ಘಾಜಿಯಾಬಾದ್ , ಮಾ.25: ಪಾಕಿಸ್ತಾನ ಸಂಪರ್ಕ ಹೊಂದಿರುವ ಗೂಢಚರ್ಯಾ ಜಾಲಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪೊಲೀಸರು ಇನ್ನೂ ಮೂವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತರಲ್ಲಿ ಪ್ರಮುಖ ಆರೋಪಿಯಾಗಿರುವ ಸಮೀರ್ ಅಲಿಯಾಸ್ ಶೂಟರ್ ಮೂಲತಃ ಬಿಹಾರದ ಭಾಗಲ್ಪುರ ನಿವಾಸಿಯಾಗಿದ್ದು, ಪ್ರಸ್ತುತ ದೆಹಲಿಯಲ್ಲಿ ವಾಸವಾಗಿದ್ದಾನೆ ಎಂದು ತಿಳಿದುಬಂದಿದೆ.ಇತರ ಇಬ್ಬರು ಬಂಧಿತರನ್ನು ಶಾಮ್ಲಿ ಜಿಲ್ಲೆಯ ಸಮೀರ್ ಹಾಗೂ ಶಾಹಜಹಾನ್ಪುರ ಮೂಲದ ಶಿವರಾಜ್ ಎಂದು ಗುರುತಿಸಲಾಗಿದೆ.
ಶಿವರಾಜ್ ಪ್ರಸ್ತುತ ಘಾಜಿಯಾಬಾದ್ನಲ್ಲಿ ವಾಸಿಸುತ್ತಿದ್ದ ಎಂದು ಟ್ರಾನ್ಸ್ ಹಿಂದೋನ್ ಉಪ ಪೊಲೀಸ್ ಆಯುಕ್ತ ಧವಲ್ ಜಸ್ವಾಲ್ ಅವರು ತಿಳಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ ಆರೋಪಿಗಳನ್ನು ವಿಚಾರಣೆ ನಡೆಸಿರುವುದಾಗಿ ತಿಳಿಸಿದ್ದು ,ಈವರೆಗೆ ಒಟ್ಟು 21 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಆರು ಮಂದಿ ಅಪ್ರಾಪ್ತರೂ ಸೇರಿದ್ದಾರೆ.
ಘಾಜಿಯಾಬಾದ್ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ,ಇತ್ತೀಚೆಗೆ ಮಥುರಾ ಜಿಲ್ಲೆಯ ನಿವಾಸಿ ಮೇರಾ ಠಾಕೂರ್ (28) ಹಾಗೂ ಹರಿಯಾಣದ ಫರಿದಾಬಾದ್ ಜಿಲ್ಲೆಯ ನಿವಾಸಿ (ಮೂಲತಃ ಬಿಹಾರದ ಮುಜಫರ್ಪುರ), ನೌಶಾದ್ ಅಲಿ (20), ಇವರನ್ನು ಬಂಧಿಸಲಾಯಿತು. ಮೂರನೇ ಆರೋಪಿಯಾಗಿ ಒಬ್ಬ ಅಪ್ರಾಪ್ತನನ್ನೂ ಬಂಧಿಸಲಾಗಿದೆ.
ನೌಶಾದ್ ಅಲಿ ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಭದ್ರತಾ ಹಾಗೂ ಪೊಲೀಸ್ ಕೇಂದ್ರಗಳು, ರೈಲು ನಿಲ್ದಾಣಗಳಿಗೆ ಹೋಗಿ ಫೋಟೋ ಹಾಗೂ ವೀಡಿಯೊಗಳನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದನೆಂದು ಆರೋಪಿಸಲಾಗಿದೆ.
ಈ ಗ್ಯಾಂಗ್ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದ ಸರ್ದಾರ್ ಅಲಿಯಾಸ್ ಜೋರಾವರ್ ಸಿಂಗ್ ಎಂಬ ವ್ಯಕ್ತಿಗೆ ರಹಸ್ಯ ಮಾಹಿತಿಯನ್ನು ಕಳುಹಿಸುತ್ತಿತ್ತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಾಜ್ ಕರಣ್ ನಾಯ್ಯರ್ ತಿಳಿಸಿದ್ದಾರೆ.
