Wednesday, April 22, 2026
Homeರಾಜ್ಯಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ : ಸಾಫ್ಟ್ ವೇರ್‌ ಎಂಜಿನಿಯರ್‌ ಆತ್ಮಹತ್ಯೆ

ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ : ಸಾಫ್ಟ್ ವೇರ್‌ ಎಂಜಿನಿಯರ್‌ ಆತ್ಮಹತ್ಯೆ

Dowry harassment by husband's family: Software engineer commits suicide

ಬೆಂಗಳೂರು,ಏ.22-ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಮನನೊಂದ ಸಾಫ್ಟ್ ವೇರ್‌ ಎಂಜಿನಿಯರ್‌ ಆತಹತ್ಯೆ ಮಾಡಿಕೊಂಡಿರುವ ಘಟನೆ ತಲಘಟ್ಟಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೂಲತಃ ತಮಿಳುನಾಡಿನ ತಿರುವಾರೂರ್‌ ಜಿಲ್ಲೆಯ ನೀಡಮಂಗಳಂ ನಿವಾಸಿಯಾಗಿರುವ ಭುವನೇಶ್ವರಿ (29), ಆತಹತ್ಯೆಗೆ ಶರಣಾದ ಟೆಕ್ಕಿ. ಘಟನೆ ಸಂಬಂಧ ಪತಿ ಹರೀಶ್‌ ಕುಮಾರ್‌, ಅತ್ತೆ ಕಾರ್ತಿಗೈವಲ್ಲಿ, ಮೈದುನ ರಾಕೇಶ್‌ ಕುಮಾರ್‌ ವಿರುದ್ಧ ದೂರು ದಾಖಲಾಗಿದೆ.

ಘಟನೆ ವಿವರ: ತಮಿಳುನಾಡು ಮೂಲದವರೇ ಆದ ಸಾಫ್ಟ್ ವೇರ್‌ ಎಂಜಿನಿಯರ್‌ ಹರೀಶ್‌ ಕುಮಾರ್‌ ಎಂಬಾತನನ್ನು ಭುವನೇಶ್ವರಿ ಪ್ರೀತಿಸಿದ್ದು, ಎರಡು ಕುಟುಂಬದವರ ಪರಸ್ಪರ ಒಪ್ಪಿಗೆ ಪಡೆದು ಇವರಿಬ್ಬರು ಮದುವೆಯಾಗಿದ್ದರು.

ಮದುವೆ ಸಮಯದಲ್ಲಿ 60 ಸವರನ್‌ ಚಿನ್ನಾಭರಣಗಳು, 3 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಕೊಟ್ಟಿದ್ದಲ್ಲದೇ ಸುಮಾರು 25 ಲಕ್ಷ ರೂ. ಖರ್ಚು ಮಾಡಿ ಭುವನೇಶ್ವರಿ ಕುಟುಂಬದವರು ನಾಲ್ಕು ವರ್ಷದ ಹಿಂದೆ ಮದುವೆ ಮಾಡಿದ್ದರು.ದಂಪತಿ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿದ್ದು, ಜೆಪಿನಗರ 8ನೇ ಹಂತದ ರಾಯಲ್‌ ಲೇಕ್‌ ಫುಂಟ್‌, ಹೆಚ್‌ಎಂ ವರ್ಲ್ಡ್ ಸಿಟಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿದ್ದರು. ದಂಪತಿಗೆ ಒಂದೂ ವರೆ ವರ್ಷದ ಮಗು ವಿದೆ.

ಈ ಪುಟ್ಟ ಕುಟುಂಬ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿತ್ತು.ಆದರೆ ದಿನ ಕಳೆದಂತೆ ಭುವನೇಶ್ವರಿಗೆ ಗಂಡ ಹಾಗೂ ಆತನ ಮನೆಯವರು ಹಣ ಕೊಡುವಂತೆ ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಾ ಬಂದಿದ್ದಾರೆ.ಈ ಕುಟುಂಬದಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ತದ ನಂತರದಲ್ಲಿ ಪತಿ ಹರೀಶ್‌ಕುಮಾರ್‌ ತನ್ನ ಮನೆಗೆ ಹಿಂದಿರುಗದೇ ತಮಿಳುನಾಡಿನಲ್ಲಿ ನೆಲೆಸಿದ್ದಾನೆ.

ಇತ್ತ ಭುವನೇಶ್ವರಿ ತನ್ನ ತಾಯಿ ಹಾಗೂ ಮಗುವಿನ ಜೊತೆ ವಾಸವಾಗಿದ್ದಳು. ಪತಿಯ ಮೊಬೈಲ್‌ಗೆ ಕರೆ ಮಾಡಿ ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಈ ನಡುವೆ ವಿಚ್ಚೇದನ ನೀಡುವಂತೆ ಪತಿ ಒತ್ತಾಯಿಸಿದ್ದಾನೆ. ಮಗುವಿಗೆ ಅನಾರೋಗ್ಯವಾದರೂ ಬಂದು ನೋಡಿಲ್ಲ. ಇದರಿಂದಾಗಿ ಭುವನೇಶ್ವರಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

ಮೊನ್ನೆ ಮಧ್ಯಾಹ್ನ ತನ್ನ ರೂಮ್‌ಗೆ ಹೋಗಿ ಫ್ಯಾನಿಗೆ ಸೀರೆಯಿಂದ ನೇಣು ಹಾಕಿಕೊಂಡು ಭುವನೇಶ್ವರಿ ಆತಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದು ತಾಯಿಯ ಗಮನಕ್ಕೆ ಬಂದಿಲ್ಲ. ಸ್ನೇಹಿತೆಯೊಬ್ಬರು ಭುವನೇ ಶ್ವರಿಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಗಾಬರಿಯಾಗಿ ಆಕೆಯ ತಾಯಿಗೆ ಕರೆ ಮಾಡಿದ್ದಾರೆ.

ತಾಯಿ ತಕ್ಷಣ ರೂಮ್‌ ಬಳಿ ಹೋಗಿ ನೋಡಿದಾಗ ಬಾಗಿಲು ಹಾಕಿಕೊಂಡಿರುವುದು ಗಮನಿಸಿ ಬಾಗಿಲು ತಟ್ಟಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಗಾಬರಿಯಾಗಿ ಅಕ್ಕಪಕ್ಕದವರನ್ನು ಸಹಾಯಕ್ಕೆ ಕರೆದಿದ್ದಾರೆ.ನೆರೆಹೊರೆಯವರು ಬಂದು ಬಾಗಿಲು ಹೊಡೆದು ನೋಡಿದಾಗ ಭುವನೇಶ್ವರಿ ಆತಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಭುವನೇಶ್ವರಿ ಅವರ ತಾಯಿ ತಮಿಳುನಾಡಿನಲ್ಲಿರುವ ತನ್ನ ಗಂಡನಿಗೆೆ ವಿಷಯ ತಿಳಿಸಿದ್ದಾರೆ. ಅವರು ನಗರಕ್ಕೆ ಬಂದಿದ್ದು ಪೊಲೀಸರಿಗೆ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ. ಈ ಸಂಬಂಧ ತಲಘಟ್ಟಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News