ಮಂಡ್ಯ,ಮೇ 16- ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಕನ್ನಡ ಪರ ಹೋರಾಟಗಾರರೊಬ್ಬರನ್ನು ಅವಮಾನಿಸಿದ್ದು, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕನ್ನಡ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಬಿಜೆಪಿ ಕಾರ್ಯಕರ್ತರ ವಿರುದ್ದ ಆಕ್ರೋಶ ಹೊರ ಹಾಕಿದರು.ಹಿರಿಯ ಕನ್ನಡದ ಹೋರಾಟಗಾರ ವಾಟಾಳ್ ಪಕ್ಷದ ವಾಟಾಳ್ ನಾಗರಾಜು ಅವರನ್ನು ಅಯೋಗ್ಯ ಎನ್ನುವ ಮೂಲಕ ಬಿಜೆಪಿ ಕಾರ್ಯಕರ್ತರು ಸಣ್ಣತನ ತೋರ್ಪಡಿಸಿದ್ದಾರೆ. ಅವರ ಭಾವಚಿತ್ರವನ್ನು ಚಪ್ಪಲಿಯಿಂದ ತುಳಿದು ಅವಮಾನಿಸಿರುವ ಬಿಜೆಪಿ ಕಾರ್ಯಕರ್ತರು ಈ ನಾಡಿನ ಕನ್ನಡ ಹೋರಾಟಗಾರರಿಗೆ ಅಪಮಾನ ಮಾಡಿದ್ದಾರೆಂದು ಆಕ್ರೋಶ ಹೊರ ಹಾಕಿದರು.
ಈ ನಾಡಿನ ಉದ್ದಗಲಕ್ಕೂ ಅಖಂಡ ಕರ್ನಾಟಕ ಒಗ್ಗೂಡಿಸಲು ಬಿಡುವಿಲ್ಲದ ಸಂದರ್ಭದಲ್ಲೂ ವಿನೂತನ, ವಿಶಿಷ್ಟ ಹೋರಾಟಗಳ ಸದನಗಳಲ್ಲೂ ಹೋರಾಟ ಮಾಡಿ ನಾಡಿನ ಅಶಿತೆಗಾಗಿ ಕಳೆದ 70ಕ್ಕೂ ಹೆಚ್ಚು ವರ್ಷಗಳಿಂದ ಹೋರಾಟವನ್ನು ಮೈಗೂಡಿಸಿಕೊಂಡು ಬಂದಿರುವ ಕನ್ನಡ ನಾಡಿನ ಹೋರಾಟಗಾರರಿಗೆ ಮಾಣಿಕ್ಯ ವಾಟಾಳ್ನಾಗರಾಜ್ರವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿರುವುದನ್ನು ಖಂಡಿಸುತ್ತೇವೆ ಎಂದರು.
ತಕ್ಷಣ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು, ಬಂಧನ ಮಾಡದಿದ್ದರೆ ತೀವ್ರ ರೂಪದ ಹೋರಾಟಗಳನ್ನು ರೂಪಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್, ಕುಮಾರ, ಜಯಮ ಹಾಗೂ ಪಾಂಡುರಂಗ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
