ಬೆಂಗಳೂರು, ಆ.26- ಲಖನೌದಿಂದ ಬೆಂಗಳೂರಿಗೆ ಆಗಮಿಸಿದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಸಂದೇಶವಿರುವ ಪತ್ರ ಪತ್ತೆಯಾದ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಭದ್ರತಾ ಸಂಸ್ಥೆಗಳು ತಕ್ಷಣವೇ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ. ವಿಮಾನದಲ್ಲಿನ ಶೌಚಾಲಯದ ಸಮೀಪ ಬೆದರಿಕೆ ಸಂದೇಶವಿರುವ ಪತ್ರ ಪತ್ತೆಯಾದ ಬಳಿಕ ಸಿಬ್ಬಂದಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪೈಲಟ್ಗೆ ಮಾಹಿತಿ ನೀಡಿದ್ದಾರೆ. ಪೈಲಟ್ ಕೂಡಲೇ ಏರ್ ಟ್ರಾಫಿಕ್ ಕಂಟ್ರೋಲ್ಗೆ ಮಾಹಿತಿ ರವಾನಿಸಿದ್ದು, ವಿಮಾನ ಬೆಂಗಳೂರಿನಲ್ಲಿ ಇಳಿದ ನಂತರ ಅದನ್ನು ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ದು ಭದ್ರತಾ ತಪಾಸಣೆಗೆ ಒಳಪಡಿಸಲಾಯಿತು.
ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಿದ ಬಳಿಕ ಬಾಂಬ್ ನಿಷ್ಕ್ರಿಯ ದಳ, ಸಿಐಎಸ್ಎಫ್, ಶ್ವಾನದಳ ಮತ್ತು ವಿಮಾನ ನಿಲ್ದಾಣದ ಪೊಲೀಸರು ವಿಮಾನದ ಸಂಪೂರ್ಣ ತಪಾಸಣೆ ನಡೆಸಿದರು. ವಿಮಾನದ ಒಳಭಾಗ, ಆಸನಗಳು, ಲಗೇಜ್ ಸಂಗ್ರಹಣಾ ಸ್ಥಳಗಳು, ಶೌಚಾಲಯ ಸೇರಿದಂತೆ ಸೂಕ್ಷ್ಮ ಪ್ರದೇಶಗಳನ್ನು ಪರಿಶೀಲಿಸಲಾಯಿತು.
ಆದರೆ, ಈ ಹುಸಿ ಬೆದರಿಕೆ ಪತ್ರ ವಿಮಾನದಲ್ಲಿ ಯಾರು ಇಟ್ಟರು ಮತ್ತು ಯಾವ ಹಂತದಲ್ಲಿ ಅದು ವಿಮಾನದೊಳಗೆ ಸೇರಿತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಹಿಂದೆಯೂ ಹಲವು ಬಾರಿ ಹುಸಿ ಬಾಂಬ್ ಬೆದರಿಕೆಗಳು ಬಂದಿವೆ. ಈ ನಿಟ್ಟಿನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
