ಮುಂಬೈ,ಜೂ.11- ಬಂಗಾಳ ಮಾದರಿಯಲ್ಲೇ ಮಹಾರಾಷ್ಟ್ರ ರಾಜಕಾರಣದಲ್ಲೂ ರಾಜಕೀಯ ಸಂಚಲನ ಸೃಷ್ಟಿಯಾಗುವ ಸಾಧ್ಯತೆಗಳಿವೆ.ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಒಟ್ಟು 9 ಲೋಕಸಭಾ ಸಂಸದರ ಪೈಕಿ ಬರೋಬ್ಬರಿ ಏಳು ಮಂದಿ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನೇತೃತ್ವದ ಶಿವಸೇನೆ ಬಣದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಬೆಳವಣಿಗೆಯು ರಾಜ್ಯದಲ್ಲಿ ಮತ್ತೊಂದು ದೊಡ್ಡ ರಾಜಕೀಯ ಹೈಡ್ರಾಮಕ್ಕೆ ಮುನ್ನುಡಿ ಬರೆಯುವ ಸಾಧ್ಯತೆಗಳಿದ್ದು, ಮಾಹಿತಿಗಳ ಪ್ರಕಾರ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಪುತ್ರ, ಲೋಕಸಭಾ ಸಂಸದ ಶ್ರೀಕಾಂತ್ ಶಿಂಧೆ ಅವರು ಕಳೆದ ಆರು ತಿಂಗಳಿನಿಂದ ಉದ್ಧವ್ ಠಾಕ್ರೆ ಬಣದ ಸಂಸದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಇದರ ಮುಂದುವರಿದ ಭಾಗವಾಗಿ, ಜೂನ್ 7 ರಂದು ನವದೆಹಲಿಯಲ್ಲಿ ಏಕನಾಥ್ ಶಿಂಧೆ ಹಾಗೂ ಉದ್ಧವ್ ಬಣದ ಸಂಸದರ ನಡುವೆ ಅತ್ಯಂತ ಗೌಪ್ಯ ಸಭೆಯೊಂದು ನಡೆದಿದೆ ಎನ್ನಲಾಗಿದೆ. ಈ ಸಭೆಯ ಬೆನ್ನಲ್ಲೇ ಏಳು ಸಂಸದರು ಶಿಂಧೆ ಬಣಕ್ಕೆ ಬೆಂಬಲ ಸೂಚಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ.
ಕೇಂದ್ರ ಸಚಿವ ಸ್ಥಾನದ ಆಫರ್ ಮತ್ತು ಅಮಿತ್ ಶಾ ಭೇಟಿ ಈ ರಾಜಕೀಯ ಬೆಳವಣಿಗೆಗಳ ನಡುವೆ, ಇತ್ತೀಚೆಗೆ ಏಕನಾಥ್ ಶಿಂಧೆ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. ಮೂಲಗಳ ಪ್ರಕಾರ, ಶಿಂಧೆ ಬಣಕ್ಕೆ ಸೇರಲಿರುವ ಹೊಸ ಸಂಸದರಲ್ಲಿ ಒಬ್ಬರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ ಇದೆ.
