಿಷ್ಟವಾದುದು. ಜಾರ್ಗ್ರಾಮ್ನ ಝಲ್ ಮುರಿ ಅತ್ಯಂತ ಸ್ವಾದಿಷ್ಟವಾಗಿತ್ತು ಮತ್ತು ಇದು ನನ್ನ ಸುದೀರ್ಘ ದಿನದ ಪ್ರಚಾರಕ್ಕೆ ಹೊಸ ಚೈತನ್ಯ ನೀಡಿತು ಎಂದಿದ್ದಾರೆ.
ಝಾರ್ಗ್ರಾಮ್ ಮತ್ತು ಸುತ್ತಮುತ್ತಲಿನ ಬುಡಕಟ್ಟು ಪ್ರದೇಶಗಳಲ್ಲಿ ಜನರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಲು ಪ್ರಧಾನಿಯವರ ಈ ಸರಳ ನಡವಳಿಕೆ ಸಹಾಯ ಮಾಡಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಬಂಗಾಳದ ರಾಜಕೀಯ ಸಮರದಲ್ಲಿ ಮೋದಿ ಸವಿದ ಝಲ್ ಮುರಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
