ಬೆಂಗಳೂರು, ಏ.27- ಬಿಬಿಎಂಪಿ ರದ್ದು ಮಾಡಿ ರಚನೆ ಮಾಡಲಾಗಿರುವ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಹಣದ ಕೊರತೆ ಇದೆ ಎಂಬ ಚುನಾವಣಾ ಆಯೋಗದ ಹೇಳಿಕೆ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ ಎಂದು ಬಿಜೆಪಿ ಮುಖಂಡ ಸತೀಶ್ ಉರಾಳ್ ಲೇವಡಿ ಮಾಡಿದ್ದಾರೆ.
ಬಿಬಿಎಂಪಿಯಿಂದ ಜಿಬಿಎ ಪಂಚ ಪಾಲಿಕೆಗಳು ಆಗಿವೆ. ಸ್ಥಳೀಯ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡು 5ವರ್ಷ 7ತಿಂಗಳಾಯಿತು.ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಬೆಂಗಳೂರು ನಗರದ ಅಭಿವೃದ್ದಿಯ ವೇಗ ಕುಂಠಿತವಾಗಿದೆ.
ಕಾನೂನಿನ ಆನ್ವಯ ಆರು ತಿಂಗಳು ಮಾತ್ರ ಆಡಳಿತಾಧಿಕಾರಿ ಅಧಿಕಾರ ಮಾಡಬಹುದು ಅದರೆ ಆರು ವರ್ಷವಾಗುತ್ತ ಬಂತು ಚುನಾವಣೆ ಎಂಬುದು ನೆನಗುದಿಗೆ ಬಿದ್ದಿದೆ.ಸುಪ್ರಿಂಕೋರ್ಟ್ ಆದೇಶ ನೀಡಿದೆ ಮತ್ತು ಪದೇ, ಪದೇ ಕೋರ್ಟ್ ಬರಬೇಡಿ ಎಂದು ಎಚ್ಚರಿಕೆ ನೀಡಿದೆ.
ಈಗ ನೋಡಿದರೆ ಆರ್ಥಿಕ ಸೌಲಭ್ಯವಿಲ್ಲ, ಸಿಬ್ಬಂದಿಗಳು ಇಲ್ಲ ಗಣತಿ ಕಾರ್ಯ ನಡೆಯುತ್ತಿದೆ ಎಂದು ಆಫಿಡೆವಿಟ್ ಹಾಕಿದ್ದಾರೆ.ಬೆಂಗಳೂರು ನಗರ ಅತಿ ಹೆಚ್ಚು ಅದಾಯ ತರುವ ನಗರವಾಗಿದೆ. ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿಗಳು ಉಸ್ತುವಾರಿ ಹೊಣೆ ಹೊತ್ತಿದ್ದಾರೆ.ಜಿಬಿಎಯಲ್ಲಿ ಆರ್ಥಿಕ ಸಬಲರಾಗಿದ್ದೇವೆ ಎಂದು ಜಂಭ ಕೊಚ್ಚಿಕೊಳ್ಳುತ್ತಾರೆ. ಈಗ ನೋಡಿದರೆ ಚುನಾವಣೆ ನಡೆಸಲು ನಮ್ಮ ಬಳಿ ಹಣವಿಲ್ಲ ಎಂದು ಸಬೂಬು ನೀಡುತ್ತಿದ್ದಾರೆ.
ಬೆಂಗಳೂರು ನಗರದ ನಾಗರಿಕರು ಇದು ಒಂದು ಹಾಸ್ಯಸ್ಪದ ಸಂಗತಿ ಎಂದು ಜಿಬಿಎ ಮತ್ತು ಚುನಾವಣೆ ಆಯೋಗ ವಿರುದ್ದ ಕಿಡಿಕಾರುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಇರಬೇಕು ಅದರೆ ಚುನಾವಣೆ ನಡೆಸದೇ ರಾಜ್ಯ ಸರ್ಕಾರದ ಜೊತೆಯಲ್ಲಿ ಚುನಾವಣೆ ಆಯೋಗ ಕಣ್ಣ ಮುಚ್ಚಾಲೆ ಆಟವಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
