ಬೆಂಗಳೂರು,ಫೆ.24- ಬಜೆಟ್ ಮಂಡನೆಗೂ ಮುನ್ನ ಕರ್ನಾಟಕದ ಮತದಾರರನ್ನು ಕಾಡುತ್ತಿರುವ ಈ ಪ್ರಶ್ನೆಗಳಿಗೆ ಉತ್ತರಿಸಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಒಂದು ಶ್ವೇತಪತ್ರ ಹೊರಡಿಸಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಎಕ್್ಸನಲ್ಲಿ ಟ್ವೀಟ್ ಮಾಡಿರುವ ಅವರು, ಗ್ಯಾರೆಂಟಿ ಹಠಾವೋ ಆಂದೋಲನ ಶುರು? ಸಿದ್ದರಾಮಯ್ಯನವರೇ ಕಳೆದ ಮೂರು ವರ್ಷಗಳಲ್ಲಿ ವಿಪಕ್ಷಗಳು, ಮಾಧ್ಯಮದವರು ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲಾ ತಿಪ್ಪೆ ಸರಿಸುವ ಮಾತಾಡಿ, ಸುಳ್ಳು ಹೇಳುತ್ತಲೇ ಬಂದಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ.
ಈಗ ಮಾರ್ಚ್ 6ರಂದು ತಾವು ಮಂಡಿಸುವ ಬಜೆಟ್ ನಲ್ಲಿ ಗ್ಯಾರೆಂಟಿ ಹಠಾವೋ ಆಂದೋಲನ ಶುರುವಾಗುವ ಮುನ್ಸೂಚನೆಗಳು ಸಿಗುತ್ತಿವೆ.ಗ್ಯಾರೆಂಟಿ ಯೋಜನೆಗಳ ಬಗ್ಗೆ ರಾಜ್ಯದ ಜನರ ಮನದಲ್ಲಿ ಹಲವಾರು ಪ್ರಶ್ನೆಗಳಿವೆ. ಈಗಲಾದರೂ ರಾಜ್ಯದ ಜನತೆಗೆ ಸತ್ಯಾಂಶ ತಿಳಿಸಿ ಸ್ವಾಮಿ ಎಂದು ಒತ್ತಾಯಿಸಿದ್ದಾರೆ.
ಅಸಲಿಗೆ ಗ್ಯಾರೆಂಟಿ ಯೋಜನೆಗಳ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು? ತಾವೋ, ಕೆಪಿಸಿಸಿ ಅಧ್ಯಕ್ಷರೋ, ಅಥವಾ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಜ್ಞರೋ? ಎಂದು ಪ್ರಶ್ನೆ ಮಾಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ 5 ಗ್ಯಾರೆಂಟಿ ಯೋಜನೆಗಳನ್ನು ಘೋಷಿಸುವ ಮುನ್ನ ಇದಕ್ಕೆ ತಗುಲುವ ವೆಚ್ಚದ ಬಗ್ಗೆ ಅಂದಾಜು ಮಾಡಲಾಗಿತ್ತಾ? ಎಂದು ಪ್ರಶ್ನಿಸಿದ್ದಾರೆ. ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಸಾಧ್ಯಾಧ್ಯಾತೆಗಳ ಬಗ್ಗೆ ಯಾರಾದರೂ ಆರ್ಥಿಕ ತಜ್ಞರ ಸಲಹೆ, ಅಭಿಪ್ರಾಯ ಪಡೆಯಲಾಗುತ್ತಾ? ಅಥವಾ ಕೇವಲ ಚುನಾವಣೆ ಗೆಲ್ಲುವ ಹಪಹಪಿಯಿಂದ ಯಾವುದೇ ಮುಂದಾಲೋಚನೆ ಇಲ್ಲದೆ ಬೇಕಾಬಿಟ್ಟಿ ಘೋಷಣೆ ಮಾಡಿದ್ದಾ? ಎಂದು ಕೇಳಿದ್ದಾರೆ.
ಪಂಚ ಗ್ಯಾರೆಂಟಿ ಯೋಜನೆಗಳ ಘೋಷಣೆ ಬಗ್ಗೆ ಹೈಕಮಾಂಡ್ ಸೇರಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಸರ್ವಾನುಮತ ಇತ್ತಾ? ಅಥವಾ ಭಿನ್ನಾಭಿಪ್ರಾಯಗಳು ಇದ್ದವಾ? ಎಂದು ಮತ್ತೊಂದು ಪ್ರಶ್ನೆ ಹಾಕಿದ್ದಾರೆ.
ಬಜೆಟ್ ಮಂಡನೆಗೂ ಮುನ್ನ ಕರ್ನಾಟಕದ ಮತದಾರರನ್ನು ಕಾಡುತ್ತಿರುವ ಈ ಪ್ರಶ್ನೆಗಳಿಗೆ ಉತ್ತರಿಸಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಒಂದು ಶ್ವೇತಪತ್ರ ಹೊರಡಿಸಿ ಎಂದು ಅಶೋಕ್ ಸವಾಲು ಹಾಕಿದ್ದಾರೆ.
