ಬೆಂಗಳೂರು, ಮೇ 12- ಪ್ರಧಾನಿ ಸಾಗುವ ಮಾರ್ಗದಲ್ಲಿ ಜಿಲೆಟಿನ್ ಪತ್ತೆಯಾದ ಪ್ರಕರಣವನ್ನು ಸ್ಥಳೀಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ, ರಾಷ್ಟ್ರೀಯ ತನಿಖಾ ದಳ ಮಧ್ಯ ಪ್ರವೇಶಿಸುವ ಸಾಧ್ಯತೆ ಇದ್ದು, ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಿಲೆಟಿನ್ ನೊಂದಿಗೆ ಟೈಮರ್ ಸಿಕ್ಕಿದೆ ಎಂಬ ಕುರಿತು ನಾನು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.ಒಬ್ಬ ವ್ಯಕ್ತಿ ಕರೆ ಮಾಡಿ, ಆರ್ಟ್ ಆಫ್ ಲಿವಿಂಗ್ ಜಾಗದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ದಾರಿಯ ನಡುವೆ ಜಿಲೆಟಿನ್ ಸಿಕ್ಕಿದೆ. ಅದರ ಜೊತೆಗೆ ಏನೆಲ್ಲಾ ಸಿಕ್ಕಿದೆ ಆ ಕುರಿತು ವಿಚಾರಣೆ ನಡೆಯುತ್ತಿದೆ ಎಂದರು.
ಪ್ರಧಾನಿ ಕಾರ್ಯಕ್ರಮ ಎಂದರೆ ರಾಷ್ಟ್ರೀಯ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಹೊಣೆಗಾರಿಕೆಯನ್ನು ನಿಭಾಯಿಸಿ, ಉನ್ನತ ಮಟ್ಟದ ಭದ್ರತೆ ಒದಗಿಸುತ್ತವೆ. ಪ್ರಧಾನಿಯವರು ಬೆಂಗಳೂರಿನ ಕಾರ್ಯಕ್ರಮಕ್ಕೆ ಆಗಮಿಸುವ ಎರಡು ಗಂಟೆ ಮೊದಲೇ ಜಿಲೆಟಿನ್ ಪತ್ತೆ ಹಚ್ಚಲಾಗಿದೆ. ಇದು ಶ್ಲಾಘನಾರ್ಹ ಎಂದರು.
ಈ ಪ್ರಕರಣಕ್ಕೂ ಭಯೋತ್ಪಾದನಾ ಕೃತ್ಯಕ್ಕೂ ಸಂಬಂಧ ಇದೆಯೋ ಇಲ್ಲವೋ ಎಂಬುದನ್ನು ತನಿಖೆಯ ನಂತರವೇ ಹೇಳಲು ಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಗೃಹ ಸಚಿವರು ಪ್ರತಿಕ್ರಿಯಿಸಿದರು.
ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಕಾಲದಲ್ಲಿ ಆರಂಭಿಸಿದ್ದ ಮಹಾತಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದುರುದ್ದೇಶ ಪೂರ್ವಕವಾಗಿ ರದ್ದು ಮಾಡಿದೆ. ಜನಸಮುದಾಯ ಉದ್ಯೋಗ ಮಾಡಿದರೆ ಆಸ್ತಿಗಳು ಸೃಷ್ಟಿಯಾಗುತ್ತವೆ ಮತ್ತು ಜನರಿಗೂ ಉದ್ಯೋಗ ಸಿಗುತ್ತದೆ ಎಂಬ ಪರಿಕಲ್ಪನೆಯಲ್ಲಿ ನರೇಗಾವನ್ನು ರೂಪಿಸಲಾಗಿತ್ತು. ಈವರೆಗೂ ಎಲ್ಲಾ ಸರ್ಕಾರಗಳು ಅದನ್ನು ಬೆಂಬಲಿಸಿದ್ದವು ಎಂದರು.
