Friday, November 7, 2025
Home Blog Page 1888

ನಾಗ್ಪುರ ನ್ಯಾಯಾಧೀಶರಿಗೆ ಬೆದರಿಕೆ ಪತ್ರ

ನಾಗ್ಪುರ, ಅ.15- ಆಸ್ತಿ ತೆರಿಗೆ ಪ್ರಕರಣದಲ್ಲಿ ಪ್ರತಿಕೂಲ ತೀರ್ಪು ನೀಡಿದರೆ ಇಬ್ಬರು ನ್ಯಾಯಾಧೀಶರ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಬಾಂಬೆ ಹೈಕೋರ್ಟ್‍ನ ನಾಗ್ಪುರ ಪೀಠಕ್ಕೆ ಬೆದರಿಕೆ ಪತ್ರವೊಂದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಾಗ್ಪುರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಕ್ಟೋಬರ್ 11 ರಂದು ನಾಗ್ಪುರ ಪೀಠಕ್ಕೆ ಬೆದರಿಕೆ ಪತ್ರ ತಲುಪಿದೆ. ವರುದ್ ನಗರ ಪರಿಷತ್ತಿನ ಆಸ್ತಿ ತೆರಿಗೆ ಹೆಚ್ಚಳವನ್ನು ಪ್ರಶ್ನಿಸಿ ಪ್ರಭಾಕರ್ ಕಾಳೆ ಎಂಬವರು ಸಲ್ಲಿಸಿದ ಅರ್ಜಿಯ ಮೇಲೆ ಪ್ರತಿಕೂಲವಾದ ತೀರ್ಪು ನೀಡಿದರೆ ಇಬ್ಬರು ನ್ಯಾಯಾಧೀಶರ ಮೇಲೆ ಬಾಂಬ್ ದಾಳಿ ನಡೆಸಲಾಗುವುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

ಬೆಂಗಳೂರಿನಲ್ಲಿ ಮತ್ತೊಂದು ಐಟಿ ದಾಳಿ, ಮತ್ತೆ 45 ಕೋಟಿ ರೂ. ಪತ್ತೆ!

ಈ ಪತ್ರವನ್ನು ಕಾಳೆ ಹೆಸರಿಗೆ ಕಳುಹಿಸಲಾಗಿದ್ದು, ನ್ಯಾಯಾಲಯದ ಅಧಿಕಾರಿಗಳು ತಕ್ಷಣವೇ ಈ ವಿಷಯವನ್ನು ಪೊಲೀಸರಿಗೆ ವರದಿ ಮಾಡಿದ್ದಾರೆ. ಅಮರಾವತಿ ಗ್ರಾಮಾಂತರ ಪೊಲೀಸರು ಅರ್ಜಿದಾರರಿಂದ ಮಾಹಿತಿ ಕಲೆ ಹಾಕಿದ್ದು, ಬೆದರಿಕೆ ಪತ್ರ ಬರೆಯುವುದರಲ್ಲಿ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ.

ಕಾಳೆ ಅವರ ವಕೀಲರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಪತ್ರಕ್ಕೂ ಕಾಳೆ ಅವರಿಗೂ ಯಾವುದೇ ಸಂಬಂಧ ಇಲ್ಲ. ಕಾಳೆ ಅವರ ಪ್ರತಿಷ್ಠೆಗೆ ಕಳಂಕ ತರುವ ಸಲುವಾಗಿ ಈ ಕೃತ್ಯ ನಡೆಸಲಾಗಿದೆ. ಪತ್ರದ ಮೂಲವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಮತ್ತು ನಿರ್ಣಾಯಕ ಸುಳಿವುಗಳಿಗಾಗಿ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ

ಮೈಸೂರು,ಅ.15- ಬರಗಾಲವಿದ್ದರೂ ನಮ್ಮ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದಂತೆ ಅರ್ಥಪೂರ್ಣ ದಸರಾ ಆಚರಿಸಲಾಗುವುದು. ನಮ್ಮ ಪರಂಪರೆ ಮತ್ತು ಹಿರಿಮೆಯನ್ನು ಜಗತ್ತಿಗೆ ಸಾರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ನೀಡಿ ಮಾತನಾಡಿದರು. ಕನ್ನಡ ನಾಡಿನ ಸಮೃದ್ಧಿ, ಪ್ರಗತಿ, ಸಂಸ್ಕೃತಿ ಮತ್ತು ವೈಭವವನ್ನು ದಸರಾ ಮೂಲಕ ಜಗತ್ತಿಗೆ ಸಾರುವ ಕೆಲಸವನ್ನು ನಾವು ಮಾಡುತ್ತೇವೆ. ಸಾಂಸ್ಕೃತಿಕವಾಗಿ ಬಹಳ ಶ್ರೀಮಂತ ನಾಡು ನಮ್ಮದು. ನಮ್ಮ ಜನ ಬಹಳ ಸುಸಂಸ್ಕೃತರು. ಪ್ರೀತಿ ಹಂಚುವವರು. ಎಲ್ಲಾ ಜಾತಿ ಧರ್ಮದವರನ್ನು ಅತ್ಯಂತ ಪ್ರೀತಿಯಿಂದ, ಘನತೆಯಿಂದ ನಡೆಸಿಕೊಳ್ಳುವುದು ನಮ್ಮ ಧರ್ಮ ಮತ್ತು ಕರ್ತವ್ಯ ಎಂದರು.

ಮುಂಗಾರು ಮಳೆ ಕೊರತೆಯಿಂದ 42 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು 30 ಸಾವಿರ ಕೋಟಿ ರೂಪಾಯಿಗಳ ಬೆಳೆ ನಷ್ಟವಾಗಿದೆ. ಮಾನದಂಡಗಳ ಪ್ರಕಾರ 4850 ಕೋಟಿ ರೂಪಾಯಿ ಬೆಳೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. 116 ತಾಲ್ಲೂಕುಗಳಲ್ಲಿ ತೀವ್ರ ಬರ ಪೀಡಿತವಾಗಿವೆ.

ಹಿಂಗಾರು ಮಳೆ ಉತ್ತಮವಾಗಿ ಆಗಲಿ ಎಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಮಳೆ ಇಲ್ಲದೆ ನಾಡಿನ ರೈತ ಕುಲ, ನಾಡಿನ ಜನತೆ ಕಷ್ಟದಲ್ಲಿದ್ದಾರೆ. ಆದ್ದರಿಂದ ಅದ್ದೂರಿ ಇಲ್ಲದ ವೈಭವಕ್ಕೆ ಕೊರತೆ ಇಲ್ಲದ ಅರ್ಥಪೂರ್ಣ ದಸರಾ ಆಚರಿಸಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.

ಮೈಸೂರು ಅರಸರ ಕಾಲದಿಂದಲೂ ಅತ್ಯಂತ ವೈಭವದಿಂದ ಆಚರಿಸಲ್ಪಡುತ್ತಿರುವ ದಸರಾವನ್ನು ನಾನು ತಂದೆಯ ಹೆಗಲ ಮೇಲೆ ಕುಳಿತು ನೋಡುತ್ತಿದ್ದೆ . ರಾಜರ ಕಾಲ ಮುಗಿದು ಪ್ರಜಾರಾಜ್ಯ ಬಂದ ಬಳಿಕ ರಾಜ್ಯ ಸರ್ಕಾರ ನಾಡಹಬ್ಬವಾಗಿ ದಸರಾವನ್ನು ಆಚರಿಸಲಾಗುತ್ತಿದೆ. 10 ನೆಯ ದಿನ ಜಂಬೂ ಸವಾರಿ ನಡೆಯುತ್ತದೆ.

