ಬೆಂಗಳೂರು, ಜ.30- ವಸಾಹತು ಶಾಹಿ ಪರಂಪರೆ ಹೊಂದಿರುವ ರಾಜ್ಯಪಾಲರ ಭಾಷಣವನ್ನು ಮುಂದುವರಿಸುವ ಔಚಿತ್ಯದ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಂಭೀರ ಚರ್ಚೆಯಾಗಬೇಕಿದೆ ಎಂದು ಬಿಜೆಪಿಯ ಹಿರಿಯ ಸದಸ್ಯ ಎಸ್.ಸುರೇಶ್ಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಇಂಗ್ಲೆಂಡ್ನಲ್ಲಿ ಅಲ್ಲಿನ ಸಂಸತ್ ಉದ್ದೇಶಿಸಿ ಬ್ರಿಟನ್ ರಾಣಿಯವರು ವರ್ಷದ ಮೊದಲ ಸಮಾವೇಶದಲ್ಲಿ ಮಾತನಾಡುವ ಸಂಪ್ರದಾಯವಿದೆ.
ನಮಲ್ಲಿಯೂ ಯಥಾರೀತಿಯಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಕೊಂಡು ಬಂದಿದೆ ಸಂವಿಧಾನ ರಚನೆಯ ವೇಳೆ ಭವಿಷ್ಯದಲ್ಲಿ ಈ ರೀತಿಯ ಸಂಘರ್ಷ ನಡೆಯಬಹುದು ಎಂದು ಅಂದಾಜು ಇರಲಿಲ್ಲ. ಐಪಿಸಿ ತಯಾರಾದಾಗ ಹೇಗೆ ಸೈಬರ್ ಕ್ರೈಂ ಅಪರಾಧಗಳ ಕಲ್ಪನೆ ಇರಲಿಲ್ಲವೋ ಅದೇ ರೀತಿ ಸಂವಿಧಾನ ರಚನೆ ವೇಳೆ ರಾಜ್ಯಪಾಲರ ಭಾಷಣದ ಸಂಘರ್ಷದ ವಾತಾವರಣವೂ ಎದುರಾಗಿರಲಿಲ್ಲ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಇದರ ಅಗತ್ಯ ಇದೆಯೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ ಎಂದರು.
ರಾಜ್ಯಪಾಲರು ನನ್ನ ಸರ್ಕಾರ ಎಂದು ಸಂಭೋಧಿಸಿ ಭಾಷಣ ಮಾಡುತ್ತಾರೆ. ಜನ ವಿಧಾನಸೌಧದ ಮುಂದಿನ ಅಂಬೇಡ್ಕರ್ ರಸ್ತೆಯಲ್ಲಿ ನಡೆದು ಹೋಗುವ ಸಾಮಾನ್ಯ ವ್ಯಕ್ತಿಗೆ ವಿಧಾನ ಸೌಧದ ಒಳಗೆ ನನ್ನ ಬಗ್ಗೆ ಚರ್ಚೆಯಾಗುತ್ತಿದೆಯೇ ? ಎಂಬ ಗೊಂದಲ ಕಾಡುತ್ತದೆ. ನಾವಿಲ್ಲಿ ಜನಸಾಮಾನ್ಯರ ಸಮಸ್ಯೆಗಳಾದ ಆರೋಗ್ಯ, ಶಿಕ್ಷಣದಂತಹ ವಿಚಾರಗಳನ್ನು ಚರ್ಚಿಸಿ ಪ್ರತಿಯೊಬ್ಬ ನಾಗರಿಕನಿಗೂ ಇದು ನನ್ನ ಸರ್ಕಾರ ಎಂಬ ಭಾವನೆ ಮೂಡಿಸುವ ಅಗತ್ಯ ಇದೆ ಎಂದು ಹೇಳಿದರು.
