ಬಾಗಲಕೋಟೆ,ಮಾ.22- ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 32.50 ಲಕ್ಷ ರೂ. ಹಣವನ್ನು ಜಿಲ್ಲೆಯ ಹೊನ್ನಾಕಟ್ಟಿ ಚೆಕ್ಪೋಸ್ಟ್ನಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಹಣ ಸಾಗಾಟ ಹಾಗೂ ಆಮಿಷಗಳನ್ನು ನಿಯಂತ್ರಿಸಲು ಎರಡೂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವ್ಯಾಪಕ ತಪಾಸಣೆ ಹಾಗೂ ಕಟ್ಟೆಚ್ಚರ ವಹಿಸಲಾಗಿದೆ.
ರಾಯಚೂರಿನ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎನ್ನಲಾದ 32.50 ಲಕ್ಷ ರೂ.ಗಳನ್ನು ರಾಯಚೂರಿನಿಂದ ಬೆಳಗಾವಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಚೆಕ್ಪೋಸ್ಟ್ನಲ್ಲಿ ಕಾರು ತಪಾಸಣೆ ಮಾಡುವ ವೇಳೆ ಹಣ ಪತ್ತೆಯಾಗಿದೆ. ಈ ನಗದಿಗೆ ಯಾವುದೇ ದಾಖಲೆಗಳಿಲ್ಲದಿರುವುದು ಕಂಡುಬಂದಿದ್ದು, ಕೂಡಲೇ ಹಣವನ್ನು ವಶಕ್ಕೆ ಪಡೆದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