ದಸರಾ ಹಬ್ಬ ವಿಜಯನಗರ ಸಾಮ್ರಾಜ್ಯದ ಆಚರಣೆಯಾಗಿತ್ತು. ವಿಜಯನಗರ ಸಾಮ್ರಾಜ್ಯ ವೈಭವ ಯುತವಾಗಿತ್ತು. ಈ ಸಾಮ್ರಾಜ್ಯದಲ್ಲಿ ಮುತ್ತು ರತ್ನಗಳನ್ನು ಸೇರು ಬಳ್ಳ ಗಳಲ್ಲಿ ಅಳೆದು ಮಾರಾಟ ಮಾಡುತ್ತಿದ್ದರು. ಮೈಸೂರು ಅರಸರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನ ನಂತರ ಮೈಸೂರು ಅರಸರು ದಸರಾ ಹಬ್ಬವನ್ನು ಆಚರಣೆ ಮಾಡಲು ಪ್ರಾರಂಭಿಸಿದರು. ಈಗ ರಾಜ್ಯ ಸರ್ಕಾರ ಆಚರಣೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಸರ್ವರಿಗೂ ಸಮಾನ ಅವಕಾಶ ಕಲ್ಪಿಸುವುದೇ ಸಾಮಾಜಿಕ ನ್ಯಾಯ. ಇದು ನಮ್ಮ ಸಂವಿಧಾನದ ಮತ್ತು ನಮ್ಮ ಸರ್ಕಾರದ ಆಶಯ. ಕೇವಲ ರಾಜಕೀಯ ಸ್ವಾತಂತ್ರ್ಯ ಸಾಲದು. ನಮ್ಮ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಒರಬೇಕು ಎಂದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದರು. ನಾವು ಎಲ್ಲಾ ಜನರಿಗೆ ಸ್ಥಿರ ಆದಾಯವನ್ನು ಬರುವಂತೆ ಮಾಡಿ, ಕೊಂಡುಕೊಳ್ಳುವ ಶಕ್ತಿ ಬರುವಂತೆ ಮಾಡಲು 5 ಗ್ಯಾರೆಂಟಿ ಗಳನ್ನು ಘೋಷಣೆ ಮಾಡಿ 4 ಗ್ಯಾರೆಂಟಿ ಗಳನ್ನು ಜಾರಿಗೆ ತಂದಿದ್ದೇವೆ. 5 ನೇಯ ಗ್ಯಾರೆಂಟಿ ಯನ್ನು ಮುಂದಿನ ಜನವರಿಯಲ್ಲಿ ಜಾರಿಗೆ ತರುತ್ತೇವೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ದುಃಖವನ್ನು ದೂರ ಮಾಡುವ ದೇವಿ ದುರ್ಗಾದೇವಿ. ನಮ್ಮ ಕನ್ನಡ ಸಂಸ್ಕತಿಯನ್ನು ಬಿಂಬಿಸುವ ಆಚರಣೆ ದಸರಾ. ಭೂಮಿಯನ್ನು ಭಾಷೆಯನ್ನು ತಾಯಿಯ ಹೆಸರಿನಲ್ಲಿ ಕರೆಯುತ್ತೇವೆ. ನಮ್ಮ ನಾಡಿನ ಅಗ್ರ ದೇವತೆ ಚಾಮುಂಡಿತಾಯಿ. ಪ್ರಯತ್ನ ಮಾಡಿ ಸೋಲಬಹುದು ಆದರೆ ಪ್ರಾರ್ಥಿಸಿ ಸೋತಿಲ್ಲ ಎಂಬ ನಂಬಿಕೆ ಇಟ್ಟು ನಾಡಿಗೆ ಒಳ್ಳೆ ಮಳೆ ಬೆಳೆ ನೀಡುವಂತೆ ಪ್ರಾರ್ಥಿಸಲು ಇಲ್ಲಿ ಬಂದಿದ್ದೇವೆ ಎಂದರು.

ನಾವು ಚುನಾವಣೆಗೆ ಮುಂಚೆ ನಾನು ಮತ್ತು ಮುಖ್ಯಮಂತ್ರಿಗಳು ತಾಯಿ ಚಾಮುಂಡಿ ದೇವಿಗೆ 5 ಗ್ಯಾರೆಂಟಿ ಗಳನ್ನು ಜಾರಿಗೆ ತರಲು ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿದ್ದೆವು. ಅದರಂತೆ ನಾವು ನುಡಿದಂತೆ ನಡೆದು 4 ಗ್ಯಾರೆಂಟಿ ಗಳನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೆನಪಿಸುತ್ತಾ, ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತ ಮೇಲೆ ಬೆಳಕು ಚೆಲ್ಲುವುದು ಮೈಸೂರು ದಸರಾ. ಮೈಸೂರು ದಸರಾ ನಾಡಿನ ಕಲೆ ಸಂಸೃತಿ, ಪರಂಪರೆಯನ್ನು ತಿಳಿಸುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ ಜನಪರ ಆಡಳಿತ, ಕಾಳಜಿ, ಬದ್ದತೆ ಮೈಸೂರು ದಸರಾದ ಪ್ರತೀಕ. ಮೈಸೂರಿನ ಜನರು ಶಾಂತಿಪ್ರಿಯರು ಎಂದು ತಿಳಿಸಿದರು.

