ಬೆಂಗಳೂರು,ಜೂ.27-ಉದ್ಯಮಿ ವೈಶಾಖ್ ಆತ್ಮಹತ್ಯೆಗೆ ಮಾನಸಿಕ ಒತ್ತಡ ಕಾರಣವೆಂಬುವುದು ಇದುವರೆಗಿನ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ಆಟೋಮೊಬೈಲ್ ಹಾಗೂ ಗ್ಯಾರೇಜ್ ನಡೆಸುತ್ತಿದ್ದ ವೈಶಾಖ್ ಅವರು ಹಣಕಾಸಿನ ತೊಂದರೆ ಜೊತೆಗೆ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು.
ಈಗಾಗಲೇ ವೈಶಾಖ್ ಅವರ ಪತ್ನಿ ಹಾಗೂ ಕುಟುಂಬದವರಿಂದ ಹೇಳಿಕೆಗಳನ್ನು ಪಡೆದುಕೊಂಡಿರುವ ಆರ್ಆರ್ನಗರ ಠಾಣೆ ಪೊಲೀಸರು ನಟಿ ಕೃಷಿ ತಾಪಂಡ ಅವರನ್ನು ಸಹ ವಿಚಾರಣೆ ನಡೆಸಿ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಈ ಎಲ್ಲಾ ಮಾಹಿತಿಗಳನ್ನು ಕೂಲಂಕುಶವಾಗಿ ಪೊಲೀಸರು ಪರಿಶೀಲಿಸಿದಾಗ ನಿಖರವಾಗಿ ಯಾವ ಕಾರಣವೆಂಬುವುದು ಗೊತ್ತಾಗಿಲ್ಲ. ಸದ್ಯದ ತನಿಖೆಯಿಂದ ಮಾನಸಿಕ ಒತ್ತಡದಿಂದ ಆತಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಅಂದು ಕೃಷಿ ತಾಪಂಡ ಅವರು ಕಾರ್ಯನಿಮಿತ್ತ ನೆಲಮಂಗಲಕ್ಕೆ ಹೋಗಿದ್ದಾಗ ಅವರ ಅಪಾರ್ಟ್ಮೆಂಟ್ ಮನೆಯಲ್ಲಿ ಉಳಿದುಕೊಂಡಿದ್ದ ವೈಶಾಖ್ ಅವರು ನನಗೆ ಜೀವನ ಸಾಕಾಗಿದೆ, ಬದುಕಲು ಇಷ್ಟವಿಲ್ಲ ಎಂದು ಮೆಸೇಜ್ ಮಾಡಿದ್ದರು.
ಆ ಮೆಸೇಜ್ ನೋಡಿ ಗಾಬರಿಗೊಂಡ ನಟಿ ತಾಪಂಡ ಅವರು ವೈಶಾಖ್ ಅವರ ಮೊಬೈಲ್ಗೆ ಕರೆ ಮಾಡಿ ಧೈರ್ಯ ಹೇಳಿ, ಸಮಾಧಾನ ಪಡಿಸಿ ಕುಕ್ಕೆ ಸುಬ್ರಹಣ್ಯ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ ಎಂದು ಬುದ್ಧಿ ಮಾತು ಹೇಳಿದ್ದರು ಎಂಬುವುದು ನಟಿಯ ಮೊಬೈಲ್ನಲ್ಲಿರುವ ವಿವರಗಳಿಂದ ಗೊತ್ತಾಗಿದೆ.
ಅಲ್ಲದೇ ವೈಶಾಖ್ ಅವರು ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು.ವೈಶಾಖ್ ಅವರ ಪತ್ನಿ ಯಾರ ಮೇಲೆಯೂ ಅನುಮಾನ ವ್ಯಕ್ತಪಡಿಸಿಲ್ಲ. ಕೌಟುಂಬಿಕ ಹಾಗೂ ಹಣಕಾಸಿನ ವಿಚಾರಕ್ಕೆ ಕುಟುಂಬದವರ ಮೇಲೆ ಅಸಮಾಧಾನಗೊಂಡು ಒಂದು ತಿಂಗಳಿನಿಂದ ಮನೆಗೆ ಬರದೆ ಹೊರಗೆ ಉಳಿದುಕೊಂಡಿದ್ದರು ಎಂದು ಹೇಳಿದ್ದಾರೆ.
ಒಟ್ಟಾರೆ ಈ ಎಲ್ಲಾ ಅಂಶಗಳನ್ನು ಪೊಲೀಸರು ಅವಲೋಕನ ನಡೆಸುತ್ತಿದ್ದು, ತನಿಖೆ ಮುಂದುವರೆಸಿದ್ದಾರೆ.