ಯೋಜನೆಯಲ್ಲಿ ವ್ಯಾಪಕವಾಗಿ ಭ್ರಷ್ಟಚಾರ ನಡೆಯುತ್ತಿದೆ ಮತ್ತು ಕೆಲವು ರಾಜ್ಯಗಳಲ್ಲಿ ಯೋಜನೆ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ಆಕ್ಷೇಪಿಸಿ ಕೇಂದ್ರ ಸರ್ಕಾರ ನರೇಗಾವನ್ನು ರದ್ದು ಮಾಡಿದೆ. ಭ್ರಷ್ಟಚಾರ ನಡೆದಿದ್ದರೆ ಅದನ್ನು ಆಡಳಿತಾತಕವಾಗಿ ಸರಿ ಪಡಿಸಲು ಅವಕಾಶ ಇತ್ತು. ಭ್ರಷ್ಟಾಚಾರ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದಿತ್ತು. ಲೋಪಗಳನ್ನು ಆಡಳಿತಾತಕವಾಗಿ ಸರಿ ಪಡಿಸಬೇಕೆ ಹೊರತು, ಬಹುನಿರೀಕ್ಷೆಯ ಯೋಜನೆಯನ್ನು ಒಟ್ಟಾರೆಯಾಗಿ ರದ್ದು ಮಾಡುವುದು ಸರಿಯಲ್ಲ ಎಂದರು.
ಕೇಂದ್ರ ಸರ್ಕಾರದ ಮಹತ್ವವಾದ ರಾಷ್ಟ್ರೀಯ ಕಾರ್ಯಕ್ರಮವನ್ನು ಯಾವ ದುರುದ್ದೇಶದಿಂದ ನಿಲ್ಲಿಸಿದ್ದಾರೋ ಗೊತ್ತಿಲ್ಲ. ಕೇಂದ್ರ ಸರ್ಕಾರ ಏನೇ ನಿರ್ಧಾರ ಮಾಡಲಿ, ರಾಜ್ಯ ಸರ್ಕಾರವಂತೂ ಯೋಜನೆಯನ್ನು ಮುಂದುವರೆಸಲು ಚರ್ಚಿಸಲಾಗಿದೆ. ಈ ಬಗ್ಗೆ ಶೀಘ್ರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಮಾಡಿದಾಗ ಜೀವರಾಜ್ ಅವರ ಪರವಾಗಿ 250 ಮತಗಳು ಹೆಚ್ಚು ಬರುತ್ತವೆ ಎಂದರೆ ಏನರ್ಥ. ಅಂದರೆ ಮಾಜಿ ಅಥವಾ ಹಾಲಿ ಶಾಸಕರ ಪರವಾಗಿ ಮತಗಳಲ್ಲಿ ತಪ್ಪುಗಳಾಗಿವೆ ಎಂಬ ಭಾವನೆ ದೃಢವಾಗುತ್ತದೆ. ತಪ್ಪು ಮಾಡಿದ ಅಧಿಕಾರಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಲ್ಲವೇ ಎಂದು ಪ್ರಶ್ನಿಸಿದರು.
ಅಂಚೆ ಮತ್ರಗಳನ್ನು ತಿದ್ದಿರುವ ಬಗ್ಗೆ ಈಗಾಗಲೇ ದೂರು ದಾಖಲಾಗಿದೆ. ರಾಜ್ಯ ಪೊಲೀಸರು ತಮದೆ ಆದ ರೀತಿಯಲ್ಲಿ ತನಿಖೆ ನಡೆಸಲಿದ್ದಾರೆ. ಎಫ್ಎಸ್ಎಲ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಟಿ.ಡಿ.ರಾಜೇಗೌಡ ಸುಪ್ರೀಂಕೋರ್ಟ್ನಲ್ಲಿ ಮೇಲನವಿ ಸಲ್ಲಿಸಿದಾಗ, ಮೊದಲ ಬಾರಿ ನಡೆದ ಮತ ಎಣಿಕೆಯೇ ಸರಿ ಇದೆ ಎಂದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ಅದಕ್ಕಾಗಿ ತಡೆಯಾಜ್ಞೆ ನೀಡಿದೆ ಎಂದು ಹೇಳಿದರು.
