ಮಳವಳ್ಳಿ,ಜು.9- ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಅಪಘಾತವಾಗಿದ್ದು, ಕಾರಿನಲ್ಲಿ ಸಿಂಗಲ್ ಬ್ಯಾರೆಲ್ ಗನ್ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡವು ಮಾಡಿಕೊಟ್ಟಿದೆ.
ಮಳವಳ್ಳಿ ತಾಲ್ಲೂಕಿನ ಹಾಡ್ಲಿಯಿಂದ ಕಂಸಾಗರ ಕಡೆಗೆ ಹೊರಟಿದ್ದ ಕಾರೊಂದು ಕಂಸಾಗರ ಗ್ರಾಮದ ಬಳಿ ಅತಿ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದಿದೆ.ಅಪಘಾತವಾದ ಕೂಡಲೇ ಕಾರನ್ನು ಅಲ್ಲಿಯೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಗನ್ ವಶ, ಮಾಲೀಕರ ಪತ್ತೆಗೆ ಯತ್ನ :
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಹಲಗೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಲೋಕೇಶ್ ಅವರು ಕಾರಿನ ತಪಾಸಣೆ ನಡೆಸಿದಾಗ ಕಾರಿನಲ್ಲಿ ಸಿಂಗಲ್ ಬ್ಯಾರೆಲ್ ಗನ್ ಪತ್ತೆಯಾಗಿದೆ. ಗನ್ ಅನ್ನು ವಶಕ್ಕೆ ಪಡೆದಿರುವ ಪಿ.ಎಸ್.ಐ ಅವರು ಕಾರಿನ ಮಾಲೀಕರ ಪತ್ತೆ ಕಾರ್ಯ ಕೈಗೊಂಡಿದ್ದಾರೆ.ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
