ಬೆಂಗಳೂರು,ಡಿ.28- ಕನ್ನಡ ನಾಮಫಲಕಗಳಿಗೆ ಆಗ್ರಹಿಸಿ ಹೋರಾಟ ಮಾಡಿ ಬಂಧನವಾಗಿರುವ ಕನ್ನಡ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದಾರೆ. ನಾಮಫಲಕಗಳು ಕನ್ನಡದಲ್ಲಿರ ಬೇಕೆಂದು ಆಗ್ರಹಿಸಿ ಹೋರಾಟ ಮಾಡಿದ ಹಲವಾರು ಕನ್ನಡ ಕಾರ್ಯಕರ್ತರ ಬಂಧನಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಂಧಿತ ಕಾರ್ಯ ಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹಾಗೂ ಹಲವು ಕಾರ್ಯಕರ್ತರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿರುವ ಪ್ರವೀಣ್ಶೆಟ್ಟಿಯವರು ಕೂಡಲೇ ನಾರಾಯಣಗೌಡ ಹಾಗೂ ಮತ್ತಿತರ ರನ್ನು ಬಿಡುಗಡೆ ಮಾಡದಿದ್ದರೆ ಸರ್ಕಾರ ಕ್ರಾಂತಿಕಾರ ಹೋರಾಟ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಸಂಘಟನೆಗಳಿಗೆ ಗೃಹಸಚಿವ ಪರಮೇಶ್ವರ್ ಎಚ್ಚರಿಕೆ
ಕನ್ನಡ ಹೋರಾಟಗಾರರೇನು ಲೂಟಿ, ದರೋಡೆ, ಕೊಲೆ ಮಾಡಿಲ್ಲ . ಕನ್ನಡಕ್ಕೋಸ್ಕರ ಹೋರಾಟ ಮಾಡಿದ್ದಾರೆ. ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಕೆಲಸ ಸರ್ಕಾರದಿಂದ ಆಗಬೇಕು. ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಇರಬೇಕೆಂಬ ಕಾನೂನಿದೆ. ಅಂಗಡಿಗಳಿಗೆ ಪರವಾನಗಿ ನೀಡುವಾಗ ಸರ್ಕಾರ ಇದನ್ನು ಪಾಲಿಸಬೇಕು. ಆದರೆ ಯಾವುದೇ ಹೋಟೆಲ್, ಮಾಲ್, ಐಟಿ-ಬಿಟಿ ಕಂಪೆನಿಗಳು ಪಾಲನೆ ಮಾಡುತ್ತಿಲ್ಲ.
ಸರ್ಕಾರದ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನದ ವಿರುದ್ಧ ಕನ್ನಡಪರ ಹೋರಾಟಗಾರರು ಪ್ರತಿಭಟನೆ ಮಾಡಿದರೆ ಅಂತಹವರನ್ನು ಜೈಲಿಗಟ್ಟಿ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಇದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದ್ದಾರೆ. ಸರ್ಕಾರ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿದ್ದರೆ ಶನಿವಾರ ಬೆಂಗಳೂರಿನಲ್ಲಿ ಕನ್ನಡಪರ ಹೋರಟಗಾರರ ಮಹತ್ವದ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.