ಹಾಸನ(ಸಕಲೇಶಪುರ),ಜು.12- ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಸ್ಫೋಟಗೊಂಡ ಪರಿಣಾಮ ನೂರು ಅಡಿ ಎತ್ತರಕ್ಕೆ ನೀರು ಚಿಮಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಇಂದು ನಡೆದಿದೆ.
ಪೈಪ್ಲೈನ್ ಏಕಾಏಕಿ ಸ್ಫೋಟಗೊಂಡ ವೇಳೆ ಭಾರೀ ಶಬ್ದ ಉಂಟಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಫೋಟದ ಪರಿಣಾಮ ಅಪಾರ ಪ್ರಮಾಣದ ನೀರು ವೇಗವಾಗಿ ಹೊರಬಂದು ಆಕಾಶದತ್ತ ಚಿಮುತ್ತಿರುವ ದೃಶ್ಯ ಕಂಡುಬಂದಿದೆ. ಘಟನಾ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪೈಪ್ಲೈನ್ನಿಂದ ಹೊರಬಂದ ನೀರು ಸಮೀಪದ ತೋಟಗಳು ಮತ್ತು ಕೃಷಿ ಜಮೀನುಗಳಿಗೆ ನುಗ್ಗಿದ್ದು, ನೀರಿನ ರಭಸದಿಂದ ಕೆಲವು ಪ್ರದೇಶಗಳಲ್ಲಿ ಮಣ್ಣು ಕೊಚ್ಚಿ ಹೋಗಿರಬಹುದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಎತ್ತಿನಹೊಳೆ ಯೋಜನೆಯ ಕಾಮಗಾರಿ ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ.
ಈ ಹಂತದಲ್ಲೇ ಪೈಪ್ಲೈನ್ ಸ್ಫೋಟಗೊಂಡಿರುವುದು ಕಾಮಗಾರಿಯ ಗುಣಮಟ್ಟದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯೋಜನೆಯ ವಿವಿಧ ಭಾಗಗಳಲ್ಲಿ ಈ ಹಿಂದೆ ಕೂಡ ಪೈಪ್ಲೈನ್ಗಳಲ್ಲಿ ಸೋರಿಕೆ ಮತ್ತು ತಾಂತ್ರಿಕ ದೋಷಗಳು ಕಂಡುಬಂದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
