ಬೆಂಗಳೂರು,ಆ.11- ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆಯು ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಇದರ ಭಾಗವಾಗಿ ಬೆಂಗಳೂರಿನ ಮತದಾರರ ಪಟ್ಟಿಯಲ್ಲಿದ್ದ ನಟ ಹಾಗೂ ವಿಚಾರವಾದಿ ಪ್ರಕಾಶ್ ರೈ ಅವರ ಹೆಸರನ್ನು ತೆಗೆದು ಹಾಕಲಾಗಿದೆ. ಈ ಕುರಿತು ಸ್ವತಃ ಪ್ರಕಾಶ್ ರೈ ಅವರೇ ತಮ ಇನ್ಸ್ಟಾಗ್ರಾಂ ಮೂಲಕ ಮಾಹಿತಿ ಹಂಚಿಕೊಂಡಿದ್ದು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಮತದಾರರ ಹಕ್ಕು ಹೊಂದಿದ್ದ ಪ್ರಕಾಶ್ ರೈ ಅವರ ಹೆಸರು ಎಸ್ಐಆರ್ ಅಭಿಯಾನದಡಿ ಕೈಬಿಡಲಾಗಿದೆ. ನಾನು ಹುಟ್ಟಿ ಬೆಳೆದ ಕ್ಷೇತ್ರದಿಂದ ಹಾಗೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಮತದಾನ ಮಾಡಿದ್ದ ಕ್ಷೇತ್ರದಿಂದಲೇ ನನ್ನ ಹೆಸರನ್ನು ತೆಗೆದುಹಾಕಲಾಗಿದೆ. ಇದು ಜೋಕ್ ಅಲ್ಲದೆ ಮತ್ತೇನು? ಎಂದು ಇನ್ಸ್ಟಾಗ್ರಾಂ ವೀಡಿಯೋದಲ್ಲಿ ಪ್ರಶ್ನಿಸಿದ್ದಾರೆ.
ನನ್ನ ಮತ ಡಿಲೀಟ್ ಆಗಿದೆ, ಅದನ್ನು ಮರಳಿ ಪಡೆಯಲು ಏನೇನು ಕಾನೂನು ಪ್ರಕ್ರಿಯೆ ಮಾಡಬೇಕೋ ಅದೆಲ್ಲವನ್ನೂ ಮಾಡುತ್ತೇನೆ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆಯೇ ಅವರ ವಿರುದ್ಧ ದೂರು ದಾಖಲಾಗಿತ್ತು.ಪ್ರಕಾಶ್ ರೈ ಅವರು ಬೆಂಗಳೂರಿನ ಶಾಂತಿನಗರ ಮಾತ್ರವಲ್ಲದೆ, ತಮಿಳುನಾಡಿನ ಚೆನ್ನೈ (ವೇಳಚೇರಿ) ಹಾಗೂ ತೆಲಂಗಾಣದ ಸೆರಿಲಿಂಗಪಲ್ಲಿ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲೂ ಹೆಸರು ಹೊಂದಿದ್ದಾರೆಂಬ ಆರೋಪವಿತ್ತು.
2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಈ ಬಗ್ಗೆ ಸಾರ್ವಜನಿಕವಾಗಿ ಮತ್ತು ಚುನಾವಣಾ ಆಯೋಗಕ್ಕೆ ದೂರುಗಳು ಸಲ್ಲಿಕೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾಗಿದ್ದರಿಂದ ಬೆಂಗಳೂರು ನ್ಯಾಯಾಲಯವು ಕಳೆದ ಜೂನ್ ತಿಂಗಳಲ್ಲಿ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಕೂಡ ಹೊರಡಿಸಿತ್ತು. ಬಳಿಕ ಅವರು 2026ರ ಜುಲೈ 10ರಂದು ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದರು.
ಚುನಾವಣಾ ಆಯೋಗವು ಈಗ ಕೈಗೊಂಡಿರುವ ಕಟ್ಟುನಿಟ್ಟಿನ ಎಸ್ಐಆರ್ ಪರಿಷ್ಕರಣೆ ವೇಳೆ ಒಂದಕ್ಕಿಂತ ಹೆಚ್ಚು ಕಡೆ ಮತದಾನದ ಹಕ್ಕು ಹಾಗೂ ಇತರೆ ವಿಳಾಸಗಳ ದೋಷಗಳು ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಕಾನೂನು ಹೋರಾಟ ಹಾಗೂ ಎಸ್ಐಆರ್ ಪರಿಶೀಲನೆಯ ಬಿಸಿ ಈಗ ಸೆಲೆಬ್ರಿಟಿಗಳಿಗೂ ತಟ್ಟಿರುವುದು ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