ಕನ್ನಡದ ಶಾಂತಿ ಮಂತ್ರ ವಿಶ್ವಕ್ಕೆ ಪಸರಿಸಿ : ದಸರಾ ಮಹೋತ್ಸವಕ್ಕೆ ಹಂಸಲೇಖ ಚಾಲನೆ

ಸೆಪ್ಟೆಂಬರ್ 15 ರಂದು ಸಂವಿಧಾನ ಪೀಠಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳು ಓದಿ, ಎಲ್ಲಾ ಕಚೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಏಕ ಕಾಲಕ್ಕೆ ಓದಲಾಯಿತು. ಚಾಮುಂಡಿ ಅಭಿವೃದ್ಧಿ ಪ್ರಾಕಾರವನ್ನು ಮಾಡಿ ಚಾಮುಂಡಿ ಬೆಟ್ಟ ವನ್ನು ಅಭಿವೃದ್ಧಿ ಮಾಡಲು ಸರ್ಕಾರ ಕ್ರಮವಹಿಸಲಾಗಿದೆ. ಈ ಬಾರಿ ಮಳೆ ಕೊರತೆ ಆಗಿರುವುದರಿಂದ ಸಾಂಪ್ರದಾಯಿಕ ದಸರಾ ಆಚರಿಸುತ್ತಿದ್ದು, ಶಾಂತಿ ಸೌಹಾರ್ದತೆ ಯಿಂದ ಎಲ್ಲರೂ 9 ದಿನಗಳ ಕಾಲ ದಸರಾ ಆಚರಿಸೋಣ ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡ ಅವರು ಮಾತನಾಡಿ ವಿಜಯ ದಶಮಿ ವಿಜಯದ ಒಂದು ಸಂಕೇತ. ಎಲ್ಲಾ ಶಕ್ತಿಯನ್ನು ಹೊಂದಿರುವ ತಾಯಿ ಚಾಮುಂಡೇಶ್ವರಿ ರಾಕ್ಷಸರನ್ನು ಸಂಹಾರ ಮಾಡಿದಳು. ಇಂದು ನಮ್ಮಲ್ಲಿಯೇ ರಾಕ್ಷಸ ಗುಣಗಳು ಇವೆ. ಇವನ್ನು ಬಿಟ್ಟು ಎಲ್ಲರೂ ಶಾಂತಿ ಸೌಹಾರ್ದತೆ ಯಿಂದ ನಡೆದುಕೊಂಡು ಹೋಗಬೇಕು ಎಂದು ಅವರು ಹೇಳಿದರು.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಸರಾಗೆ ಸೇರುತ್ತಾರೆ. 9 ದಿನಗಳ ಕಾಲ ನಡೆಯುವ ದಸರಾ ಆಚರಣೆಯಲ್ಲಿ ಎಲ್ಲರೂ ಭಾಗಿಗಳಾಗಿ ಎಂದರು.ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಸಾಂಪ್ರದಾಯಕವಾಗಿ, ಅರ್ಥಪೂರ್ಣವಾಗಿ ಉದ್ಘಾಟಿಸಿದರು.ಪಲ್ಲಕ್ಕಿಯಲ್ಲಿ ಅಲಂಕೃತ ಗೊಂಡಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮೈಸೂರು ಮೇಯರ್ ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಆಹಾರ ನಾಗರೀಕ ಫೂರೈಕೆ ಸಚಿವ ಕೆ.ಎಚ್.ಮುನಿಯಪ್ಪ,

ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ತನ್ವೀರ್ ಸೇಠ್, ಎ.ಆರ್.ಕೃಷ್ಣಮೂರ್ತಿ, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಉಪ ಮೇಯರ್ ಡಾ.ಜಿ.ರೂಪ, ಜಿಲ್ಲಾಕಾರಿ ದಸರಾ ವಿಶೇಷಾಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿ.ಪಂ. ಸಿಇಓ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

ಗಾಜಾದಲ್ಲಿ ಆಹಾರ, ನೀರು ಇಲ್ಲದೆ 2.3 ಮಿಲಿಯನ್ ಜನರ ನರಳಾಟ

ಡೀರ್-ಇಎಲ್-ಬಾಲಾಹ್ (ಗಾಜಾ ಪಟ್ಟಿ), ಅ.15- ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿಯನ್ನು ಪ್ರಾರಂಭಿಸಿದ ಒಂದು ವಾರದ ನಂತರ ಗಾಜಾದ 2.3 ಮಿಲಿಯನ್ ನಾಗರಿಕರು ಆಹಾರ, ನೀರು ಮತ್ತು ಸುರಕ್ಷತೆಗಾಗಿ ಪರದಾಡುವಂತಾಗಿದೆ. ಸಾವಿರಾರು ಜನ ನಿರಾಶ್ರಿತರನ್ನು ಉತ್ತರದಿಂದ ಸ್ಥಳಾಂತರಿಸಲು ಇಸ್ರೇಲ್ ಆದೇಶಿಸಿದೆ, ಇನ್ನೂ ಕೆಲವರು ಆಸ್ಪತ್ರೆಗಳಲ್ಲಿ ಬಂಧಿಯಾಗಿದ್ದಾರೆ.

ಈ ಪ್ರದೇಶದಲ್ಲಿ ಇಸ್ರೇಲ್ ಪಡೆಗಳೊಂದಿಗೆ ಅಮೆರಿಕಾದ ಯುದ್ಧನೌಕೆಗಳ ನಿಯೋಜನೆ ಹೆಚ್ಚಾಗುತ್ತಿದೆ. ಗಾಜಾದ ಗಡಿಯುದ್ದಕ್ಕೂ ಉಗ್ರರು ತಮ್ಮನ್ನು ತಾವು ರಕ್ಷಿಸಲು ಅಡುಗುತಾಣಗಳನ್ನು ಮಾಡಿಕೊಂಡಿದ್ದಾರೆ. ಅದೇ ರೀತಿ ಇಸ್ರೆಲಿಗಳು ಅಡುತಾಣಗಳನ್ನು ರಚಿಸಿಕೊಳ್ಳುತ್ತಿದ್ದಾರೆ. ಹಮಾಸ್ ಉಗ್ರರ ರಾಕೇಟ್ ದಾಳಿಯಿಂದ ಗಾಯಗೊಂಡಿರುವ ಇಸ್ರೆಲ್ ತಕ್ಕ ಪ್ರತ್ಯುತ್ತರಕ್ಕಾಗಿ ತಯಾರು ಮಾಡಿಕೊಳ್ಳುತ್ತಿದೆ. ಉಗ್ರರ ಆಕ್ರಮಣದ ಬಳಿಕ ಇಸ್ರೆಲ್ ಪ್ರತಿದಾಳಿ ನಡೆಸಿದ್ದರಿಂದ ಈವರೆಗೂ 2,329 ಪ್ಯಾಲೆಸ್ಟೀನಿಯಾದವರು ಕೊಲ್ಲಲ್ಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ. ಇದು ಐದು ಯುದ್ಧಗಳಿಗಿಂತಲೂ ಹೆಚ್ಚು ಜನರನ್ನು ಬಲಿ ಪಡೆದ ಆಕ್ರಮಣವಾಗಿದೆ..

ಕನ್ನಡದ ಶಾಂತಿ ಮಂತ್ರ ವಿಶ್ವಕ್ಕೆ ಪಸರಿಸಿ : ದಸರಾ ಮಹೋತ್ಸವಕ್ಕೆ ಹಂಸಲೇಖ ಚಾಲನೆ

ಅಮೆರಿಕಾದ ಅಂಕಿಅಂಶಗಳ ಪ್ರಕಾರ 2014 ರ ಬೇಸಿಗೆಯಲ್ಲಿ ನಡೆದ ಯುದ್ಧದಲ್ಲಿ 1,462 ನಾಗರಿಕರು ಸೇರಿದಂತೆ 2,251 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದರು. ಆರು ವಾರಗಳ ಕಾಲ ನಡೆದ ಯುದ್ಧದಲ್ಲಿ ಆರು ನಾಗರಿಕರು ಸೇರಿದಂತೆ 74 ಇಸ್ರೆಲಿಗಳು ಕೊಲ್ಲಲ್ಪಟ್ಟರು.

ಹಮಾಸ್ ಉಗ್ರರು ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ1,300 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 1973ರಲ್ಲಿ ಈಜಿಪ್ಟ್ ಮತ್ತು ಸಿರಿಯಾದೊಂದಿಗಿನ ಸಂಘರ್ಷದ ನಂತರ ಇಸ್ರೇಲ್‍ಗೆ ಇದು ಅತ್ಯಂತ ಮಾರಕ ಯುದ್ಧವಾಗಿದೆ.

