ಬೆಂಗಳೂರು, ಆ.2- ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ರಾಜ್ಯದಾದ್ಯಂತ ನಡೆಸಲಾದ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆ ಸುಸೂತ್ರವಾಗಿ ನೆರವೇರಿದೆ.ಒಟ್ಟು 3,991 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಗೆ ರಾಜ್ಯಾದ್ಯಂತ 4,54,532 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 884 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು.
ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಪರೀಕ್ಷೆ ನಡೆದರೆ, ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮಧ್ಯಾಹ್ನ 4ರಿಂದ
ಸಂಜೆ 5.30ರವರೆಗೆ ಪರೀಕ್ಷೆ ನಡೆಯಿತು.ಪರೀಕ್ಷೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ಕೆಇಎ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ವೆಬ್ಕಾಸ್ಟಿಂಗ್, ಸಿಸಿಟಿವಿ ಕ್ಯಾಮೆರಾ ಹಾಗೂ ಜಾಮರ್ಗಳ ಮೂಲಕ ನಿಗಾ ವಹಿಸಲಾಗಿತ್ತು.
8 ಜಿಲ್ಲೆಗಳ ಮೇಲೆ ನಿಗಾ:
ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಕೆಇಎ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿತ್ತು. ಬೆಂಗಳೂರು, ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳ ಮೇಲೆ ಬೆಂಗಳೂರಿನ ಕಮಾಂಡ್ ಸೆಂಟರ್ನಿಂದಲೇ ನಿಗಾ ವಹಿಸಲಾಯಿತು. ಉಳಿದ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷೆಯ ಭದ್ರತೆ ಹಾಗೂ ಮೇಲ್ವಿಚಾರಣೆ ನಡೆಸಲಾಯಿತು.
149 ಕೇಂದ್ರಗಳಲ್ಲಿ ಪರೀಕ್ಷೆ:
ಬೆಂಗಳೂರು ನಗರದಲ್ಲಿ ಬೆಳಗ್ಗೆ 149 ಪರೀಕ್ಷಾ ಕೇಂದ್ರಗಳಲ್ಲಿ 74,942 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ 47 ಕೇಂದ್ರಗಳಲ್ಲಿ 22,369 ಅಭ್ಯರ್ಥಿಗಳು ಪರೀಕ್ಷೆ ಬರೆದರು. ಒಟ್ಟು 97,311 ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಪರೀಕ್ಷೆಗೆ ನೋಂದಾಯಿಸಿದ್ದರು.ಪರೀಕ್ಷೆಯ ಸುಗಮ ನಿರ್ವಹಣೆಗಾಗಿ 196 ಪ್ರಶ್ನೆಪತ್ರಿಕೆ ಪಾಲಕರು, 196 ಜಾಗೃತ ದಳದ ಸಿಬ್ಬಂದಿ, 72 ಮಾರ್ಗಾಧಿಕಾರಿಗಳು, 196 ವಸ್ತ್ರಸಂಹಿತೆ ಅಧಿಕಾರಿಗಳು ಹಾಗೂ 196 ವೀಕ್ಷಕರನ್ನು ನಿಯೋಜಿಸಲಾಗಿತ್ತು.200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿತ್ತು.
ಬೆಳಗ್ಗೆ 7ರಿಂದ ಪರೀಕ್ಷೆ ಆರಂಭವಾಗಿ ಮುಕ್ತಾಯವಾಗುವವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್್ಸ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು.ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಅಭ್ಯರ್ಥಿಗಳ ಮೇಲೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಯಿತು. ಮೊಬೈಲ್, ಬ್ಲೂಟೂತ್ ಸಾಧನ, ಸ್ಮಾರ್ಟ್ವಾಚ್, ವಾಚ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯಲು ಅವಕಾಶ ಇರಲಿಲ್ಲ. ಯಾವುದೇ ರೀತಿಯ ಲೋಹದ ವಸ್ತು, ಆಭರಣ ಹಾಗೂ ವೈಯಕ್ತಿಕ ವಸ್ತುಗಳಿಗೂ ನಿರ್ಬಂಧ ವಿಧಿಸಲಾಗಿತ್ತು.
