ಬೆಂಗಳೂರು,ಜೂ.15- ಬೆಟ್ಟಿಂಗ್ ಚಟಕ್ಕೆ ಬಿದ್ದ ಆಟೋ ಚಾಲಕನೊಬ್ಬ ಸಂಸಾರವನ್ನೇ ದೂರ ಮಾಡಿ ಕೊಂಡು ಕೊನೆಗೆ ಹೆಂಡ್ತಿಯನ್ನೇ ಬರ್ಬರವಾಗಿ ಕೊಲೆಗೈದಿರೋ ಘಟನೆ ಮಹದೇವಪುರದಲ್ಲಿ ನಡೆದಿದೆ.ಪುಷ್ಪಾಂಜಲಿ ಥಿಯೇಟರ್ ಬಳಿಯ ಉದಯ ನಗರದ ನಿವಾಸಿ ಮಂಜುಳಾ (34) ಕೊಲೆಯಾದ ಹೋಮ್ಗಾರ್ಡ್.
ಆಟೋ ಚಾಲಕನಾಗಿರುವ ಆರೋಪಿ ಪ್ರದೀಪ್ ಸಂಸಾರದ ಜವಬ್ದಾರಿ ಹೊತ್ತಿದ್ದ ಪತ್ನಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಹದಿನೈದು ವರ್ಷಗಳಿಂದ ಮಂಜುಳಾ ಅವರು ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು,ಪ್ರಸ್ತುತ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಆಟೋ ಚಾಲಕನಾಗಿರುವ ಪತಿ ಪ್ರದೀಪ್ ಮನೆ ಹಾಗೂ ಮಕ್ಕಳ ಜವಬ್ದಾರಿ ತೆಗೆದುಕೊಳ್ಳದೇ ಬೆಟ್ಟಿಂಗ್ ಚಟಕ್ಕೆ ಬಿದಿದ್ದನು. ಬೆಟ್ಟಿಂಗ್ ಚಟ ಹಾಗೂ ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದೆ.
ಗಂಡನ ವರ್ತನೆಯಿಂದ ಬೇಸತ್ತ ಮಂಜುಳಾ ಅವರು ಒಂದು ತಿಂಗಳ ಹಿಂದೆ ಆತನನ್ನು ತೊರೆದು ಇಬ್ಬರು ಮಕ್ಕಳೊಂದಿಗೆ ಉದಯನಗರದಲ್ಲೇ ಇರುವ ತಾಯಿ ಮನೆಗೆ ಬಂದು ಹೋಮ್ ಗಾರ್ಡ್ ಕೆಲಸ ಮಾಡುತ್ತಾ ಮಕ್ಕಳನ್ನು ಸಾಕುತ್ತಿದ್ದರು.
ಕಳೆದ ರಾತ್ರಿ 7.30ರ ಸುಮಾರಿನಲ್ಲಿ ಪತ್ನಿ ಮನೆಗೆ ಬಂದ ಪತಿ ಪ್ರದೀಪ್ ಮನೆಗೆ ಬರುವಂತೆ ಒತ್ತಾಯಿಸಿ ಜಗಳವಾಡಿದ್ದಾನೆ.ಮನೆಗೆ ವಾಪಸ್ ಬರಲ್ಲ ಎಂದು ಮಂಜುಳಾ ಹೇಳಿದಾಗ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ವಿಕೋಪಕ್ಕೆ ತಿರುಗಿದೆ.
ಆ ಸಂದರ್ಭದಲ್ಲಿ ಪ್ರದೀಪ್ ಚಾಕು ತೆಗೆದುಕೊಂಡು ಏಕಾಏಕಿ ಮಂಜುಳಾ ಅವರ ಮೇಲೆ ಮನ ಬಂದಂತೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.ಸುದ್ದಿ ತಿಳಿಯುತ್ತಿದ್ದಂತೆ ಮಹದೇವಪುರ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಪತ್ನಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿ ಪ್ರದೀಪ್ನನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.ಹೆಂಡ್ತಿ ಮನೆಗೆ ಹೋಗಿ ಜಗಳ ತೆಗೆದು ಕೊಲೆ ಮಾಡೋ ಮುನ್ನವೇ ಆರೋಪಿ ಪ್ರದೀಪ್ ವಿಡಿಯೋ ಮಾಡಿದ್ದಾನೆ.
ವಿಡಿಯೋದಲ್ಲಿ ಹೇಳಿರುವುದೇನು?
ಬೆಟ್ಟಿಂಗ್ ಚಟಕ್ಕೆ ಯಾರೂ ಬೀಳಬೇಡಿ, ನಾನು ಆನ್ ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದೆ. ಅದ್ರಿಂದ ಇಡೀ ಕುಟುಂಬ ಬೀದಿಗೆ ಬಿತ್ತು. ಹೆಂಡತಿ ,ಮಕ್ಕಳು ದೂರ ಆದ್ರು. ಆದ್ರೂ ಹೆಂಡತಿಯನ್ನು ಜೊತೆಯಾಗಿ ಇರೋಣ ಬಾ ಅಂತ ಕರೀತಿದ್ದೇನೆ. ಅತ್ತೆ ಹಾಗೂ ನಾದಿನಿಯಿಂದ ನನ್ನ ಪತ್ನಿ ಮಂಜುಳಾ ಹಾಳಾಗಿದ್ದಾಳೆ. ಅವಳು ಮನೆಗೆ ಬರದಿದ್ರೆ ಅವಳನ್ನೂ ಸಾಯಿಸ್ತೀನಿ, ನಾನು ಸಾಯ್ತೀನಿ ಎಂದು ಆರೋಪಿ ಪ್ರದೀಪ್ ವಿಡಿಯೋದಲ್ಲಿ ಹೇಳಿದ್ದಾನೆ.