ಜಿಬಿಎಗೆ ಚುನಾವಣೆ ನಡೆಸಲು ಕಾಲಾವಕಾಶ ಕೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕ್ರಿಯೆಯಲ್ಲಿ ಲೋಪಗಳಾದಾಗ ಸರಿ ಪಡಿಸಬೇಕಲ್ಲವೇ ? ಈಗ ಜನಗಣತಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಚುನಾವಣಾ ಕಾರ್ಯಕ್ಕೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕ್ರೋಢಿಕರಿಸುವುದು ಕಷ್ಟ. ಅದರ ಹೊರತಾಗಿ ಚುನಾವಣೆ ನಡೆಸುವುದು ನಮ ಧರ್ಮ ಮಾಡಲೇಬೇಕಿದೆ ಎಂದರು.
ಚುನಾವಣೆ ನಡೆದರೆ ಕಾಂಗ್ರೆಸ್ ಗೆ ಹಿನ್ನೆಡೆಯಾಗಲಿದೆ. ಅದಕ್ಕಾಗಿ ಚುನಾವಣೆ ಮುಂದೂಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿರುವುದು ಹಾಸ್ಯಾಸ್ಪದ. ಇದು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದಂತೆ. ಚುನಾವಣೆ ನಡೆಯುವ ಮುನ್ನವೇ ಫಲಿತಾಂಶವನ್ನು ಇವರೇ ಹೇಳಿಕೊಂಡು ತಿರುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಬಳಕೆ ಮಾಡುವಂತೆ ಕರೆ ನೀಡುತ್ತಿದ್ದಾರೆ. ಆದರೆ ಅದಕ್ಕೆ ಅಗತ್ಯವಾದ ಮೂಲ ಸೌಲಭ್ಯಗಳು ಸೃಷ್ಟಿಯಾಗಬೇಕಿದೆ.
ಬೆಂಗಳೂರಿಗೆ ಪ್ರತಿ ದಿನ ತುಮಕೂರಿನಿಂದ ಬೆಂಗಳೂರಿಗೆ ಒಂದು ಲಕ್ಷ ಜನ ಬರುತ್ತಾರೆ. ಮೇಟ್ರೋ ರೈಲು ಸಂಪರ್ಕ ಕಲ್ಪಿಸಿದರೆ ಅಷ್ಟು ಜನ ತುಮಕೂರಿನಲ್ಲೇ ಮನೆ ಮಾಡಿಕೊಂಡು ನೆಲಸುತ್ತಾರೆ. ಪ್ರತಿದಿನ ಪ್ರಯಾಣ ಸುಲಭವಾಗುತ್ತದೆ. ಇದರಿಂದ ಬೆಂಗಳೂರಿನ ಮೇಲೆ ಒತ್ತಡ ಕಡಿಮೆಯಾಗುತ್ತದೆ ಎಂದರು.
ತುಮಕೂರಿಗೆ ಮೇಟ್ರೋ ರೈಲು ಸಂಪರ್ಕ ಕಲ್ಪಿಸಲು ಇನ್ನೂ ಒಂದು ವಾರದಲ್ಲಿ ವಿಸ್ತೃತ ಯೋಜನಾ ವರದಿ ತಯಾರಾಗಲಿದೆ. ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುತ್ತದೆ. ಮೇಟ್ರೋ ಪ್ರಯಾಣ ದರ ಜನ ಸಾಮಾನ್ಯರ ಕೈಗೆಟಕುವ ರೀತಿಯಲ್ಲಿ ಇರಬೇಕು ಎಂಬುದು ಎಲ್ಲರ ಅಭಿಪ್ರಾಯ ಎಂದರು.
