ಬೆಂಗಳೂರು, ಜೂ.27- ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಡ್ಡ ಮತದಾನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿ.ಟಿ.ರವಿ ನೇತೃತ್ವದ ಮೂವರು ಸದಸ್ಯರ ಸತ್ಯಶೋಧನಾ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಿದೆ.
ನಾಲ್ಕು ದಿನಗಳ ತೀವ್ರ ತನಿಖೆ :
ಮೈತ್ರಿಕೂಟದ ಅಭ್ಯರ್ಥಿಗಳ ಸೋಲಿಗೆ ಕಾರಣವಾದ ಅಡ್ಡ ಮತದಾನದ ಬಗ್ಗೆ ಸತ್ಯಶೋಧನೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷರು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು.
ಸಿ.ಟಿ.ರವಿ, ಮಹೇಶ್ ಟೆಂಗಿನಕಾಯಿ ಮತ್ತು ಎನ್. ಮಹೇಶ್ ಅವರಿದ್ದ ಈ ಸಮಿತಿಯು ಕಳೆದ ನಾಲ್ಕು ದಿನಗಳಲ್ಲಿ ಅಭ್ಯರ್ಥಿಗಳು, ಜೆಡಿಎಸ್ ಮುಖಂಡರು ಮತ್ತು ಬಿಜೆಪಿ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸ್ಥಳೀಯ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಮೂರು ಪುಟಗಳ ವರದಿಯನ್ನು ಸೀಲ್ಡ್ ಕವರ್ನಲ್ಲಿ ಸಲ್ಲಿಸಿದೆ.
ವರದಿಯ ಪ್ರಮುಖಾಂಶಗಳು :
ಅಡ್ಡ ಮತಗಳ ಸಂಖ್ಯೆ: ಮೈತ್ರಿ ಪಕ್ಷಗಳಿಂದ ಒಟ್ಟು 12 ಮತಗಳು ಅಡ್ಡವಾಗಿ ಚಲಾವಣೆಯಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿ ಪಾಲು :
ಬಿಜೆಪಿಯಿಂದ 3 ಮತಗಳು ಅಡ್ಡವಾಗಿ ಚಲಾವಣೆಯಾಗಿದ್ದು, 1 ಮತ ಅಸಿಂಧುವಾಗಿದೆ. ಉಳಿದ ಅಡ್ಡ ಮತಗಳು ಜೆಡಿಎಸ್ನಿಂದ ಚಲಾವಣೆಯಾಗಿವೆ.
ಗೌಪ್ಯತೆ :
ವರದಿಯಲ್ಲಿ ಅಡ್ಡ ಮತ ಚಲಾಯಿಸಿದ ಶಾಸಕರ ಹೆಸರುಗಳನ್ನು ನೇರವಾಗಿ ಉಲ್ಲೇಖಿಸಿಲ್ಲವಾದರೂ, ಅನುಮಾನಾಸ್ಪದವಾಗಿ ಕಂಡುಬಂದ ಶಾಸಕರ ಪಟ್ಟಿಯನ್ನು ಸಮಿತಿ ಸಿದ್ಧಪಡಿಸಿದೆ.
ಶಿಫಾರಸು :
ಸದ್ಯಕ್ಕೆ ಅನುಮಾನದ ಪಟ್ಟಿಯಲ್ಲಿರುವ ಶಾಸಕರ ಮೇಲೆ ಪಕ್ಷವು ತೀವ್ರ ನಿಗಾ ಇಡುವಂತೆ ಸಮಿತಿ ಶಿಫಾರಸು ಮಾಡಿದೆ.
ಇದು ಅನೈತಿಕ ಕ್ರಾಸ್ ವೋಟಿಂಗ್ :
ವರದಿ ಸಲ್ಲಿಕೆ ಬಳಿಕ ಮಾತನಾಡಿದ ಸಿ.ಟಿ.ರವಿ, ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಈ ಅಡ್ಡ ಮತಗಳು ಕಾಂಗ್ರೆಸ್ನ ಅಭಿವೃದ್ಧಿ ಅಥವಾ ಸಿದ್ಧಾಂತಕ್ಕೆ ಬಿದ್ದಿರುವ ಮತಗಳಲ್ಲ, ಬದಲಾಗಿ ಇವೆಲ್ಲವೂ ಅನೈತಿಕವಾಗಿ ಚಲಾವಣೆಯಾದ ಮತಗಳು. ಕಾಂಗ್ರೆಸ್ನವರು ಇದನ್ನು ತಮ ಅಭಿಮಾನಕ್ಕೆ ಬಿದ್ದ ಮತ ಎಂದು ಭಾವಿಸಬಾರದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಮುಂದಿನ ತೀರ್ಮಾನ ಹೈಕಮಾಂಡ್ ಕೈಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಮಾತನಾಡಿ, ಸಮಿತಿಯು ಆಂತರಿಕವಾಗಿ ತನಿಖೆ ನಡೆಸಿ ವರದಿ ಸಲ್ಲಿಸಿದೆ.
ಈ ವರದಿಯನ್ನು ಪಕ್ಷದ ಹೈಕಮಾಂಡ್ಗೆ ಸಲ್ಲಿಸುವ ಕೆಲಸವನ್ನು ರಾಜ್ಯಾಧ್ಯಕ್ಷರು ಮಾಡಲಿದ್ದಾರೆ. ಅಡ್ಡ ಮತಗಳ ಸಂಖ್ಯೆ ಎಷ್ಟು ಎಂಬ ಬಗ್ಗೆ ವೈಯಕ್ತಿಕ ಊಹೆಗಳಿಗೆ ಹೋಗುವುದು ಬೇಡ. ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾದ ನಂತರ ಮುಂದಿನ ಕ್ರಮಗಳ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ, ಎಂದು ತಿಳಿಸಿದರು.
ಒಟ್ಟಾರೆಯಾಗಿ ಅಡ್ಡ ಮತದಾನದ ಬಿಸಿ ತಣಿಯುವ ಮುನ್ನವೇ ಬಿಜೆಪಿ ಹೈಕಮಾಂಡ್ ಮಟ್ಟಕ್ಕೆ ಈ ಪ್ರಕರಣ ಹೋಗುತ್ತಿದ್ದು, ಮುಂಬರುವ ದಿನಗಳಲ್ಲಿ ಪಕ್ಷವು ಯಾವ ರೀತಿಯ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