ಗಾಜಾ ಪ್ರದೇಶದ ಉತ್ತರದಲ್ಲಿರುವ ಪ್ಯಾಲೆಸ್ಟೀಯನಿಯರಿಗೆ ಕರಪತ್ರ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿರುವ ಇಸ್ರೆಲ್ ದಕ್ಷಿಣ ಭಾಗಕ್ಕೆ ಸ್ಥಳಾಂತರಗೊಳ್ಳುವಂತೆ ಸಲಹೆ ನೀಡಿದೆ. ಗಾಜಾ ನಗರದ ಉತ್ತರದಲ್ಲಿ ಉಗ್ರರ ಭೂಗತ ಅಡಗುತಾಣಗಳನ್ನು ಗುರುತಿಸಿ ತೀವ್ರ ಸ್ವರೂಪದ ಕಾರ್ಯಾಚರಣೆ ನಡೆಸಲು ಸಿದ್ಧತೆಗಳಾಗಿವೆ. ನಾಗರಿಕರನ್ನು ಗುರಾಣಿಯಂತೆ ಬಳಕೆ ಮಾಡಲು ಮುಂದಾಗಿರುವ ಹಮಾಸ್ ಯಾರು ಸ್ಥಳಾಂತರಗೊಳ್ಳಬಾರದು. ಮನೆ ಬಿಟ್ಟು ಹೊರ ಬರಬಾರದು ಎಂದು ಎಚ್ಚರಿಕೆ ನೀಡುತ್ತಿದೆ. ಅತ್ತ ಇಸ್ರೆಲ್ ದಾಳಿಯ ಆತಂಕ ಇತ್ತ ಹಮಾಸ್ ಉಗ್ರರ ಬೆದರಿಕೆ ಸಾಮಾನ್ಯ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 40 ಕಿಲೋಮೀಟರ್ ಉದ್ದದ (25 ಮೈಲಿ ಉದ್ದದ) ಕರಾವಳಿ ಪ್ರದೇಶವನ್ನು ಇಸ್ರೆಲ್‍ನ ಸಂಪೂರ್ಣ ಮುತ್ತಿಗೆ ಹಾಕಲು ನಿರ್ಧರಿಸಿದೆ.

ದಾಳಿಗೂ ಮುನ್ನಾ ಸ್ಥಳಾಂತರಕ್ಕೂ ಹಲವು ಆತಂಕಗಳು ಎದರಾಗಿವೆ. ಉತ್ತರ ಆಸ್ಪತ್ರೆಯ ಇನ್ಕ್ಯುಬೇಟರ್‍ಗಳಲ್ಲಿನ ನವಜಾತ ಶಿಶುಗಳು ಮತ್ತು ತೀವ್ರ ನಿಗಾದಲ್ಲಿರುವ ಒಟ್ಟು 2ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಸ್ಥಳಾಂತರಿಸುವುದು ಮರಣದಂಡನೆಗೆ ಸಮ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವಸಂಸ್ಥೆ ಪ್ರಕಾರ ಗಾಜಾದ ಆಸ್ಪತ್ರೆಗಳ ತೀವ್ರ ನಿಗಾಘಟಕಗಳಿಗೆ ಅಗತ್ಯ ಶಕ್ತಿ ಪೂರೈಸುವ ಜನರೇಟರ್‍ಗಳಿಗೆ ಎರಡು ದಿನಗಳಲ್ಲಿ ಇಂಧನ ಖಾಲಿಯಾಗುವ ನಿರೀಕ್ಷೆಯಿದೆ. ಅದರಿಂದಲೂ ಸಾವಿರಾರು ರೋಗಿಗಳ ಜೀವ ಹಾನಿಯಾಗುವ ಆತಂಕವಿದೆ.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

ಆಕ್ರಮಣದ ಬಳಿಕ ಇಸ್ರೇಲ್ ಗಾಜಾವನ್ನು ಸುತ್ತುವರೆದಿದ್ದು, ನೀರು ಮತ್ತು ವೈದ್ಯಕೀಯ ಸರಬರಾಜುಗಳ ಕೊರತೆಯಿಂದಾಗಿ ಮಾನವೀಯ ಬಿಕ್ಕಟ್ಟು ಉದ್ಭವಿಸಿದೆ. ಇಂಧನವಿಲ್ಲದೆ ವಿದ್ಯುತ್ ಸ್ಥಾವರಗಳನ್ನು ಮುಚ್ಚುವ ಅನಿವಾರ್ಯತೆ ಎದುರಾಗಿದೆ. ಬೇಕರಿಗಳು ಮುಚ್ಚಿರುವುದರಿಂದ ನಿವಾಸಿಗಳು ತಮ್ಮ ಮಕ್ಕಳಿಗೆ ಬ್ರೆಡ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ನಾವು ಯಾರನ್ನು ಕೊಂದಿಲ್ಲ ನಮಗೇಕೆ ಈ ಶಿಕ್ಷೆ ಎಂದು ಗಾಜಾ ನಗರದ ಹೈಫಾ ಖಾಮಿಸ್ ಅಲ್-ಶುರಾಫಾ ಅಳಲು ತೊಡಿಕೊಂಡಿದ್ದಾರೆ. ತಮ್ಮ ಕುಟುಂಬದ ಆರು ಮಂದಿ ಸದಸ್ಯರೊಂದಿಗೆ ಕಾರಿನಲ್ಲಿ ದಕ್ಷಿಣದತ್ತ ಅವರು ವಲಸೆ ಹೋಗಿದ್ದಾರೆ.

ದಕ್ಷಿಣಕ್ಕೆ ತೆರಳಲು ಗಾಜಾದ ಎರಡು ಸುರಕ್ಷಿತ ಮುಖ್ಯಮಾರ್ಗಗಳಲ್ಲಿ ಪ್ರಯಾಣಿಸಲು ಶನಿವಾರ ಮಧ್ಯಾಹ್ನದ ವರೆಗೂ ಅವಕಾಶ ಕಲ್ಪಿಸಲಾಗಿತ್ತು. ಸ್ಥಳಾಂತರಕ್ಕೆ ಅಂತಿಮ ಗಡುವು ಕುರಿತು ಸ್ಪಷ್ಟತೆ ಇಲ್ಲ.

