ಮೈಸೂರು, ಆ. 1- ಬರದ ನಡುವೆ ಕಾವೇರಿ ಕೊಳ್ಳದ ಜನರಿಗೆ,ರೈತರಿಗೆ ಮಳೆ ಸಂತಸ ತಂದಿದೆ. ಕೇರಳ ವಯನಾಡು ಹಾಗೂ ಹೆಚ್ಡಿಕೋಟೆ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ.ಹೆಚ್ಡಿ ಕೋಟೆಯ ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ.
ಅಂಕಿ-ಅಂಶಗಳ ಪ್ರಕಾರ ಜಲಾಶಯದ ನೀರಿನ ಮಟ್ಟ 2280.08 ಅಡಿಗೆ ತಲುಪಿದೆ. ಗರಿಷ್ಠ ಮಟ್ಟ 2284.00 ಅಡಿಗಳು.ಜಲಾಶಯದ ಗರಿಷ್ಠ ಸಾಮರ್ಥ್ಯ 19.52 ಟಿಎಂಸಿ ಇದ್ದು, ಇಂದಿನ ಸಂಗ್ರಹ 17.09 ಟಿಎಂಸಿ ಇದೆ. ಲೈವ್ ಸಂಗ್ರಹ 7.28 ಟಿಎಂಸಿ ದಾಖಲಾಗಿದೆ.
ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ ಈ ಬಾರಿ ಮಟ್ಟ ಮತ್ತು ಸಂಗ್ರಹ ಸ್ವಲ್ಪ ಕಡಿಮೆಯಿದೆ. ಕಳೆದ ವರ್ಷ ನೀರಿನ ಮಟ್ಟ 2281.51 ಅಡಿ, ಸಂಗ್ರಹ 17.94 ಟಿಎಂಸಿ ಮತ್ತು ಲೈವ್ ಸಂಗ್ರಹ 8.13 ಟಿಎಂಸಿ ಇತ್ತು.
ಒಳ-ಹೊರಹರಿವು ವಿವರ: ಜಲಾಶಯಕ್ಕೆ ಇಂದು 11,747 ಕ್ಯೂಸೆಕ್ ನೀರು ಒಳಹರಿವು ಆಗುತ್ತಿದೆ. ಕಳೆದ ವರ್ಷ 8,963 ಕ್ಯೂಸೆಕ್ ಇತ್ತು. ನದಿಗೆ 500 ಕ್ಯೂಸೆಕ್ ನೀರು ಮಾತ್ರ ಹೊರಬಿಡಲಾಗುತ್ತಿದೆ. ಕಳೆದ ವರ್ಷ 8,500 ಕ್ಯೂಸೆಕ್ ಹೊರಬಿಡಲಾಗಿತ್ತು.
ಎಲ್ಬಿಸಿ, ಆರ್ಬಿಸಿ ಕಾಲುವೆಗಳು ಮತ್ತು ಲಿಫ್ಟ್ ಗಳಿಗೆ ನೀರನ್ನು ಹರಿಸಲಾಗುತ್ತಿಲ್ಲ. ಒಟ್ಟು ಹೊರಹರಿವು 500 ಕ್ಯೂಸೆಕ್ ಆಗಿದೆ.ಜಲಾಶಯ ಸಂಪೂರ್ಣ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಕಾವೇರಿ ಕೊಳ್ಳದ ಜನರಲ್ಲಿ ಮಂದಹಾಸ ಮೂಡಿದೆ.
