Sunday, April 28, 2024
Homeರಾಜ್ಯಜನತಾ ದರ್ಶನದ ಮೂಲಕ ಜನರ ನೋವುಗಳಿಗೆ ಸ್ಪಂದಿಸಿದ ಸಿಎಂ

ಜನತಾ ದರ್ಶನದ ಮೂಲಕ ಜನರ ನೋವುಗಳಿಗೆ ಸ್ಪಂದಿಸಿದ ಸಿಎಂ

ಬೆಂಗಳೂರು,ನ.27- ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾದರ್ಶನ ನಡೆಸುವ ಮೂಲಕ ಸಾವಿರಾರು ಜನರ ದೂರುದುಮ್ಮಾನಗಳಿಗೆ ಸ್ಪಂದಿಸಿದರು. ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ನಡೆಸುತ್ತಿದ್ದ ಜನತಾ ದರ್ಶನದಷ್ಟೇ ವಿಶ್ವಾಸರ್ಹತೆಯನ್ನು 2ನೇ ಅಧಿಕಾರಾವಧಿಯ ಜನತಾ ದರ್ಶನವೂ ಉಳಿಸಿಕೊಂಡಿದ್ದು, ಸಮಸ್ಯೆಗೆ ಸ್ಪಂದಿಸಲು ಈ ಮೊದಲಿಗಿಂತಲೂ ಕ್ರಮಬದ್ದವಾದ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.

ಜನತಾದರ್ಶನಕ್ಕೆ ರಾಜ್ಯದ ನಾನಾ ದಿಕ್ಕುಗಳಿಂದಲೂ ಜನಸಾಮಾನ್ಯರು ಆಗಮಿಸಿದ್ದರು. ಎಲ್ಲರ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ ಜನಸಂಪರ್ಕ ಇಲಾಖೆಯ ತಂತ್ರಾಂಶದಲ್ಲಿ ದಾಖಲಿಸಿ ಕ್ರಮ ಸಂಖ್ಯೆ ನೀಡಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿಯೊಬ್ಬರ ಅರ್ಜಿಗಳನ್ನು ಪಡೆದು ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ಪರಿಹಾರ ದೊರಕಿಸುವ ಪ್ರಯತ್ನ ನಡೆಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸ್ಥಳದಲ್ಲೇ ಮೊಕ್ಕಾಂ ಹೂಡಿದರು. ಹೀಗಾಗಿ ಆಯಾ ಇಲಾಖೆಗಳ ಮತ್ತು ಪ್ರಾದೇಶಿಕವಾದ ಸಮಸ್ಯೆಗಳ ಬಗ್ಗೆ ಸಮನ್ವಯತೆಯೊಂದಿಗೆ ತುರ್ತು ಪರಿಹಾರ ದೊರಕಿಸುವ ಪ್ರಯತ್ನ ನಡೆಸಲಾಯಿತು.

ಭಾರತೀಯರ ಯೋಗಕ್ಷೇಮಕ್ಕೆ ತಿಮ್ಮಪ್ಪನ ಮೊರೆ ಹೋದ ಮೋದಿ

ಜನತಾ ದರ್ಶನಕ್ಕಾಗಿ ಸಾವಿರಾರು ಜನ ಸಾಲುಗಟ್ಟಿ ಬಂದಿದ್ದರು. ದೂರದ ಊರುಗಳಿಂದ ಬಂದವರಿಗೆ ಸ್ಥಳದಲ್ಲಿ ಕುಡಿಯುವ ನೀರು ಸೇರಿದಂತೆ ಹಲವು ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಪಾರ್ಕಿಂಗ್ ಸೇರಿದಂತೆ ನಾನಾ ರೀತಿಯ ವ್ಯವಸ್ಥೆಗಳಿಗೆ ಕುಮಾರಕೃಪ ಹಾಗೂ ಇತರ ಸ್ಥಳಗಳನ್ನು ಬಳಸಿಕೊಳ್ಳಲಾಗಿತ್ತು. ಸಾವಿರಾರು ಜನ ಆಗಮಿಸಿದ್ದರಿಂದ ಜನದಟ್ಟಣೆ ಹೆಚ್ಚಾಗಿತ್ತು. ಅರ್ಜಿದಾರರ ಸಾಲು ಕುಮಾರಕೃಪ ಅತಿಥಿಗೃಹದವರೆಗೂ ಮುಂದುವರೆದಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾಳ್ಮೆಯಿಂದಲೇ ಪ್ರತಿಯೊಬ್ಬರ ಅಹವಾಲನ್ನು ಸ್ವೀಕರಿಸಿ ಪರಿಹಾರ ದೊರಕಿಸುವ ಪ್ರಯತ್ನ ಮಾಡಿದರು. ಮುಖ್ಯಮಂತ್ರಿ ಕಚೇರಿಯ ಹಿರಿಯ, ಕಿರಿಯ ಅಧಿಕಾರಿಗಳು ಸಕ್ರಿಯವಾಗಿ ಜನತಾದರ್ಶನದಲ್ಲಿ ತೊಡಗಿಸಿಕೊಂಡಿದ್ದರು. 20ಕ್ಕೂ ಹೆಚ್ಚು ಕೌಂಟರ್‍ಗಳನ್ನು ನಿರ್ಮಿಸಲಾಗಿತ್ತು.

RELATED ARTICLES

Latest News