ಇಸ್ರೆಲ್‍ನಿಂದ ದೆಹಲಿಗೆ ಬಂದಿಳಿದ 471 ಭಾರತೀಯರು

ನವದೆಹಲಿ, ಅ.15- ಇಸ್ರೆಲ್‍ನ ಟೆಲ್ ಅವೀವ್‍ನಿಂದ ಒಟ್ಟು 471 ಭಾರತೀಯರನ್ನು ಹೊತ್ತ ಎರಡು ವಿಮಾನಗಳು ಭಾನುವಾರ ಬೆಳಿಗ್ಗೆ ದೆಹಲಿಗೆ ಬಂದಿಳಿದಿವೆ. ಒಂದು ವಿಮಾನ ಏರ್ ಇಂಡಿಯಾ ಮತ್ತು ಇನ್ನೊಂದು ವಿಮಾನ ಸ್ಪೈಸ್ ಜೆಟ್ ಸಂಸ್ಥೆಗಳಿಗೆ ಸೇರಿದ್ದವು. ಉಗ್ರಗಾಮಿ ಗುಂಪು ಹಮಾಸ್‍ನೊಂದಿಗೆ ತೀವ್ರ ಸಂಘರ್ಷ ನಡೆಯುತ್ತಿರುವ ಇಸ್ರೆಲ್‍ನಿಂದ ಹಿಂತಿರುಗಲು ಬಯಸುವ ಭಾರತೀಯರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಪ್ರಾರಂಭಿಸಿದ ಆಪರೇಷನ್ ಅಜಯ್ ಅಡಿಯಲ್ಲಿ ಒಟ್ಟು ನಾಲ್ಕು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

197 ಪ್ರಯಾಣಿಕರೊಂದಿಗೆ ಮೂರನೇ ವಿಮಾನವು ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಭಾನುವಾರ ಹೇಳಿದ್ದಾರೆ.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

274 ಪ್ರಯಾಣಿಕರನ್ನು ಹೊಂದಿರುವ ನಾಲ್ಕನೇ ವಿಮಾನವು ರಾಷ್ಟ್ರ ರಾಜಧಾನಿಯನ್ನು ಮುಟ್ಟಿದೆ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಪೋಸ್ಟ್ ಗಳಲ್ಲಿ ತಿಳಿಸಿದ್ದು, ಪ್ರಯಾಣಿಕರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಏರ್ ಇಂಡಿಯಾದಿಂದ ನಿರ್ವಹಿಸಲ್ಪಡುವ ಟೆಲ್ ಅವಿವ್‍ನಿಂದ ಎರಡು ಚಾರ್ಟರ್ಡ್ ವಿಮಾನಗಳು ಶುಕ್ರವಾರ ಮತ್ತು ಶನಿವಾರದಂದು ಒಟ್ಟು 435 ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಬಂದಿವೆ.

ಬೆಂಗಳೂರಿನಲ್ಲಿ ಮತ್ತೊಂದು ಐಟಿ ದಾಳಿ, ಮತ್ತೆ 45 ಕೋಟಿ ರೂ. ಪತ್ತೆ!

ಬೆಂಗಳೂರು, ಅ.13- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಮತ್ತೊಬ್ಬ ಗುತ್ತಿಗೆದಾರರ ಮನೆಯ ಮೇಲೆ ದಾಳಿ ನಡೆಸಿದ್ದು, ಮತ್ತೆ 45 ಕೋಟಿ ರೂಪಾಯಿ ಪತ್ತೆ ಹಚ್ಚಿದ್ದಾರೆ. ಪಂಚರಾಜ್ಯಗಳ ವಿಧಾನಸಭೆ ಹಾಗೂ ಮುಂದಿನ ವರ್ಷದ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ರಾಜ್ಯದ ಬೆಂಗಳೂರು ಸೇರಿದಂತೆ ಹಲವು ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದಾರೆ. ಅಕ್ಟೋಬರ್ 12ರಂದು ಬೆಂಗಳೂರಿನ ಆರ್.ಟಿ.ನಗರ ಸೇರಿದಂತೆ ಇತರ ಭಾಗಗಳಲ್ಲಿ ತಪಾಸಣೆ ನಡೆಸಿ ನಲವತ್ತು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಲಾಗಿತ್ತು.

ಮತ್ತೊಂದು ಕಾರ್ಯಾಚರಣೆಯಲ್ಲಿ ಬೆಂಗಳೂರಿನ ರಾಜಾಜಿನಗರದ ಕೇತಮಾರನಹಳ್ಳಿಯಲ್ಲಿರುವ ಪ್ಲಾಟ್‍ವೊಂದರ ಮೇಲೆ ನಿನ್ನೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಗುತ್ತಿಗೆದಾರ ಸಂತೋಷ್ ಅವರಿಗೆ ಸೇರಿದ ಈ ಪ್ಲಾಟ್‍ನಲ್ಲಿ 45 ಕೋಟಿ ರೂಪಾಯಿ ಹಣ ಪತ್ತೆಯಾಗಿದೆ.

ಪಾರ್ಟಿಯಲ್ಲಿ ಶೂಟೌಟ್ ಮೂವರ ಸಾವು

ಆರಂಭದಲ್ಲಿ ಐದು ಮಂದಿ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಹಣ ಪತ್ತೆಯಾದ ಬಳಿಕ ಮತ್ತಷ್ಟು ಮಂದಿಯನ್ನು ಕರೆಸಿಕೊಂಡಿದ್ದಾರೆ. ಮೂರು ಟ್ರಂಕ್, ಮೂರು ಬ್ಯಾಗ್ ಹಾಗೂ ಎರಡು ಸೂಟ್‍ಕೇಸ್‍ನಲ್ಲಿ ಹಣವನ್ನು ಬಚ್ಚಿಡಲಾಗಿತ್ತು ಎಂಬ ಮಾಹಿತಿಗಳು ಹರಿದಾಡುತ್ತಿವೆ. ಒಟ್ಟು 15 ಮಂದಿ ಅಧಿಕಾರಿಗಳು ತಡ ರಾತ್ರಿವರೆಗೂ ತಪಾಸಣೆ ನಡೆಸಿ 32 ಬಾಕ್ಸ್‍ಗಳಲ್ಲಿ ಹಣವನ್ನು ತುಂಬಿಕೊಂಡು ಹೋಗಿದ್ದು, ಹಣದ ಬಗ್ಗೆ ಮಾಹಿತಿ ನೀಡುವಂತೆ ಸಂತೋಷ್‍ಗೆ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆ ಕಾಮಗಾರಿಗಳಿಗೆ ಬಾಕಿ ಇದ್ದ ಬಿಲ್ ಪಾವತಿಗೆ ಕಮಿಷನ್ ಪಡೆಯಲಾಗುತ್ತಿದೆ. ಅದರಿಂದ ಸಂಗ್ರಹಿಸಿದ ಹಣವನ್ನು ಬೇರೆ ಬೇರೆ ಕಡೆ ಇರಿಸಲಾಗಿದ್ದು, ಅದರ ಜಾಡು ಹಿಡಿದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಆರ್.ಟಿ.ನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಡೆಸಿದ ವಿಚಾರಣೆಯ ಮಾಹಿತಿ ಆಧಾರಿಸಿ ಆದಾಯ ತೆರಿಗೆ ಅಧಿಕಾರಿಗಳು ಮತ್ತಷ್ಟು ಮಂದಿಯ ಮೇಲೆ ಕಣ್ಣಿಟ್ಟಿದ್ದರು. ಎರಡು ಕಾರ್ಯಾಚರಣೆಯಲ್ಲಿ ಒಟ್ಟು 80 ಕೋಟಿ ರೂಪಾಯಿಗೂ ಅಕ ಮೊತ್ತದ ಹಣ ಪತ್ತೆ ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