ಅಭ್ಯರ್ಥಿಗಳು ಉದ್ದ ತೋಳಿನ ಉಡುಪು, ಮುಖ ಅಥವಾ ತಲೆ ಮುಚ್ಚುವ ವಸ್ತ್ರ ಧರಿಸುವಂತಿರಲಿಲ್ಲ. ಮೂಗುತಿ ಹಾಗೂ ಮಂಗಳಸೂತ್ರಕ್ಕೆ ಮಾತ್ರ ವಿನಾಯಿತಿ ನೀಡಲಾಗಿತ್ತು. ಶೂ ಧರಿಸುವುದಕ್ಕೂ ನಿರ್ಬಂಧವಿದ್ದು, ಚಪ್ಪಲಿ ಅಥವಾ ಕಡಿಮೆ ಹಿಮ್ಮಡಿಯ ಸ್ಯಾಂಡಲ್ ಧರಿಸಿ ಬರುವಂತೆ ಸೂಚಿಸಲಾಗಿತ್ತು.
ಪರೀಕ್ಷೆ ಆರಂಭಕ್ಕೂ ಎರಡು ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಕೇಂದ್ರಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. ಪರೀಕ್ಷೆ ಆರಂಭಕ್ಕೂ 30 ನಿಮಿಷ ಮುಂಚಿತವಾಗಿ ಕೇಂದ್ರದೊಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು.ವಿಶೇಷ ಚೇತನ ಅಭ್ಯರ್ಥಿಗಳಲ್ಲಿ ಶ್ರವಣ ಸಾಧನ ಅಥವಾ ಕೋಕ್ಲಿಯರ್ ಇಂಪ್ಲಾಂಟ್ ಬಳಸುವವರು ಯುಡಿಐಡಿ ಕಾರ್ಡ್ ಹಾಗೂ ವೈದ್ಯಕೀಯ ಪ್ರಮಾಣಪತ್ರದೊಂದಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಪರಿಶೀಲನೆ ಬಳಿಕ ಅವರಿಗೆ ಶ್ರವಣ ಸಾಧನದೊಂದಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು.ಪರೀಕ್ಷೆಯನ್ನು ಪಾರದರ್ಶಕವಾಗಿ ಹಾಗೂ ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ ನಡೆಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು .
ಅಕ್ರಮವಾಗದಂತೆ ಎಚ್ಚರಿಕೆ:
ಕೆಇಎ ನಿರ್ದೇಶಕ ಪ್ರಸನ್ನ ಅವರು ಪರಿಶೀಲನೆ ನಡೆಸಿ ಮಾತಾನಾಡಿ 3991 ಹುದ್ದೆಗಳಿಗಾಗಿ ಪರೀಕ್ಷ ನಡೆಸಲಾಗುತ್ತ ಇದೆ. ಎಷ್ಟು ಜನ ಪರೀಕ್ಷೆ ಬರೆಯಲು ಬರ್ತಾರೆ ಅನ್ನೋದರ ಮಾನಿಟರ್ ಮಾಡಲಾಗ್ತಾ ಇದೆ. ಎಲ್ಲಾ ಪರೀಕ್ಷಾ ಕೇಂದ್ರಕ್ಕೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಸಿಸಿಟಿವಿಗಳನ್ನು ಕೂಡ ಅಳವಡಿಕೆ ಮಾಡಲಾಗಿದೆ. ಕಾಲೇಜುಗಳಲ್ಲಿ ಕೂಡ ಮಾನಿಟರಿಂಗ್ ಮಾಡಲಾಗಿದೆ. ನಾವು ಇಲ್ಲಿ ಬೆಂಗಳೂರಿನ ಕೇಂದ್ರಗಳ ಮಾನಿಟರ್ ಮಾಡ್ತಾ ಇದ್ದೇವೆ. ಕಲಬುರಗಿ ಸೇರಿದಂತೆ ಸೂಕ್ಷ್ಮ ಕೇಂದ್ರಗಳ ಮಾನಿಟರಿಂಗ್ ಬೆಂಗಳೂರಲ್ಲಿ ಆಗುತಿದೆಯಾವುದೇ ಅಕ್ರಮ ಆಗದಂತೆ ಎಚ್ಚರಿಕೆಯನ್ನು ವಹಿಸಲಾಗಿದೆ. ಮಳೆ ಬಂದು ಪರೀಕ್ಷೆಗಳಿಗೆ ಹೋಗಲು ಆಗದೇ ಇರುವಂತಹ ಅಭ್ಯರ್ಥಿಗಳಿಗೆ 10 ದಿನ ಮುಂಚಿತವಾಗಿ ನಾವು ಜಿಲ್ಲೆಗಳು ತಿಳಿಸಿದ್ದೇವೆ/ ಯಾವ ಜಿಲ್ಲೆಯಲ್ಲಿ ಪರೀಕ್ಷೆ ಆಗಲಿದೆ ಎಂದು ಮುಂಚಿತವಾಗಿಯೇ ತಿಳಿಸಲಾಗಿತ್ತು. ಪರೀಕ್ಷಾ ಕೇಂದ್ರಗಳನ್ನು ಮೂರು ದಿನ ಮುಂಚಿತವಾಗಿ ತಿಳಿಸಿದ್ದೇವೆ ಎಂದು ತಿಳಿಸಿದರು.