ರಾಜ್ಯಪಾಲರ ಭಾಷಣವನ್ನು ನಿಲ್ಲಿಸುವ ಅಗತ್ಯ ಇದೆ. ಅದಕ್ಕೆ ಕರ್ನಾಟಕ ರಾಜ್ಯದಿಂದಲೇ ಚರ್ಚೆಗಳು ಆರಂಭವಾಗಬೇಕು ಎಂದು ಸಲಹೆ ನೀಡಿದರು. ಸರ್ಕಾರ ರಾಜ್ಯಪಾಲರನ್ನು ಕರೆತಂದು ಭಾಷಣ ಮಾಡಿಸುತ್ತದೆ. ಸರ್ಕಾರ ಭಾಷಣ ಮಂಡನೆ ಮಾಡಿದರೇ, ವಿರೋಧ ಪಕ್ಷದವರು ಖಂಡನೆ ಮಾಡುತ್ತಾರೆ. ಈ ಮಂಡನೆ-ಖಂಡನೆಗಳ ನಡುವೆ ಅಗೌರವವಾಗುವುದು ರಾಜ್ಯಪಾಲರಿಗೆ ಎಂದು ಹೇಳಿದರು.
ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ರಾಜ್ಯಪಾಲರು ತಮ ಭಾಷಣದಲ್ಲಿ ಉಲ್ಲೇಖ ಮಾಡುತ್ತಾರೆ. ವಾಸ್ತವವಾಗಿ ಸರ್ಕಾರದ ವಾಸ್ತವ ಚಿತ್ರಣವನ್ನು, ವಿವರಣೆ ನೀಡುವುದು ವಿರೋಧಪಕ್ಷಗಳು ಎಂದು ಹೇಳಿದರು.
ಈ ಹಿಂದೆ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರೀ-ಡೂ ಪ್ರಮುಖವಾಗಿ ಚರ್ಚೆಯಾಗಿತ್ತು. ಅದರ ವಿಚಾರಣೆಗೆ ಕೆಂಪಣ್ಣ ಆಯೋಗ ರಚಿಸಲಾಯಿತು. ಆದರೆ ಅದರ ವರದಿ ಮತ್ತು ನಂತರದ ಕ್ರಮಗಳೇನು ಎಂಬುದು ಈವರೆಗೂ ಗೊತ್ತಾಗಿಲ್ಲ. ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರರ ಪತ್ರವನ್ನು ಮುಂದಿಟ್ಟುಕೊಂಡು ಶೇ.40 ಕಮಿಷನ್ ಸರ್ಕಾರ ಮತ್ತು ಪೇ ಸಿಎಂಎಂದು ಆಧಾರ ರಹಿತವಾಗಿ ಪ್ರಚಾರ ಮಾಡಲಾಗಿತ್ತು. ಆದರೆ ತನಿಖೆಗಾಗಿ ರಚಿಸಲಾಗಿದ್ದ ನಾಗಮೋಹನ್ದಾಸ್ ವರದಿ ಏನಾಯಿತು? ಕೇವಲ ಕೆಸರು ಎರಚಲು ಆರೋಪ ಮಾಡಲಾಯಿತೇ ಹೊರತು ಅದನ್ನು ಸಾಬೀತು ಮಾಡಲಾಗಿಲ್ಲ ಎಂದರು.