ವಿಚಾರಣೆಯ ವೇಳೆ ಈ ಹಣ ವಿಧಾನಪರಿಷತ್‍ನ ಮಾಜಿ ಸದಸ್ಯ ಕಾಂತರಾಜು ಅವರಿಗೆ ಸೇರಿದೆ ಎಂದು ಸಂತೋಷ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಕಾಂತರಾಜು ಅವರು ಸಂತೋಷ್ ಯಾರು ಎಂದು ತಮಗೆ ಗೋತ್ತೆ ಇಲ್ಲ, ನಾನು ಆತನನ್ನು ನೋಡಿಯೇ ಇಲ್ಲ. ಆದಾಯ ತೆರಿಗೆ ಅಧಿಕಾರಿಗಳ ದಾಳಿಯಲ್ಲಿ ಸಿಕ್ಕ ಹಣಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ನೆಲಮಂಗಲದ ನನ್ನ ಮನೆಯಲ್ಲೇ ಇದ್ದೇನೆ, ಆದಾಯ ತೆರಿಗೆ ದಾಳಿಗೆ ಸಂಬಂಧಪಟ್ಟಂತೆ ನನಗೆ ಯಾವ ನೋಟಿಸ್ ಬಂದಿಲ್ಲ. ನನಗೆ ಯಾವ ಸಹೋದರರು ಇಲ್ಲ, ಹೀಗಾಗಿ ನನ್ನ ಸಹೋದರರನ್ನು ವಿಚಾರಣೆ ನಡೆಸುವ ಸಾಧ್ಯತೆಯೂ ಇಲ್ಲ ಎಂದಿದ್ದಾರೆ.

ಕನ್ನಡದ ಶಾಂತಿ ಮಂತ್ರ ವಿಶ್ವಕ್ಕೆ ಪಸರಿಸಿ : ದಸರಾ ಮಹೋತ್ಸವಕ್ಕೆ ಹಂಸಲೇಖ ಚಾಲನೆ

ಮೈಸೂರು,ಅ.15- ಕನ್ನಡದ ಶಾಂತಿ ಮಂತ್ರ ವಿಶ್ವಕ್ಕೆ ಪಸರಿಸಬೇಕು ಎಂದು ನಾದಬ್ರಹ್ಮ, ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ ಕರೆ ನೀಡಿದರು. ಚಾಮುಂಡಿ ಬೆಟ್ಟದಲ್ಲಿಂದು ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಕನ್ನಡವನ್ನು ಪ್ರಪಂಚದ ವೇದಿಕೆಯಲ್ಲಿ ಪ್ರತಿಷ್ಠಾಪಿಸಬೇಕು. ಆಗ ಕನ್ನಡ ಜಗತ್ತಿನ ಭಾಷೆಯಾಗಿ ಬೆಳೆಯಲು ಸಾಧ್ಯವಿದೆ. ಅಭಿವೃದ್ಧಿ ಮತ್ತು ಶಾಂತಿ ಸಂವೃದ್ದಿ ಕನ್ನಡಿಗರ ಒಂದು ಅಂಶ ಕಾರ್ಯಸೂಚಿಯಾಗಬೇಕು ಎಂದರು.

ಪೂಜ್ಯ ಕನ್ನಡ – ಕನ್ನಡಿಗರಿಗೆ ನನ್ನ ನಮನ ಎಂದು ಭಾಷಣ ಆರಂಭಿಸಿದ ಅವರು, ಈ ಬಾರಿಯ ದಸರಾ ಮಹೋತ್ಸವವನ್ನು ಕರ್ನಾಟಕ ಐದಶ ಎಂದು ಕರೆಯೋಣ, ಕರ್ನಾಟಕದ ಏಕೀಕರಣವಾಗಿ 50 ವರ್ಷಗಳಾಗಿದೆ ಹಾಗೆಯೇ ನನ್ನ ಕಲಾ ಸೇವೆಯು ಆರಂಭವಾಗಿ 50 ವರ್ಷಗಳು ತುಂಬಿದೆ .ಹಾಗಾಗಿ ಈ ಬಾರಿಯ ದಸರಾ ಮಹೋತ್ಸವವನ್ನು ಕರ್ನಾಟಕ ಐದಶ ಎಂದು ಕರೆಯೋಣ. ನನ್ನ ಐವತ್ತು ವರ್ಷಗಳ ಸೇವೆಗೆ ಸಿಕ್ಕಿರುವ ಇದು ಬಹಳ ದೊಡ್ಡ ಬೆಲೆ ಬಾಳುವಂತದು ಎಂದರು.

ಈ ದೇವಾಲಯ, ಈ ಬೆಟ್ಟ, ಈ ದೇವಿ, ಹಬ್ಬ, ಈ ದಿಬ್ಬ, ಈ ದೀಪ ಹಚ್ಚೋದು, ನನ್ನ ಸೌಭಾಗ್ಯ. ದೈವಸಮಾನಾವಾದ ಈ ನುಡಿಗೆ , ಕನ್ನಡ ನಾಡಿಗೆ , ಈ ದೇವಾಲಯಕ್ಕೆ , ಈ ಪ್ರೇಮಾಯಣಕ್ಕೆ ಸಾವಿರದ ಶರಣುಗಳು ಎಂದು ಹೇಳಿದರು.ಈ ಅವಕಾಶಕ್ಕಾಗಿ ಯಾರನ್ನು ನೆನೆಯಬೇಕು, ಅಪ್ಪ ಗೋವಿಂದರಾಜು, ಅವ್ವ ರಾಜವ್ವ, ಗುರು ನೀಲಕಂಠನನ್ನೇ, ರಕ್ತದೊಳಗಿನ ನಾದವನ್ನೇ, ಚಂದನವನವನ್ನೇ, ಸರ್ಕಾರವನ್ನೇ , ಸಂವಿಧಾನವನ್ನೇಎಂದು ಬಣ್ಣಿಸಿದರು.

ಚಾಮುಂಡಿ ಬೆಟ್ಟಕ್ಕೆ ಸಾವಿರ ಮೆಟ್ಟಿಲುಗಳಿವೆ. ದಸರಾ ಸಮಾರಂಭದಲ್ಲಿ ಭಾಗವಹಿಸಲು ನಾನು ಸಾವಿರ ಮೆಟ್ಟಿಲುಗಳನ್ನು ಹತ್ತಿ ಬಂದಿದ್ದೇನೆ. ಈ ಅವಕಾಶಕ್ಕಾಗಿ ನಿರಾಯಾಸವಾಗಿ ಬಂದಿಲ್ಲ , ನಾನು ಸಹ ಸಾವಿರ ಮೆಟ್ಟಿಲುಗಳನ್ನು ಜೀವನದಲ್ಲಿ ಹತ್ತಿ ಇಂದು ಇಂತಹ ಒಂದು ದೊಡ್ಡ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದೇನೆ ಎಂದು ಸಂತಸಪಟ್ಟರು.

