ಬೆಂಗಳೂರು,ಸೆ.16-ರಾಜ್ಯದಲ್ಲಿ ಸಮೀಕ್ಷೆ ನಡೆದಿರುವ ಬಂಕ್ ಗಳ ಪೈಕಿ ಶೇ.95ರಷ್ಟರಲ್ಲಿ ಕರಾರುವಕ್ಕಾದ ಪೆಟ್ರೋಲ್, ಡಿಸೇಲ್ ಹಾಕಲಾಗುತ್ತಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿರುವ 5946 ಬಂಕ್ ಗಳ ಪೈಕಿ ಮಾಪನ ಶಾಸ್ತ್ರ ಇಲಾಖೆ 805 ಬಂಕ್ ಗಳಲ್ಲಿ ಪರಿಶೀಲನೆ ನಡೆಸಿದೆ. ಅದರಲ್ಲಿ 768 ಬಂಕ್ ಗಳಲ್ಲಿ ತೈಲದ ಅಳತೆಯಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿದರು. ಅವುಗಳ ಪೈಕಿ 101ಪೆಟ್ರೋಲ್ ಬಂಕ್ಗಳಲ್ಲಿ ಅನುಮತಿಸಬಹುದಾದ ಪರಿಮಾಣಕ್ಕಿಂತಲೂ ಹೆಚ್ಚಿನ ವ್ಯತ್ಯಾಸಗಳು ಕಂಡು ಬಂದ ಹಿನ್ನೆಲೆಯಲ್ಲಿ, ದಂಡ ವಿಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ತೈಲವನ್ನು ಲೀಟರ್ ಮೂಲಕ ಅಳೆಯುವಾಗ ಈ ಬಂಕ್ ಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ನಿಗದಿತ ನಿಖರ ಅಳತೆ ಪತ್ತೆ ಹಚ್ಚಲು ನಮ ಇಲಾಖೆ ಪರಿಶೀಲನೆ ನಡೆಸಿದೆ. ಪೆಟ್ರೋಲ್ ಪೂರೈಕೆ ಗನ್ಗಳಲ್ಲೂ ದೋಷ ಕಂಡುಬಂದಿದ್ದು, 805 ಬಂಕ್ ಗಳಲ್ಲಿ 3071 ಪೆಟ್ರೋಲ್, ಡಿಸೇಲ್ ಹಾಕುವ ನಾಜೋಲ್ ಗಳಿವೆ, ಅವುಗಳಲ್ಲಿ 2618 ನಾಜೋಲ್ ಗಳಲ್ಲಿ ಕಡಿಮೆ ಪ್ರಮಾಣದ ಇಂಧನ ಹಾಕಲಾಗುತ್ತಿದೆ.
ಈ ಬಗೆಗೂ ಕ್ರಮ ಜರುಗಿಸಲಾಗುತ್ತಿದೆ. ನಿಯಮಗಳ ಪ್ರಕಾರ ಈ ವ್ಯತ್ಯಾಸದ ಬಗ್ಗೆ ಗ್ರಾಹಕರು ಇಲಾಖೆಗೆ ದೂರು ನೀಡಬೇಕು ಎಂದು ಅವರು ಹೇಳಿದರು. ಶೇ.95 ರಷ್ಟು ನಾಜಲ್ಗಳಲ್ಲಿ ಸಮರ್ಪಕ ಪೆಟ್ರೋಲ್ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಗ್ರಾಹಕನ ಹಕ್ಕಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಇಲಾಖೆ ಮಾಡಲು ಹೊರಟಿದೆ.
2025ರ ಡಿಸೆಂಬರ್ 18 ರಂದು ಕೇಂದ್ರ ಸರ್ಕಾರ ಹೊರಡಿಸಿದ ಆದೇಶದಂತೆ ಈ ಕೆಲಸ ಮಾಡಲಾಗಿದೆ. ವರ್ಷಕ್ಕೊಮೆ ತೈಲ ಪೂರೈಕೆ ಸಾಧನಗಳ ಪರಿಶೀಲನೆ ಮಾಡಲು ಸೂಚಿಸಿತ್ತು. ಇಲಾಖೆಯಿಂದ ತೈಲ ನಷ್ಟದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಕಳೆದ ಜನವರಿಯಿಂದ ಪರಿಶೀಲನಾ ಕಾರ್ಯವನ್ನು ಕಡ್ಡಾಯ ಮಾಡಲು ಸೂಚಿಸಲಾಗಿದೆ. ಇದರ ಪಾಲನೆಯಾಗಬೇಕಿದೆ ಎಂದು ತಿಳಿಸಿದರು.
ತೈಲ ಕಂಪನಿಗಳ ಮೂಲಕ ಪೆಟ್ರೋಲ್ ಬಂಕ್ ಗಳಿಗೆ ತೈಲ ಪೂರೈಕೆಯಾಗುವ ವ್ಯವಸ್ಥೆಯಲ್ಲಿ ಲೋಪ ಕಂಡುಬಂದಿದ್ದು, ಸರ್ಕಾರಕ್ಕೆ ತೆರಿಗೆ ನಷ್ಟವಾಗುತ್ತಿದೆ. ನಿಖರ ಅಳತೆ ನೀಡದ ಬಂಕ್ಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಕಂಪನಿ ಪರವಾಗಿ ತಂದಿರುವ ನಿಯಮವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಗ್ರಾಹಕರ ಹಣಕ್ಕೆ ಸರಿಯಾದ ತೈಲ ಪೂರೈಸಬೇಕು. ಬಂಕ್ಗಳ ಕ್ಯಾಲಿಬ್ರೇಷನ್ ಹಾಗೂ ಪರಿಶೀಲನಾ ಅವಧಿಯನ್ನು ನಮೂದಿಸಲು ಸೂಚನೆ ನೀಡಲಾಗಿದೆ. ಸೂಕ್ತ ಶುಚಿತ್ವ ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡಲಾಗಿದೆ. ಗ್ರಾಹಕರಿಗೆ ಅನುಮಾನ ಬಂದಾಗ ಪರಿಶೀಲಿಸಲು ಅವಕಾಶವಿದೆ ಹಾಗೂ ಟೋಲ್ ಫ್ರೀ ದೂರವಾಣಿ ಸಂಖ್ಯೆ ಮೂಲಕ ದೂರು ದಾಖಲಿಸಬಹುದು ಎಂದು ತಿಳಿಸಿದರು.
