ಬೆಂಗಳೂರು, ಜು.7- ಆಷಾಢ ಆರಂಭವಾಗುವ ಮುನ್ನವೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ತಿಪಟೂರು ಕ್ಷೇತ್ರದ ಶಾಸಕ ಷಡಕ್ಷರಿ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಕಾರಣಗಳಿಂದಾಗಿ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಜುಲೈ 14 ರೊಳಗಾಗಿಯೇ ಸಂಪುಟ ವಿಸ್ತರಣೆಯಾಗಬಹುದು ಎಂಬ ವಿಶ್ವಾಸವಿದೆ. ಒಂದು ವೇಳೆ ಸಾಧ್ಯವಾಗದೇ ಇದ್ದರೆ, ಆಷಾಢ ಬಳಿಕ ಶ್ರಾವಣದಲ್ಲಿ ವಿಸ್ತರಣೆಯಾಗಲಿದೆ ಎಂದು ಹೇಳಿದರು.
ಪೂರ್ಣ ಪ್ರಮಾಣದ ಸಂಪುಟ ಇಲ್ಲದೇ ಇರುವುದರಿಂದ ಕೆಲಸ ಮಾಡಲು ಅನಾನುಕೂಲಗಳಾಗುತ್ತಿವೆ. ಸಚಿವರ ಸಂಖ್ಯೆ ಕಡಿಮೆ ಇದೆ, ಖಾತೆಗಳ ಸಂಖ್ಯೆ ಹೆಚ್ಚಿವೆ. ಅನುಭವ ಇರುವ ಶಾಸಕರುಗಳಿರುವುದರಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸಚಿವ ಸಂಪುಟ ಸೇರಲು ಲಾಬಿ ನಡೆಸುತ್ತಿದ್ದವರು ಯಾವುದೇ ಭಯದಿಂದ ಸುಮನಾಗಿಲ್ಲ, ಸಂಪುಟದಲ್ಲಿ ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದೇವೆ ಎಂದು ಹೇಳಿದರು.
ಸಂಪುಟಕ್ಕೆ ಯಾರನ್ನೆಲ್ಲಾ ಸೇರಿಸಿಕೊಳ್ಳಬೇಕೆಂಬ ಚರ್ಚೆ ನಡೆದು ತೀರ್ಮಾನವಾಗಿದೆ. ಅದರ ಮಾಹಿತಿ ನಮಗೆ ದೊರೆತ್ತಿದೆ. ಆದರೆ ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ, ತೆರೆಮರೆಯಲ್ಲಿ ನಮ ಪ್ರಯತ್ನಗಳು ಮುಂದುವರೆದಿವೆ ಎಂದರು.
ಬೆಂಗಳೂರು ಸೇರಿದಂತೆ 7 ಜಿಲ್ಲೆಗಳಿಗೆ ಗಣೇಶ್ ಪ್ರಸಾದ್ ಮತ್ತು ತಾವು ಇಬ್ಬರು ಸಮುದಾಯದ ಶಾಸಕರಿದ್ದೇವೆ. ಗಣೇಶ್ ಪ್ರಸಾದ್ ಮೊದಲ ಬಾರಿ ಆಯ್ಕೆಯಾಗಿದ್ದಾರೆ. ನಾನು 40 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುತ್ತಿದ್ದೇನೆ. ಈ ಬಾರಿ ನನಗೆ ಸಂಪುಟದಲ್ಲಿ ಅವಕಾಶ ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು.