ಪಾರ್ಟಿಯಲ್ಲಿ ಶೂಟೌಟ್ ಮೂವರ ಸಾವು

ಸಮೀಕ್ಷೆ ನಡೆಯಬೇಕು: ಕರ್ನಾಟಕದಲ್ಲಿ ಕನ್ನಡ ಮಾತನಾಡುವವರ ಕುರಿತು ಒಂದು ಸಮೀಕ್ಷೆ ನಡೆಯಬೇಕು ಕರ್ನಾಟಕದಲ್ಲಿ ಎಷ್ಟು ಮಂದಿಗೆ ಕನ್ನಡ ಬರುತ್ತದೆ. ಕನ್ನಡ ಬರೆಯಲು ಬರುತ್ತದೆ. ಕನ್ನಡ ಓದಲು ಬರುತ್ತದೆ ಎಂಬ ಎಲ್ಲಾ ವಿಷಯ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಸಮೀಕ್ಷೆಯನ್ನು ನಡೆಸಬೇಕು ಎಂದು ಅವರು ಹೇಳಿದರು.

ಇದೊಂದು ಡೇಟಾ ಆಗಬೇಕು. ಈ ಮಾಹಿತಿ ನಮ್ಮಲ್ಲಿ ಇರಬೇಕು ಎಂದು ಸರ್ಕಾರಕ್ಕೆ ಇದೇ ವೇಳೆ ಹಂಸಲೇಖ ಅವರು ಮನವಿ ಮಾಡಿದರು. ಸರ್ಕಾರ ಹಾಗೂ ಸಾರ್ವಜನಿಕರ ಒತ್ತಾಸೆ ಮೇರೆಗೆ ಇದನ್ನು ಮಾಡಬೇಕು. ಕನ್ನಡ ಕಲಿಯಬೇಕು ಎಂದು ಮುಂದೆ ಬರುವವರಿಗೆ ಕರ್ನಾಟಕದಲ್ಲಿ 30 ದಿನಗಳೊಳಗೆ ಕನ್ನಡವನ್ನು ಕಲಿಸಬೇಕು. ಅವರು ಕನ್ನಡ ಕಲಿತ ಮೇಲೆ ಅವರಿಗೆ ಕನ್ನಡ ಪಟ್ಟ ನೀಡಬೇಕು. ಕನ್ನಡ ಪಟ್ಟ ಎಂದರೆ ಇದೊಂದು ದಾಖಲೆಯಾಗಿರುತ್ತದೆ ಎಂದರು.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

ಎಪಿಎಲ್ , ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಈ ಕನ್ನಡ ಪಟ್ಟ ಹೊಂದಿರುವವರಿಗೆ ಕರ್ನಾಟಕದಲ್ಲಿ ಕೆಲಸ ಸಿಗುವಂತಾಗಬೇಕು ಎಂದವರು ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು. ಇಂದಿನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ಕೆ.ಜೆ.ಜಾರ್ಜ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಶ್ರೀವತ್ಸ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಮೇಯರ್ ಶಿವಕುಮಾರ್ ಸೇರಿದಂತೆ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಥಾಣೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಅನಿಲ ಸೋರಿಕೆ

ಥಾಣೆ, ಅ. 15 -ಮಹಾರಾಷ್ಟ್ರದ ಥಾಣೆ ನಗರದ ಆಸ್ಪತ್ರೆಯೊಂದರಲ್ಲಿ ಮಧ್ಯರಾತ್ರಿಯ ಸಿಲಿಂಡರ್‌ನಿಂದ ಆಮ್ಲಜನಕದ ಅನಿಲ ಸೋರಿಕೆಯಾಗಿದ್ದು ಯಾವುದೇ ಅನಾಹುತ ನಡೆದಿಲ್ಲ. ವಾಗ್ಲೆ ಎಸ್ಟೇಟ್‍ನ ಶ್ರೀನಗರ ಪ್ರದೇಶದಲ್ಲಿರುವ ಮಾತೋಶ್ರೀ ಗಂಗೂಬಾಯಿ ಸಂಭಾಜಿ ಶಿಂಧೆ ಆಸ್ಪತ್ರೆಯಲ್ಲಿ ಮಧ್ಯರಾತ್ರಿ 12.25ಕ್ಕೆ ಈ ಘಟನೆ ನಡೆದಿದೆ.

ಅನಿಲ ಸೋರಿಕೆಯಿಂದಾಗಿ ಯಾವುದೇ ರೋಗಿಗೆ ತೊಂದರೆಯಾಗಿಲ್ಲ ಎಂದು ಥಾಣೆ ಮುನ್ಸಿಪಲ್ ಕಾಪೆರ್ರೇಷನ್‍ನ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತಾದ್ವಿ ತಿಳಿಸಿದ್ದಾರೆ. ಮೂಲಗಳ ಪ್ರಕಾರ 390 ಕೆಜಿ ಸಿಲಿಂಡರ್‍ನಲ್ಲಿ ಒತ್ತಡ ಹೆಚ್ಚಾದಂತೆ ಅದರ ಸುರಕ್ಷತಾ ಕವಾಟ ಬಾಗಿ ಅನಿಲ ಸೋರಿಕೆಯಾಗ ತೊಡಗಿತು ಎಚ್ಚೆತ್ತ ಅಟೆಂಡೆಂಟ್ ಒತ್ತಡವನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ವಿಶ್ವಕಪ್ ಪಂದ್ಯ : ಭಾರತಕ್ಕೆ 192 ರನ್ ಟಾರ್ಗೆಟ್ ಪಾಕ್

ಸುಮಾರು 45 ನಿಮಿಷ ಆಮ್ಲಜನಕದ ಅನಿಲ ಸೋರಿಕೆಯಾಗಿ ನಂತರ ಅದನ್ನು ಮುಚ್ಚಲಾಯಿತು ಆಸ್ಪತ್ರೆಯಲ್ಲಿ 390 ಕೆಜಿಯ ಮತ್ತೊಂದು ಆಮ್ಲಜನಕ ಗ್ಯಾಸ್ ಸಿಲಿಂಡರ್ ಇದ್ದು ಯಾವುದೇ ತೊಂದರೆಯಾಗಿಲ್ಲ .
ತುರ್ತು ಸಂಸರ್ಭದಲ್ಲಿ ರೋಗಿಗಳಿಗೆ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

ಮುಂಬೈ, ಅ.15- ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸಮೃದ್ಧಿ ಎಕ್ಸ್‍ಪ್ರೆಸ್‍ವೇಯಲ್ಲಿ ಇಂದು ಮುಂಜಾನೆ ವೇಗವಾಗಿ ಬಂದ ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿ ಹೊಡೆದ ನಡೆದ ಭೀಕರ ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು 23 ಮಂದಿ ಗಾಯಗೊಂಡಿದ್ದಾರೆ.

ಮುಂಬೈನಿಂದ ಸುಮಾರು 350 ಕಿಮೀ ದೂರದಲ್ಲಿರುವ ವೈಜಾಪುರ ಪ್ರದೇಶದ ಎಕ್ಸ್‍ಪ್ರೆಸ್‍ವೇಯ ಮಧ್ಯರಾತ್ರಿ 12.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅವರು ಪೊಲೀಸರು ಹೇಳಿದರು.ಈ ಮಿನಿ ಬಸ್‍ನಲ್ಲಿ ಸುಮಾರು 35 ಜನರು ಪ್ರಯಾಣಿಸುತ್ತಿದ್ದರು ಎಂದು ಗೊತ್ತಾಗಿದೆ.