ಬಂಧಿತರ ಪಟ್ಟಿಯಲ್ಲಿ ಸುಹೇಲ್ ಮಾಲಿಕ್ ಅಲಿಯಾಸ್ ರೋಮಿಯೋ, ಸಾನೆ ಇರಮ್ ಅಲಿಯಾಸ್ ಮೆಹಕ್, ಪ್ರವೀಣ್, ರಾಜ್ ವಾಲ್ಮೀಕಿ, ಶಿವ ವಾಲ್ಮೀಕಿ, ರಿತಿಕ್ ಗಂಗ್ವಾರ್,ಗಣೇಶ್, ವಿವೇಕ್, ಗಗನ್ ಕುಮಾರ್ ಪ್ರಜಾಪತಿ, ದುರ್ಗೇಶ್ ನಿಶಾದ್, ನೌಶಾದ್ ಅಲಿ ಮತ್ತು ಮೇೆರಾ ಸೇರಿದ್ದಾರೆ.
ಕಳೆದ ಮಾರ್ಚ್ 13ರಂದು ಈ ಗೂಢಚರ್ಯಾ ಜಾಲವನ್ನು ಭೇದಿಸಲಾಗಿದೆ. ಮೇೆರಾ ಮತ್ತು ಸುಹೇಲ್ ಹಲವು ವರ್ಷಗಳಿಂದ ಪರಿಚಿತರಾಗಿದ್ದು, ಫೇಸ್ಬುಕ್ ಮೂಲಕ ಸಂಪರ್ಕ ಬೆಳೆಸಿ ಬಳಿಕ ಗ್ಯಾಂಗ್ ಸೇರಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕದಿಂದ ಮೇೆರಾ ಬಂಧಿತಳಾಗಿದ್ದಳು. ತಾನು ಮುಂಬೈ ಪೊಲೀಸರಿಗೆ ಮಾಹಿತಿ ದಾರಿಯಾಗಿದ್ದೆ ಎಂದು ಆಕೆ ಹೇಳಿಕೊಂಡಿದ್ದಾಳೆ.ನೌಶಾದ್ ಅಲಿ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಇತರ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದು, ಪಾಕಿಸ್ತಾನದಲ್ಲಿರುವ ಸರ್ದಾರ್ ಜೊತೆ ನೇರ ಸಂಪರ್ಕದಲ್ಲಿದ್ದನೆಂದು ಹೇಳಿದ್ದಾನೆ.
ಈ ಜಾಲವನ್ನು ಭಾರತದಲ್ಲಿ ಸುಹೇಲ್ ಅಲಿಯಾಸ್ ರೋಮಿಯೋ ಎಂಬಾತ ನಡೆಸುತ್ತಿದ್ದನು. ಆತ ಗ್ಯಾಂಗ್ ಸದಸ್ಯರನ್ನು ನೇಮಿಸಿ, ಪ್ರತಿಯೊಂದು ಮಾಹಿತಿಗೆ 5ಸಾವಿರ ಪಾವತಿಸುತ್ತಿದ್ದನು. ಪಂಜಾಬ್ ಮೂಲಕ ಹಣ ವರ್ಗಾವಣೆ ಕೇಂದ್ರಗಳು ಮತ್ತು ಅಂಗಡಿಗಳ ಖಾತೆಗಳ ಮೂಲಕ ಹಣ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಅಪ್ರಾಪ್ತನು ದೆಹಲಿ ಕ್ಯಾಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಸೌರಶಕ್ತಿ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದನೆಂದು ತಿಳಿದುಬಂದಿದೆ.ಸಂದೇಹ ಮೂಡದಂತೆ ಕಡಿಮೆ ವಿದ್ಯಾಭ್ಯಾಸ ಹೊಂದಿದ ಹಿಂದೂ ಅಪ್ರಾಪ್ತ ಬಾಲಕರನ್ನು ನೇಮಕ ಮಾಡಲು ಗ್ಯಾಂಗ್ಗೆ ಸೂಚಿಸಲಾಗಿತ್ತುಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ನಾಯ್ಯರ್ ಹೇಳಿದ್ದಾರೆ.