ಆರ್ರಸಸಿಬಿ ವಿಜಯೋತ್ಸವದ ವೇಳೆ ಆದ ಕಾಲ್ತುಳಿತದ ಬಗ್ಗೆ ತನಿಖಾ ಆಯೋಗ ವರದಿ ನೀಡಿದೆ. ಘಟನೆಗೆ ಯಾರು ಹೊಣೆ ಎಂಬುದು ಈವರೆಗೂ ಗೊತ್ತಾಗಿಲ್ಲ. ಧರ್ಮಸ್ಥಳದ ವಿರುದ್ಧ ನಡೆದ ಅಪಪ್ರಚಾರದ ತನಿಖೆಗೆ ಎಸ್ಐಟಿ ಮಾಡಲಾಯಿತು. ವಿರೋಧ ಪಕ್ಷಗಳು ಒತ್ತಾಯಿಸಿದರೂ ಮಧ್ಯಂತರ ವರದಿ ನೀಡಿಲ್ಲ, ಎಸ್ಐಟಿಯ ಸ್ಥಿತಿಗತಿ ಏನಾಗಿದೆ? ಈ ನಡುವೆ ಮುಸುಕುಧಾರಿಯ ಬಂಧನ, ಗಡಿಪಾರು, ಬುರುಡೆ ಗ್ಯಾಂಗ್ ಎಲ್ಲವೂ ಚರ್ಚೆಯಾಗುತ್ತಿದೆ. ಅಸಹಾಯಕರಿಗೆ ಧರ್ಮಸ್ಥಳದ ಮಂಜುನಾಥ ಆಶ್ರಯವಾಗಿದ್ದಾರೆ ಎಂಬ ನಂಬಿಕೆಯಿತ್ತು. ಆ ಮಹತ್ವದ ವಿಶ್ವಾಸಕ್ಕೆ ಧಕ್ಕೆ ತರುವ ಪ್ರತಯತ್ನ ನಡೆದಿದ್ದರೂ ಸರ್ಕಾರ ಏನು ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಜನಾರ್ಧನ ರೆಡ್ಡಿ ವಿರುದ್ಧ ಬಳ್ಳಾರಿಯಲ್ಲಾದ ಗಲಭೆಗಳ ಬಗ್ಗೆ ಪ್ರಸ್ತಾಪಿಸಿದ ಸುರೇಶ್ಕುಮಾರ್ ಅವರು, ಘಟನೆಯಲ್ಲಿ ಮೃತಪಟ್ಟ ಯುವಕನ ಶವವನ್ನು ಹೂಳುವ ಬದಲಾಗಿ ರಾಜಕೀಯ ಸ್ವಾರ್ಥಕ್ಕಾಗಿ ಸುಟ್ಟು ಹಾಕಿದ್ದು ತೀವ್ರ ನೋವು ಉಂಟುಮಾಡಿದೆ ಎಂದರು
ಅದಾನಿ ಕಂಪನಿಯ ಸಿಮೆಂಟ್ ಕಾರ್ಖಾನೆಗೆ ಬಂಡವಾಳ ಹೂಡಿಕೆಯ ಆಸಕ್ತಿ ಪತ್ರದ ಅವಧಿ ಒಂದು ವರ್ಷ ವಿಸ್ತರಣೆಗೆ ಕೇಂದ್ರಕ್ಕೆ ಮನವಿ ಸಲ್ಲಿಸಿದೆ.
ಅದಾನಿ ಕಂಪನಿ ಕರ್ನಾಟಕದಲ್ಲಿ ಬಂಡವಾಳ ಹೂಡಿದರೆ ಓಕೆ, ಬೇರೆ ಕಡೆ ಯಾಕೆ? ಎಂಬ ಧೋರಣೆಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ರಾಜ್ಯದಲ್ಲಿ ನವೆಂರ್ ಕ್ರಾಂತಿ ಮತ್ತು ಆನಂತರದ ನಾಯಕತ್ವದ ಗೊಂದಲಗಳು ಜನರಿಗೆ ತೆರಿಗೆ ರಹಿತ ಮನರಂಜನೆ ನೀಡಿವೆ. ರಾಜಕೀಯ ಅನಿಶ್ಚಿತತೆ ಅಧಿಕಾರಿಗಳಲ್ಲಿ ನಿರುತ್ಸಾಹ ಮೂಡಿಸಿದೆ. ಆಡಳಿತವ್ಯವಸ್ಥೆ ಹದಗಟ್ಟಿದೆ ಟಂದು ಸುರೇಶ್ಕುಮಾರ್ ಆರೋಪಿಸಿದರು. ಇದು ಬೆಲೆ ಏರಿಕೆ ಸರ್ಕಾರ, ರಾಜಕೀಯದ ಸೇಡು ತೀರಿಸಿಕೊಳ್ಳುವ ಸರ್ಕಾರ ಎಂದು ಸುರೇಶ್ ಕುಮಾರ್ ವಾಗ್ದಾಳಿ ನಡೆಸಿದರು.