ಈ ಆಫರ್ ಉದ್ಧವ್ ಬಣದ ಸಂಸದರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ. ಪ್ರಸ್ತುತ ಉದ್ಧವ್ ಠಾಕ್ರೆ ಬಣದಲ್ಲಿರುವ 9 ಲೋಕಸಭಾ ಸಂಸದರ ಪಟ್ಟಿ ಇಲ್ಲಿದೆ. ಇವರಲ್ಲಿ ಏಳು ಮಂದಿ ಶಿಂಧೆ ಬಣದತ್ತ ಮುಖ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅರವಿಂದ್ ಸಾವಂತ್ (ಮುಂಬೈ ದಕ್ಷಿಣ), ಸಂಜಯ್ ದಿನ ಪಾಟೀಲ್ (ಮುಂಬೈ ಈಶಾನ್ಯ), ಅನಿಲ್ ದೇಸಾಯಿ (ಮುಂಬೈ ದಕ್ಷಿಣ ಮಧ್ಯ), ಸಂಜಯ್ ದೇಶಮುಖ್ (ಯವತಾಲ್-ವಾಶಿಂ), ನಾಗೇಶ ಪಾಟೀಲ ಅಷ್ಟಿಕರ್ (ಹಿಂಗೋಲಿ), ಸಂಜಯ್ ಹರಿಭಾವು ಜಾಧವ್ (ಪರ್ಭಾನಿ), ರಾಜಭಾವು ವಾಜೆ (ನಾಸಿಕ್)ಭೌಸಾಹೇಬ್ ವಕ್ಚೌರೆ (ಶಿರಡಿ) ಹಾಗೂ ಓಂಪ್ರಕಾಶ್ ರಾಜೇನಿಂಬಾಳ್ಕರ್ (ಧಾರಾಶಿವ್ / ಒಸ್ಮಾನಾಬಾದ್) ಅವರುಗಳು ಠಾಕ್ರೆ ಬಣ ತೊರೆಯುವವರು ಎನ್ನಲಾಗಿದೆ.
ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ, ಯಾವುದೇ ಒಂದು ರಾಜಕೀಯ ಪಕ್ಷದ ಜನಪ್ರತಿನಿಧಿಗಳು ಶಿಕ್ಷೆಯಿಂದ ಪಾರಾಗಿ ಮತ್ತೊಂದು ಪಕ್ಷದೊಂದಿಗೆ ವಿಲೀನವಾಗಬೇಕಾದರೆ ಅಥವಾ ಪ್ರತ್ಯೇಕ ಗುಂಪು ಎಂದು ಗುರುತಿಸಿಕೊಳ್ಳಬೇಕಾದರೆ, ಒಟ್ಟು ಸಂಸದರ/ಶಾಸಕರ ಪೈಕಿ ಮೂರನೇ ಎರಡರಷ್ಟು ಸದಸ್ಯರ ಬಲ ಇರಬೇಕಾಗುತ್ತದೆ.ಪ್ರಸ್ತುತ ಉದ್ಧವ್ ಬಣದಲ್ಲಿ 9 ಸಂಸದರಿದ್ದಾರೆ.
ಇದರ 2/3ರಷ್ಟು ಎಂದರೆ ಕನಿಷ್ಠ 6 ಸಂಸದರು ಒಟ್ಟಿಗೆ ಉದ್ಧವ್ ಬಣವನ್ನು ತೊರೆಯಬೇಕಾಗುತ್ತದೆ. ಈಗ 7 ಸಂಸದರು ಶಿಂಧೆ ಬಣದ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ನಿಜವೇ ಆದಲ್ಲಿ, ಅವರು ಯಾವುದೇ ಕಾನೂನು ಸಂಕಷ್ಟವಿಲ್ಲದೆ ಅಧಿಕೃತವಾಗಿ ಶಿಂಧೆ ಬಣವನ್ನು ಸೇರಿಕೊಳ್ಳಬಹುದು ಮತ್ತು ಅವರ ಸಂಸದ ಸ್ಥಾನಕ್ಕೂ ಯಾವುದೇ ಧಕ್ಕೆ ಬರುವುದಿಲ್ಲ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಈ ಬೆಳವಣಿಗೆಯು ಉದ್ಧವ್ ಠಾಕ್ರೆ ಅವರಿಗೆ ಭಾರಿ ಹಿನ್ನಡೆಯನ್ನು ಉಂಟುಮಾಡಿದರೆ, ಏಕನಾಥ್ ಶಿಂಧೆ ಮತ್ತು ಮಹಾಯುತಿ (ಬಿಜೆಪಿ-ಶಿವಸೇನೆ-ಎನ್ಸಿಪಿ) ಮೈತ್ರಿಗೆ ದೆಹಲಿ ಮಟ್ಟದಲ್ಲಿ ಮತ್ತಷ್ಟು ಬಲ ತಂದುಕೊಡಲಿದೆ.