ಡಿಜಿಪಿ ಭೇಟಿ:
ಇನ್ನು ಪರೀಕ್ಷೆ ಕೇಂದ್ರಗಳಿಗೆ ನೇಮಕಾತಿ ವಿಭಾಗದ ಡಿಜಿಪಿ ಉಮೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ,ಕಳೆದ ಬಾರಿ ಪಿಎಸ್ಐ ಎಕ್ಸಾಂ ಕೆಇಎ ಬಹಳ ಚನ್ನಾಗಿ ನಡೆಸಿತ್ತು. ಹೀಗಾಗಿ ಕಾನ್ಸ್ಟೇಬಲ್ ಎಕ್ಸಾಂ ಕೂಡ ಕೆಇಎಗೆ ನಡೆಸಲು ಹೇಳಿದ್ದೇವೆ. ನಾನು ಬಂದು ಪರೀಶೀಲನೆ ಮಾಡಿದ್ದೇವೆ. ಯಾವುದೇ ರೀತಿ ತೊಂದರೆ ಆಗದಂತೆ ಕ್ರಮ ವಹಿಸಲಾಗುತ್ತಿದೆ. ಎಸ್ಪಿ ಆಫೀಸ್ ಅಲ್ಲಿ ಕೂಡ ಮಾನಿಟರಿಂಗ್ ಮಾಡಲಾಗುತ್ತಿದೆ ಎಂದರು.
55 ಕೇಂದ್ರಗಳಲ್ಲಿ ಪರೀಕ್ಷೆ
ಹುಬ್ಬಳ್ಳಿ, ಆ.2- ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಕಾನ್ಸ್ಟೆಬಲ್ (ಸಿವಿಲ್) ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ಇಂದು ಹುಬ್ಬಳ್ಳಿಯಲ್ಲಿ 24 ಸೇರಿದಂತೆ ಧಾರವಾಡ ಮಹಾನಗರದ 55 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು. ಒಟ್ಟು 19,500 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಧಾರವಾಡದ 31 ಹಾಗೂ ಹುಬ್ಬಳ್ಳಿಯ 24 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ನಕಲು ರಹಿತ ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸುವ ದೃಷ್ಟಿಯಿಂದ ವೀಕ್ಷಕರು, ಉಪ ಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರನ್ನು ನೇಮಕ ಮಾಡಲಾಗಿತ್ತು.
ವಿಶೇಷ ಜಾಗೃತ ದಳದ ಜತೆಗೆ, ವೆಬ್ಕಾಸ್ಟಿಂಗ್ ವೀಕ್ಷಣಾ ತಂಡವನ್ನು ರಚಿಸಲಾಗಿತ್ತು. ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮುನ್ನ ಅಭ್ಯರ್ಥಿಗಳ ವಸ್ತ್ರಸಂಹಿತೆ ಪರಿಶೀಲನೆ ನಡೆಸಲಾಯಿತು. ನೋಡಲ್ ಅಧಿಕಾರಿಗಳು, ಪ್ರಿಸ್ಕಿಂಗ್ ಸಿಬ್ಬಂದಿ, ಕೊಠಡಿ ಮೇಲ್ವಿಚಾರಕರು ಹಾಗೂ ಹೆಚ್ಚುವರಿ ಕೊಠಡಿ ಮೇಲ್ವಿಚಾರಕರು ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ವಹಿಸಿದ್ದರು.
ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿತ್ತು. ಬೆಳಿಗ್ಗೆ 7ರಿಂದ ಮಧ್ಯಾಹ್ನ 1ಗಂಟೆವರೆಗೆ ಈ ವ್ಯಾಪ್ತಿಯಲ್ಲಿರುವ ಜೆರಾಕ್್ಸ, ಕಂಪ್ಯೂಟರ್ ಸೆಂಟರ್, ಕೋಚಿಂಗ್ ಕ್ಲಾಸ್ ಕಾರ್ಯನಿರ್ವಹಿಸದಂತೆ ಆದೇಶ ಹೊರಡಿಸಲಾಗಿತ್ತು. ಜೊತೆಗೆ ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