ಕಿಯೊನಿಕ್ಸ್ ನಲ್ಲಿ ಮುಕ್ತ ಟೆಂಡರ್ ವ್ಯವಸ್ಥೆಗೆ ಚಾಲನೆ

ಮಿನಿ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಹಿಂಬದಿಯಿಂದ ಕಂಟೇನರ್‍ಗೆ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಇದರ ರಭಸಕ್ಕೆ ವಾಹನ ಪಲ್ಟಿ ಹೊಡೆದಿದೆ ,ಹನ್ನೆರಡು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಐವರು ಪುರುಷರು, ಆರು ಮಹಿಳೆಯರು ಮತ್ತು ಬಾಲಕಿ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅಂಬುಲೆನ್ಸ್ ಮೂಲಕ ಗಾಯಗೊಂಡಿದ್ದವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಪಾರ್ಟಿಯಲ್ಲಿ ಶೂಟೌಟ್ ಮೂವರ ಸಾವು

ಡೆನ್ವರ್ (ಅಮೆರಿಕ), ಅ.15- ರಸ್ತೆಯಲ್ಲಿ ಪಾರ್ಟಿ ಮಾಡುವಾಗ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಅಮೆರಿಕ ಉತ್ತರ ಭಾಗದ ಕೊಲೊರಾಡೋ ರಾಜಧಾನಿ ಡೆನ್ವರ್ ನಗರದಲ್ಲಿ ನಡೆದಿದೆ. ಸುಮಾರು 8 ಮಂದಿ ಡೆನ್ವರ್‍ನ ಅಂಗಡಿಯ ಮುಂಭಾಗದಲ್ಲಿ ರಾತ್ರಿ ಪಾರ್ಟಿ ಮಾಡುತ್ತಿದ್ದರು ಮುಂಜಾನೆ ಅವರ ನಡುವೆ ಜಗಳವಾಗಿ ಇಬ್ಬರು ಬಂದೂಕಿನಿಂದ ಗುಂಡು ಹಾರಿಸಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಭಧ್ರತಾ ಸಿಬ್ಬಂದಿ ಆಸ್ಪತ್ರೆಗೆ ಸಾಗಸಿದ್ದಾರೆ ಅಲ್ಲಿ ಮೂವರು ಪುರುಷರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ, ಒಬ್ಬ ಪುರುಷ ಮತ್ತು ಇಬ್ಬರು ಮಹಿಳೆಯರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶ್ವಕಪ್ ಪಂದ್ಯ : ಭಾರತಕ್ಕೆ 192 ರನ್ ಟಾರ್ಗೆಟ್ ಪಾಕ್

ಸಾವನ್ನಪ್ಪಿರುವವರ ಹೆಸರುಗಳು ಮತ್ತು ವಯಸ್ಸು ತಕ್ಷಣವೇ ಲಭ್ಯವಿಲ್ಲ,ಮಾಹಿತಿ ಕಲೆಹಾಕಲಾಗುತ್ತಿದೆ.ಇನ್ನು ಗುಂಡಿನ ದಾಳಿ ಮಾಡಿದವರ ಬಗ್ಗೆಯೂ ಶೋಧ ಕಾರ್ಯ ನಡೆದಿದೆ ಎಂದು ಮಾಧ್ಯಮಕ್ಕೆ ಪೊಲೀಸರು ತಿಳಿಸಿದ್ದಾರೆ.

ಪಾರ್ಟಿ ವೇಳೆ ಹಲವು ಗುಂಡು ಹಾರಿರುವ ಪುರಾವೆಗಳು ಕಂಡುಬಂದಿದೆ ಅಂಗಡಿಯಲ್ಲಿದ್ದ ಕೆಲಸಗಾರರು ಗುಂಡಿನ ಸದ್ದು ಕೇಳುತ್ತಿದಂತೆ ಬೆಚ್ಚಿಬಿದ್ದಿದ್ದಾರೆ ಪೊಲೀಸರಿಗೆ ಇಮೇಲ್‍ನಲ್ಲಿ ಮಾಹಿತಿ ನೀಡಿದ್ದಾರೆ, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆಯಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-10-2023)

ನಿತ್ಯ ನೀತಿ : ಎಷ್ಟೇ ಮೇಧಾವಿಯಾಗಿ ಬೆಳೆದರೂ ಅವರಲ್ಲೂ ಏರು-ಪೇರುಗಳು ಇದ್ದೇ ಇರುತ್ತವೆ. ಅದನ್ನು ಅರ್ಥೈಸಿಕೊಂಡು ಇನ್ನೊಬ್ಬರನ್ನು ಗೌರವಿಸಬೇಕು.

ಪಂಚಾಂಗ ಭಾನುವಾರ 15-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಚಿತ್ತಾ / ಯೋಗ: ವೈಧೃತಿ / ಕರಣ: ಕಿಂಸ್ತುಘ್ನ

ಸೂರ್ಯೋದಯ : ಬೆ.06.10
ಸೂರ್ಯಾಸ್ತ : 06.01
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ಶುಭ ಸಮಾರಂಭಗಳು ನಡೆಯುವುದರಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ವೃಷಭ: ವೃತ್ತಿ ಮತ್ತು ಮುಂದಿನ ಬದುಕಿನ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ.
ಮಿಥುನ: ಆಸ್ತಿ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಆರೋಗ್ಯ ಸಮಸ್ಯೆ ಕಾಡುವುದು.

ಕಟಕ: ಸಹೋದರರ ಆಗಮನದಿಂದ ಮನಸ್ಸಿಗೆ ಸಂತಸವಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಸಿಂಹ: ರಫ್ತು, ಆಮದು ವ್ಯವಹಾರದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ.
ಕನ್ಯಾ: ನೀವು ಮಾಡುವ ಕೆಲಸ -ಕಾರ್ಯಗಳಿಂದ ಗೌರವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ.

ತುಲಾ: ಮಧ್ಯವರ್ತಿಗಳ ಸಹಾಯದಿಂದಾಗಿ ವಿವಾಹದ ವಿಷಯದಲ್ಲಿ ಅನುಕೂಲವಾಗಲಿದೆ.
ವೃಶ್ಚಿಕ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾಗಲಿವೆ. ವಾಹನ ಚಾಲನೆಯಲ್ಲಿ ಜಾಗ್ರತೆ ವಹಿಸಿ.
ಧನುಸ್ಸು: ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ. ಪ್ರಯಾಣದಲ್ಲಿ ಕಿರಿಕಿರಿ ಉಂಟಾಗಬಹುದು.

ಮಕರ: ಕಾರ್ಯ ನಿಮಿತ್ತ ದೂರ ಪ್ರಯಾಣ ಮಾಡ ಬೇಕಾಗಬಹುದು. ಪಾಲುದಾರಿಕೆಯಲ್ಲಿ ನಷ್ಟ.
ಕುಂಭ: ಸಮೀಪ ವರ್ತಿಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ. ಎಚ್ಚರ ವಹಿಸಿ.
ಮೀನ: ನಿಮ್ಮ ನೆಚ್ಚಿನ ಕಾರ್ಯಯೋಜನೆಗಳು ಕೈಗೂಡಲಿವೆ. ಸಂಭ್ರಮದ ದಿನ.