ಮಂಡ್ಯ, ಜು.9- ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಚನ್ನಪಟ್ಟಣ ರಸ್ತೆಯ ಅಂಡನಹಳ್ಳಿ ಗ್ರಾಮದಲ್ಲಿ 10 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ಹಲಗೂರು ವಾಸಿ ಪದನಾಭ ಅವರಿಗೆ ಸೇರಿದ ಜಮೀನಿನ ಸೀಮೆ ಹುಲ್ಲಿನಲ್ಲಿ ಹೆಬ್ಬಾವನ್ನು ಕಂಡ ಜಮೀನಿನ ಮಾಲೀಕರು ಸ್ನೇಹಿತರ ಮೂಲಕ ಮಾಹಿತಿ ನೀಡಿದರು. ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಹಲಗೂರಿನ ವಾಸಿ ಹಾಗೂ ಉರಗ ಪ್ರೇಮಿ ಕೃಷ್ಣ ಅವರು ಸೀಮೆ ಹುಲ್ಲಿನಲ್ಲಿ ಅಡಗಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಸಂರಕ್ಷಿಸಿದರು. ನಂತರ ಅದನ್ನು ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ಅರಣ್ಯ ಪ್ರಾಣಿಗಳ ಓಡಾಟ :
ಅಂಡನಹಳ್ಳಿ ಗ್ರಾಮದ ಸಮೀಪದಲ್ಲಿ ಈ ಹಿಂದೆ ಗ್ರಾನೈಟ್ ಗಣಿಗಾರಿಕೆ ನಡೆಯುತ್ತಿತ್ತು. ಆ ಪ್ರದೇಶದಲ್ಲಿ ಚಿರತೆಗಳು, ಹೆಬ್ಬಾವುಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಗ್ರಾಮಸ್ಥರು ತಿಳಿಸಿದರು.
ನಾವು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದೇವೆ. ಆದರೆ ಯಾರೂ ಸ್ಥಳಕ್ಕೆ ಬಂದಿಲ್ಲ ಎಂದು ಜಮೀನಿನ ಮಾಲೀಕ ಪದನಾಭ ತಿಳಿಸಿದರು.
