Homeರಾಷ್ಟ್ರೀಯಕಾಶ್ಮೀರದ ಉಧಂಪುರ ಅರಣ್ಯದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಕಾಶ್ಮೀರದ ಉಧಂಪುರ ಅರಣ್ಯದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಉಧಂಪುರ/ಜಮ್ಮು, ಸೆ.17- ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಬ್ರಾಟಲ್‌ (ಮಜಲ್ಟಾ) ಅರಣ್ಯ ಪ್ರದೇಶದಲ್ಲಿ ಸೆಪ್ಟೆಂಬರ್‌ 16 ಮತ್ತು 17ರ ಮಧ್ಯರಾತ್ರಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.ಹತರಾದ ಭಯೋತ್ಪಾದಕರು ಪಾಕಿಸ್ತಾನ ಮೂಲದ ಜೈಶ್‌-ಎ-ಮೊಹಮದ್‌ ಸಂಘಟನೆಯ ಪ್ರಾತಿನಿಧಿಕ ಗುಂಪಾದ ಕಾಶ್ಮೀರ ಟೈಗರ್ಸ್‌ಗೆ ಸೇರಿದ ವಿದೇಶಿ ಪ್ರಜೆಗಳೆಂದು ಶಂಕಿಸಲಾಗಿದೆ.

ಭಾರತೀಯ ಸೇನೆಯ ವೈಟ್‌ ನೈಟ್‌ ಕಾರ್ಪ್ಸ್‌ (ರಾಷ್ಟ್ರೀಯ ರೈಫಲ್ಸ್‌, ಪ್ಯಾರಾ ಸ್ಪೆಷಲ್‌ ಫೋರ್ಸಸ್‌), ಜಮ್ಮು-ಕಾಶ್ಮೀರ ಪೊಲೀಸ್‌ ಮತ್ತು ಸಿಆರ್‌ಪಿಎಫ್‌ ಪಡೆಗಳು ನಡೆಸಿದ ಗುಪ್ತಚರ ಆಧಾರಿತ ಜಂಟಿ ಕಾರ್ಯಾಚರಣೆಯಲ್ಲಿ ಈ ಯಶಸ್ಸು ಸಿಕ್ಕಿದೆ.

ಕತ್ತಲೆ, ನಿರಂತರ ಮಳೆ, ಪ್ರತಿಕೂಲ ಹವಾಮಾನ ಮತ್ತು ಕಠಿಣ ಭೂಪ್ರದೇಶದ ಸವಾಲುಗಳ ನಡುವೆಯೂ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಉಗ್ರರನ್ನು ತಟಸ್ಥಗೊಳಿಸಿವೆ.ಘಟನಾ ಸ್ಥಳದಿಂದ ಇಬ್ಬರು ಉಗ್ರರ ಮೃತದೇಹಗಳು ಸೇರಿದಂತೆ ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೂಂಬಿಂಗ್‌ ಮುಂದುವರಿಕೆ: ಕಾಡಿನಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಶಂಕೆ ಇದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಿ ಶೋಧ ಕಾರ್ಯವನ್ನು ಮುಂದುವರಿಸಲಾಗಿದೆ.ಉಧಂಪುರದ ಮಜಲ್ಟಾ ಅರಣ್ಯ ಪ್ರದೇಶವು ಜೆಇಎಂ ಸಂಬಂಧಿತ ಉಗ್ರರಿಗೆ ಪ್ರಮುಖ ಸಂಚಾರ ಮಾರ್ಗವಾಗಿದೆ.

ಇದೇ ಮಜಲ್ಟಾ ಪ್ರದೇಶದಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲೂ ಜೆಇಎಂನ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ಪಡೆದು ಅಂತ್ಯಗೊಳಿಸಲಾಗಿತ್ತು.ಪ್ರಸ್ತುತ ಘಟನೆಗೂ ಕೆಲವೇ ದಿನಗಳ ಮೊದಲು (ಸೆಪ್ಟೆಂಬರ್‌ 5) ಮಧ್ಯ ಕಾಶ್ಮೀರದ ಬುಡ್ಗಾಮ್‌ ಜಿಲ್ಲೆಯ ಯೂಸಾರ್ಗ್‌ ಬಳಿ ಲಷ್ಕರ್‌-ಎ-ತೈಬಾ (ಎಲ್‌ಇಟಿ) ಕಮಾಂಡರ್‌ ಯಾಸಿರ್‌ ಎಂಬಾತನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಪ್ರಸ್ತುತ ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ಪ್ರಮುಖ ಗಡಿ ಮತ್ತು ಅರಣ್ಯ ಮಾರ್ಗಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.

RELATED ARTICLES
spot_img

Latest News