ಬೆಂಗಳೂರು,ಜೂ.27- ನಗರದ ಕುರುಬರಹಳ್ಳಿಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಫ್ಯಾಕ್ಟರಿಯೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ದಾಖಲೆ ಇಲ್ಲದ 2.98 ಕೋಟಿ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ.ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಜೆಸಿ ನಗರದ ಕುರುಬರ ಹಳ್ಳಿಯಲ್ಲಿರುವ ಶೇಷಾದ್ರಿ ಇಂಡಸ್ಟ್ರೀ ಫ್ಯಾಕ್ಟರಿಯ ಶೆಡ್ನಲ್ಲಿ ಕೋಟಿ ಕೋಟಿ ಹಣ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಈ ಖಚಿತ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ನಾಲ್ಕು ದೊಡ್ಡ ಬ್ಯಾಗ್ಗಳಲ್ಲಿ ಕಂತೆ ಕಂತೆಯಾಗಿ ಹಣ ಜೋಡಿಸಿಟ್ಟಿರುವುದು ಕಂಡು ಬಂದಿದೆ.ಆ ಬ್ಯಾಗ್ಗಳಲ್ಲಿ ಒಟ್ಟು 2 ಕೋಟಿ 98 ಲಕ್ಷ ಹಣ ಇರುವುದು ಪತ್ತೆಯಾಗಿದ್ದು, ಈ ಹಣಕ್ಕೆ ಯಾವುದೇ ದಾಖಲೆಯನ್ನು ಒದಗಿಸದ ಕಾರಣ ಹಣದ ಮೂಲದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಆ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಈ ಸಂಬಂಧ ಈ ಕಾರ್ಖಾನೆಯಲ್ಲಿದ್ದ ನಾಗರಾಜ ಹಾಗೂ ವೆಂಕಟೇಶ್ ಎಂಬುವವರನ್ನು ವಶಕ್ಕೆ ಪಡೆದು ಹಣದ ಮೂಲದ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಸರಿಯಾದ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿಲ್ಲ. ಹಾಗಾಗಿ ಹಣವನ್ನು ವಶಕ್ಕೆ ಪಡೆಯಲಾಗಿದೆ.
ವಿಚಾರಣೆ ಸಂದರ್ಭದಲ್ಲಿ ಜಮೀನು ಖರೀದಿಗಾಗಿ ಹಣ ತಂದಿಟ್ಟಿರುವುದಾಗಿ ಹೇಳಿದ್ದಾರೆ. ಈ ಹಣದ ಮೂಲ ಯಾವುದು, ಯಾರಿಗೆ ಸೇರಿದ್ದು, ಯಾರು ತಂದುಕೊಟ್ಟರು, ಇಷ್ಟೊಂದು ಭಾರಿ ಮೊತ್ತದ ಹಣವನ್ನು ಯಾರಿಗೆ ತಲುಪಿಸಬೇಕಿತ್ತು, ಯಾವ ಉದ್ದೇಶಕ್ಕಾಗಿ ತಂದಿಡಲಾಗಿತ್ತು, ಎಂಬಿತ್ಯಾದಿ ವಿವರಗಳಿಗಾಗಿ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
